ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಿಸಿ ಹಣಕ್ಕೆ ಬೇಡಿಕೆ ; ಸಂಚಲನ ಮೂಡಿಸಿದ ದೂರು !!

01-12-20 09:37 pm       Dilip: Bengaluru Correspondent   ಕರ್ನಾಟಕ

ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎನ್ನುವ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಂಗಳೂರು, ಡಿ.1: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎನ್ನುವ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ವತಃ ಬೆಳ್ಳಂದೂರು ಠಾಣೆಗೆ ಆಗಮಿಸಿರುವ ವರ್ತೂರು ಪ್ರಕಾಶ್​, ಡ್ರೈವರ್​ ಜೊತೆಗೆ ಇದ್ದಾಗ ಕೆಲವರು ನಮ್ಮ ಕಾರಿನಲ್ಲೇ ನಮ್ಮನ್ನು ಅಪಹರಿಸಿದ್ದರು. ಅಲ್ಲದೆ, ನಮ್ಮ ಮೇಲೆ ಹಲ್ಲೆ ನಡೆಸಿ 30 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಆದರೆ, ನಾನು ಹೇಗೋ ಅವರಿಂದ ತಪ್ಪಿಸಿಕೊಂಡೆ ಎಂದು ದೂರಿನಲ್ಲಿ ಹೇಳಿದ್ದಾರೆ. 

ನವೆಂಬರ್​ 25 ರಂದು ನಮ್ಮನ್ನು 7 ರಿಂದ 8 ಜನ ಅಪಹರಿಸಿದ್ದಾರೆ. ಅಪಹರಣದ ನಂತರ ಮೂರು ದಿನ ನನ್ನನ್ನು ಕೂಡಿ ಹಾಕಲಾಗಿತ್ತು. ಆದರೆ, ಎಲ್ಲಿ ಕೂಡಿ ಹಾಕಿದ್ದರು ಎಂಬುದು ಗೊತ್ತಿಲ್ಲ. ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿತ್ತು. ನನ್ನ ಡ್ರೈವರ್​ಗೂ ತುಂಬಾ ಗಾಯಗಳಾಗಿವೆ. 28ರಂದು ನಾನು ಹಾಗೂ ಡ್ರೈವರ್ ತಪ್ಪಿಸಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಕಾರನ್ನು ಕಿಡ್ನಾಪರ್ಸ್ ಇದ್ದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದೀವಿ ಎಂದು ಉಲ್ಲೇಖಿಸಲಾಗಿದೆ.

ವರ್ತೂರು ಪ್ರಕಾಶ್ ಕೊಟ್ಟ ದೂರಿನನ್ವಯ ಬೆಳ್ಳಂದೂರು ಪೊಲೀಸರು ಇದೀಗ ಐಪಿಸಿ ಸೆಕ್ಷನ್ 341 ಅಕ್ರಮ ತಡೆ , 342 ಅಕ್ರಮ ಬಂಧನ, 307 ಕೊಲೆ ಯತ್ನ, 364 ಅಪಹರಣ, 364(A) ಅಪಹರಿಸಿ ಹಣಕ್ಕಾಗಿ ಬೇಡಿಕೆ ಮತ್ತು 324 ಹಲ್ಲೆ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಮಾಜಿ ಸಚಿವರೊಬ್ಬರ ಅಪಹರಣದ ಸುದ್ದಿ ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Shocking Former Karnataka Minister Varthur Prakash alleges of kidnap and extortion, files complaint at Bellandur Police station in Bangalore.