ಬಿಜೆಪಿಯಲ್ಲಿ ಒಳಬೇಗುದಿ ಸ್ಫೋಟ ; ಸಿಎಂ ಬದಲಿಗೆ ಒತ್ತಡ ! ಯಡಿಯೂರಪ್ಪರಿಂದ ವರಿಷ್ಠರಿಗೇ ಸಡ್ಡು ?!

27-11-20 02:12 pm       Bangalore Correspondent   ಕರ್ನಾಟಕ

ಸಂಪುಟ ವಿಸ್ತರಣೆ ವಿಚಾರ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳ ಮಧ್ಯೆ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ.

ಬೆಂಗಳೂರು, ನವೆಂಬರ್ 27: ಸಂಪುಟ ವಿಸ್ತರಣೆ ವಿಚಾರ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳ ಮಧ್ಯೆ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ. ಸಿಎಂ ಯಡಿಯೂರಪ್ಪ ಬಣ ಮತ್ತು ಬಿ.ಎಲ್ ಸಂತೋಷ್ ಪರವಾಗಿರುವ ಬಣಗಳು ಶೀತಲ ಸಮರದಲ್ಲಿ ತೊಡಗಿದ್ದು, ರಾಜ್ಯ ಸರಕಾರದಲ್ಲಿ ದೊಡ್ಡ ಬದಲಾವಣೆಗೆ ನಾಂದಿಯಾಗುತ್ತಾ ಅನ್ನುವ ಸಂಶಯ ಕೇಳಿಬಂದಿದೆ.

ತಿಕ್ಕಾಟ, ಬಿಕ್ಕಟ್ಟಿನ ಪರಿಣಾಮವಾಗಿಯೇ ಸಿಎಂ ಯಡಿಯೂರಪ್ಪ ಬಿಜೆಪಿ ಸಂಸದರು ಮತ್ತು ಕ್ಯಾಬಿನೆಟ್ ಸಚಿವರನ್ನು ಪ್ರತ್ಯೇಕವಾಗಿ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಸಚಿವರ ಸಭೆ ನಡೆದಿದ್ದು ಇದರಲ್ಲಿ ಸಿಎಂ ಆಪ್ತ ಸಚಿವರು ಪಾಲ್ಗೊಂಡಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನೂ ಕರೆದಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಈಗಲೂ ರಾಜ್ಯ ಬಿಜೆಪಿ ಮಟ್ಟಿಗೆ ತಾನೇ ಪ್ರಭಾವಿ ಎಂಬುದನ್ನು ಹೈಕಮಾಂಡಿಗೆ ರವಾನಿಸಲಿದ್ದಾರೆ.

ಯಡಿಯೂರಪ್ಪ ಏನೇ ಕಸರತ್ತು ನಡೆಸಿದ್ರೂ, ಅದಕ್ಕೊಪ್ಪದ ರಾಷ್ಟ್ರೀಯ ನಾಯಕರು ಮತ್ತು ಸಂತೋಷ್ ಎಂಡ್ ಟೀಂ ರಾಜ್ಯದಲ್ಲಿ ಸಿಎಂ ಬದಲಾಯಿಸಿ ಹೊಸ ಸಂಪುಟ ರಚನೆಗೆ ಸಿದ್ಧತೆ ನಡೆಸಿದ್ದಾರೆ. ಕಳೆದೆರಡು ದಿನಗಳಿಂದ ರಾಜಕೀಯ ವಲಯದಲ್ಲಿ ಈ ವಿಚಾರ ಅಧಿಕೃತ ಎನ್ನುವಂತೆ ಹರಿದಾಡುತ್ತಿದೆ. ಬಿಜೆಪಿ ಪಕ್ಷದ ನಾಯಕರಲ್ಲೇ ಮುಂದಿನ ನಾಯಕ ಯಾರು ಎಂಬ ಬಗ್ಗೆ ಕುತೂಹಲ ಎದ್ದಿದೆ. ಇನ್ನೆರಡೇ ದಿನ ಯಡಿಯೂರಪ್ಪ ಬದಲಾಗಲಿದ್ದಾರೆ ಎಂಬ ಮಾತು ಕೂಡ ಹರಿದಾಡುತ್ತಿದೆ. ಆದರೆ, ಈ ವಿಚಾರ ಅರಿತ ಯಡಿಯೂರಪ್ಪ ಅಂಡ್ ಟೀಮ್ ಪಕ್ಷದ ವರಿಷ್ಠರಿಗೇ ಸಡ್ಡು ಹೊಡೆಯಲು ತಯಾರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಗುರುವಾರ ಸಂಜೆ ಸಿಎಂ ಯಡಿಯೂರಪ್ಪ ತಮ್ಮ ಆಪ್ತ ಸಚಿವರು ಮತ್ತು ಶಾಸಕರ ಜೊತೆ ಗುಪ್ತ ಸಭೆ ನಡೆಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಶಾಸಕರು ಹಾಗೂ ಸಿಎಂ ಪುತ್ರ ವಿಜಯೇಂದ್ರ ಇದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಇವೆಲ್ಲ ಬೆಳವಣಿಗೆ ನಡೆಯುತ್ತಿರುವ ಮಧ್ಯೆಯೇ ವಿವಿಧ ನಿಗಮಗಳಿಗೂ ಸಿಎಂ ಅಧ್ಯಕ್ಷರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಎರಡು ದಿನಗಳಿಂದ ಮೈಸೂರಿನಲ್ಲಿ ಬೀಡು ಬಿಟ್ಟಿದ್ದ ಸಿಎಂ ಯಡಿಯೂರಪ್ಪ ಅಲ್ಲಿ ಶುಕ್ರವಾರ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಪಡಿಸಿ ಬೆಂಗಳೂರಿಗೆ ದೌಡಾಯಿಸಿದ್ದು ನೋಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಸಂಕೇತ ಎನ್ನಲಾಗುತ್ತಿದೆ.

