ಹಳ್ಳಿಹಕ್ಕಿಗೆ ಬಿಗ್ ಶಾಕ್ !! ಎಚ್.ವಿಶ್ವನಾಥ್ ಇನ್ನೂ ‘ಅನರ್ಹ’ ; ಹೈಕೋರ್ಟ್ ತೀರ್ಪು

30-11-20 05:00 pm       Headline Karnataka News Network   ಕರ್ನಾಟಕ

ವಿಶ್ವನಾಥ್ ಶಾಸಕತ್ವವೇ ಅನರ್ಹ ಎನ್ನುವ ನೆಲೆಯಲ್ಲಿ ತೀರ್ಪು ಬಂದಿದೆ. ಇದು ಎಚ್.ವಿಶ್ವನಾಥ್ ಪಾಲಿಗೆ ದೊಡ್ಡ  ಶಾಕ್ ಆಗಿದೆ.

ಬೆಂಗಳೂರು, ನ.30: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ವಿಧಾನಸಭೆಯಿಂದ ನಾಮನಿರ್ದೇಶಿತ ಸದಸ್ಯರಾಗುವ ಮೂಲಕ ವಿಶ್ವನಾಥ್ ಶಾಸಕರಾಗಿದ್ದಾರೆ. ಹಿಂಬಾಗಿಲಿನಿಂದ ಶಾಸಕರಾಗಿರುವುದರಿಂದ ವಿಶ್ವನಾಥ್ ಅನರ್ಹತೆ ಕಳೆದುಕೊಂಡಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.

ಅನರ್ಹರಾದವರು ಹಿಂಬಾಗಿಲಿನಿಂದ ಶಾಸಕರಾಗುವಂತಿಲ್ಲ. ಶಾಸಕರಾಗಿ ಬರಬೇಕಿದ್ದರೆ ಜನರಿಂದ ಅಥವಾ ವಿಧಾನಸಭೆ ಸದಸ್ಯರಿಂದ ಮರು ಆಯ್ಕೆಗಷ್ಟೇ ಅವಕಾಶವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಶಾಸಕರ ಅನರ್ಹತೆ ವಿಚಾರದಲ್ಲಿ ಹೈಕೋರ್ಟಿಗೆ ಅಪೀಲು ಮಾಡಲಾಗಿತ್ತು. ಅರ್ಜಿ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಮಧ್ಯಂತರ ಮೇಲಿನಂತೆ ಆದೇಶ ನೀಡಿದೆ.

ಈಗಾಗ್ಲೇ ಸಚಿವ ಸ್ಥಾನಕ್ಕಾಗಿ ಆರ್.ಶಂಕರ್, ಎಂಟಿಬಿ, ವಿಶ್ವನಾಥ್, ಮುನಿರತ್ನ ಹೀಗೆ ಹಲವರು ಆಕಾಂಕ್ಷಿಗಳಾಗಿ ಲಾಬಿ ನಡೆಸುತ್ತಿದ್ದಾರೆ. ಇದೇ ವೇಳೆ, ವಕೀಲರಾದ ಎಸ್.ಎಲ್ ಹರೀಶ್ ಮತ್ತು ಪ್ರಿನ್ಸ್ ಐಸಾಕ್ ಎಂಎಲ್ಸಿ ಆಗಿರುವ ಶಂಕರ್, ಎಂಟಿಬಿ ಮತ್ತು ವಿಶ್ವನಾಥ್ ಅವರು ಸಚಿವರಾಗದಂತೆ ಹೈಕೋರ್ಟಿಗೆ ಅರ್ಜಿ ಹಾಕಿದ್ದರು.

ಸುಪ್ರೀಂ ಕೋರ್ಟ್ ಪ್ರಕಾರ, ಸ್ಪೀಕರ್ ಆದೇಶ ಮುಖೇನ ಅನರ್ಹಗೊಂಡವರು ಮತ್ತೆ ಜನರಿಂದಲೇ ಆಯ್ಕೆಯಾಗಿ ಬರಬೇಕು ಎಂಬುದಾಗಿತ್ತು. ಆದರೆ, ಇವರು ಹಿಂಬಾಗಿಲ ಮೂಲಕ ಶಾಸಕರಾಗಿದ್ದಾರೆಂದು ಆಕ್ಷೇಪಿಸಿದ್ದರು. ಅರ್ಜಿದಾರರ ಪರ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.

ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಚುನಾಯಿತ ಜನಪ್ರತಿನಿಧಿ ಆಗೋವರೆಗೂ ಶಾಸಕರಾಗುವಂತಿಲ್ಲ. ವಿಶ್ವನಾಥ್ ಸಾಹಿತ್ಯ ಕೋಟಾದಲ್ಲಿ ವಿಧಾನಸಭೆಯಿಂದ ನಾಮನಿರ್ದೇಶನಗೊಂಡಿದ್ದರು. ಆದರೆ, ಎಂಟಿಬಿ ಮತ್ತು ಶಾಸಕರಿಂದ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗಿ ಎಂಎಲ್ಸಿ ಆಗಿದ್ದರು. ಹೀಗಾಗಿ ವಿಶ್ವನಾಥ್ ಶಾಸಕತ್ವವೇ ಅನರ್ಹ ಎನ್ನುವ ನೆಲೆಯಲ್ಲಿ ತೀರ್ಪು ಬಂದಿದೆ. ಇದು ಎಚ್.ವಿಶ್ವನಾಥ್ ಪಾಲಿಗೆ ದೊಡ್ಡ  ಶಾಕ್ ಆಗಿದೆ.

ಕಳೆದ ಬಾರಿ ಕುಮಾರಸ್ವಾಮಿ ಸರಕಾರವನ್ನು ಉರುಳಿಸಿದ್ದಕ್ಕಾಗಿ ಆಗಿನ ಸ್ಪೀಕರ್ ರಮೇಶ್ ಕುಮಾರ್ 17 ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಿದ್ದರು. 

Karnataka High Court on Monday disqualified nominated MLC H Vishwanath who sought to for Minister's post in Karnataka.