ಬಂದ್ ಹಿನ್ನೆಲೆ ; ರಾಜಧಾನಿಯಲ್ಲಿ ಬಿಗಿ ಭದ್ರತೆ, 15 ಸಾವಿರ ಪೊಲೀಸರ ನಿಯೋಜನೆ, ಬಂದ್ ಗೆ ಬಂದರೆ ಬಂಧನ !!

04-12-20 06:12 pm       Headline Karnataka News Network   ಕರ್ನಾಟಕ

ಕನ್ನಡ ಪರ ಸಂಘಟನೆಗಳು ಡಿ.5ರಂದು ಕರ್ನಾಟಕ ಬಂದ್​ ಗೆ ಕರೆ ನೀಡಿದ್ದು ಬೆಂಗಳೂರಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಬೆಂಗಳೂರು, ಡಿ.4 : ಮರಾಠ ಅಭಿವೃದ್ಧಿ ನಿಗಮವನ್ನು ರಚಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5ರಂದು ಕರ್ನಾಟಕ ಬಂದ್​ ಗೆ ಕರೆ ನೀಡಿದ್ದು ಬೆಂಗಳೂರಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಬೆಂಬಲಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ 15 ಸಾವಿರ ಪೊಲೀಸರನ್ನು ರಾಜಧಾನಿಯಲ್ಲಿ ನಿಯೋಜಿಸಲಾಗಿದೆ. 

ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಹೀಗಾಗಿ, 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಳೆ ಬೆಳಗ್ಗೆಯಿಂದ ಪೊಲೀಸರು ಎಲ್ಲಾ ಕಡೆ ಗಸ್ತು ತಿರುಗಲಿದ್ದಾರೆ. 5 ಜನ ಹೆಚ್ಚುವರಿ ಕಮಿಷನರ್ ದರ್ಜೆಯ ಅಧಿಕಾರಿಗಳು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ. ಇದುವರೆಗೂ ಬೆಂಗಳೂರಿನಲ್ಲಿ ಕರ್ನಾಟಕ ಬಂದ್​ಗೆ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.  

ಮುಂಜಾಗ್ರತಾ ಕ್ರಮವಾಗಿ 35 ಕೆಎಸ್​ಆರ್​ಪಿ, 32 ಸಿಎಆರ್​ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ನಾಳೆ ಯಾವುದೇ ರ್ಯಾಲಿಗೂ ಅವಕಾಶ ನೀಡುವುದಿಲ್ಲ. ಕರ್ನಾಟಕ ಬಂದ್​ಗೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬೆಂಬಲ ಸೂಚಿಸಿಲ್ಲ. ಹೀಗಾಗಿ, ಆ ಬಸ್​ಗಳನ್ನು ತಡೆಯುವ ಹಾಗೆ ಇಲ್ಲ. ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಮಾಮೂಲಿನಂತೆ ಸಂಚರಿಸಲಿವೆ ಎಂದಿದ್ದಾರೆ.

ಇನ್ನು ಆಯಾ ವಿಭಾಗದ ಡಿಸಿಪಿಗಳಿಗೆ ಬಂದ್​ನ‌ ನಿರ್ವಹಣೆಯ ಹೊಣೆ ವಹಿಸಲಾಗಿದೆ. 300 ಪೊಲೀಸ್ ವ್ಯಾನ್​ಗಳು ನಗರದಾದ್ಯಂತ ವಿಶೇಷ ಗಸ್ತು ನಡೆಸಲಿದೆ. ಯಾರೂ ಕೂಡ ಭಯ ಪಡುವ ಅಗತ್ಯ ಇಲ್ಲ. ಜನರು ಎಂದಿನಂತೆ ತಮ್ಮ ಚಟುವಟಿಕೆಗಳನ್ನು ಮಾಡಿಕೊಳ್ಳಬೇಕು. ಯಾರು ಕೂಡ ಪ್ರತಿಭಟನೆಗೆ ಹಾಗೂ ಮೆರವಣಿಗೆಗೆ ಅನುಮತಿ ಕೋರಿಲ್ಲ. ಅಹಿತಕರ ಘಟನೆ ನಡೆದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

Karnataka Bandh Over 15,000 police personnel will be deployed across the city to watch out for protests said Bangalore Commission, Kamal Pant.