ಅತ್ತ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕಡೆಯಿಂದ ಯಾವುದೇ ಸೂಚನೆ ಬರದಿದ್ದರೂ, ಯಡಿಯೂರಪ್ಪ ಮಾತ್ರ ಎರಡು-ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಕಾರ್ಯ ಮಾಡಲಿದ್ದೇನೆ ಎನ್ನುತ್ತಲೇ ಇದ್ದಾರೆ. ಕೆಲವು ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸುವುದು ಮತ್ತು ಹೊಸತಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ಕೊಟ್ಟು ಮಾತು ಉಳಿಸಿಕೊಳ್ಳಲು ಸಿಎಂ ತಯಾರಾಗಿದ್ದಾರೆ. ಆದರೆ, ಇದ್ಯಾವುದಕ್ಕೂ ಹೈಕಮಾಂಡ್ ಕಡೆಯಿಂದ ಸಹಕಾರ ದೊರೆತಿಲ್ಲ. ಸಿಎಂ ತಂತ್ರಕ್ಕೆ ಸಂತೋಷ್ ಬಣವೇ ಅಡ್ಡಗಾಲು ಹಾಕುತ್ತಿದೆ ಎನ್ನುವ ಭಾವನೆ ಯಡಿಯೂರಪ್ಪ ಬಳಗದಲ್ಲಿದ್ದು, ಇದೇ ರೀತಿಯ ಬಿಕ್ಕಟ್ಟು ಮುಂದುವರಿದರೆ, ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ಸಡ್ಡು ಹೊಡೆದೇ ತನ್ನ ಕೆಲಸ ಮಾಡಿಕೊಳ್ಳಲಿದ್ದಾರೆ ಎನ್ನುವ ಮಾತು ಆಪ್ತರಿಂದ ಕೇಳಿಬರುತ್ತಿದೆ. ಈ ಮೂಲಕ ಯಡಿಯೂರಪ್ಪ ರಾಷ್ಟ್ರೀಯ ನಾಯಕರ ಮುಂದೆ ಒತ್ತಡ ತಂತ್ರವನ್ನೂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಸಿಎಂ ಸ್ಥಾನಕ್ಕೆ ಯಾರು ?

ಯಡಿಯೂರಪ್ಪ ಅವರನ್ನು ಬದಲಿಸಿದ್ದೇ ಆದರೆ, ಸಿಎಂ ಸ್ಥಾನಕ್ಕೇರಲು ಡಜನ್ ಗಟ್ಟಲೆ ಆಕಾಂಕ್ಷಿಗಳು ರೆಡಿಯಾಗಿದ್ದಾರೆ. ಈ ಹಿಂದೆ, ಯಡಿಯೂರಪ್ಪ ಜೈಲಿಗೆ ಹೋದಾಗ ತನ್ನ ನಿಷ್ಠ ಎಂಬ ನೆಲೆಯಲ್ಲಿ ಸದಾನಂದ ಗೌಡರನ್ನು ಕೂರಿಸಿ ಹೋಗಿದ್ದರು. ಅಂಥದ್ದೇ ಪರಿಸ್ಥಿತಿ ಈಗ ಉದ್ಭವ ಆಗಿದ್ದು, ಶತಾಯಗತಾಯ ಎಬ್ಬಿಸುವ ಪ್ರಯತ್ನದಲ್ಲಿ ಮತ್ತೊಂದು ಬಣ ಇದೆ. ಇಂಥ ಸಂದರ್ಭದಲ್ಲಿ ಸಿಎಂ ಆಗಲು ಒಂದ್ಕಡೆ ಅಶ್ವತ್ಥ ನಾರಾಯಣರಿಂದ ತೊಡಗಿ, ಆರ್.ಅಶೋಕ್, ಪ್ರಹ್ಲಾದ ಜೋಷಿ, ಸವದಿ, ಕಾರಜೋಳ ಹೀಗೆ ಹಲವರು ಮೇಲಿನವರ ಎಡತಾಕುತ್ತಿದ್ದಾರೆ. ಇದೇ ವೇಳೆ, ರಮೇಶ್ ಜಾರಕಿಹೊಳಿ ದೆಹಲಿಯಲ್ಲೇ ಬೀಡುಬಿಟ್ಟಿದ್ದು ಮತ್ತೊಂದು ದಾಳ ಉರುಳಿಸಲು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಾಧ್ಯಕ್ಷರೂ ಅವಕಾಶ ಸಿಕ್ಕರೆ ಒಂದು ಕೈ ನೋಡ್ತೀನಿ ಎನ್ನುವ ತರಾತುರಿಯಲ್ಲಿದ್ದಾರೆ. ಆದರೆ, ಇವೇನೇ ಬದಲಾವಣೆ ಇದ್ದರೂ, ಯಡಿಯೂರಪ್ಪ ಅಂಡ್ ಟೀಂ ಒಪ್ಪಿಗೆ ಮೇಲೇ ನಡೆಯಬೇಕು ಅನ್ನೋದಂತೂ ಸತ್ಯ. 

Karnataka Chief Minister B.S. Yediyurappa has again announced an expansion of his cabinet — the fourth time in 11 months — that has been pending since last December.