ಡಿಕೆ ಯುಗಾರಂಭ ; ಎಲ್ಲಾ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, ಬೆಂಗಳೂರು ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಮೀಸಲು, ಪ್ರತಿ ಪಂಚಾಯತ್‌ನಲ್ಲೂ ಭಾರತ್ ಜೋಡೋ ಯುವಕರ ಸಂಘ ಸ್ಥಾಪನೆ, 10 ಲಕ್ಷ ನೆರವು !

03-06-26 09:19 pm       HK News Staffer   ಕರ್ನಾಟಕ

ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಡಿಕೆ ಶಿವಕುಮಾರ್‌, ಹಲವು ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ. ಈ ಪೈಕಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಬಸ್‌ ಪಾಸ್‌ ತೀರ್ಮಾನ ಪ್ರಕಟಿಸಿದ್ದಾರೆ. ಇಂದು (ಜೂನ್‌ 3-ಬುಧವಾರ) ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬೆಂಗಳೂರು, ಜೂ 03: ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಡಿಕೆ ಶಿವಕುಮಾರ್‌, ಹಲವು ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ. ಈ ಪೈಕಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಬಸ್‌ ಪಾಸ್‌ ತೀರ್ಮಾನ ಪ್ರಕಟಿಸಿದ್ದಾರೆ. ಇಂದು (ಜೂನ್‌ 3-ಬುಧವಾರ) ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ತಮ್ಮ ಮೊದಲ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್‌, ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆಗೆ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಈ ಮೊದಲು ವಿವಿಧ ಮಾದರಿಯ ವಿದ್ಯಾರ್ಥಿಗಳಿಗೆ 1,300 ರೂ.ದಿಂದ 1,500 ರೂ ವಾರ್ಷಿಕ ಬಸ್‌ ಪಾಸ್‌ ದರ ನಿಗದಿಪಡಿಸಲಾಗಿತ್ತು. ಈಗ ಎಲ್ಲಾ ವಿದ್ಯಾರ್ಥಿಗಳು ಉಚಿತ ಬಸ್‌ ಪಾಸ್‌ ಪಡೆಯಲಿದ್ದಾರೆ.

"ಇದು ಯುವಯುಗ. ಕೇವಲ ಹುಡುಗಿಯರಿಗೆ ಉಚಿತ ಬಸ್ ಏಕೆ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದರು. ನಾವು ಎಲ್ಲಾ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೇ ಬಸ್ ಪಾಸ್‌ಗಳನ್ನು ನೀಡಲಿದ್ದೇವೆ. ಇದು ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ" ಎಂದು ಕರ್ನಾಟಕ ಸಿಎಂ ಸ್ಪಷ್ಟಪಡಿಸಿದರು.

ಅದೇ ರೀತಿ "ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನಾವು ಕಂಪನಿಗಳೊಂದಿಗೆ ಮಾತನಾಡಿ ಅವರಿಗೆ ಅಗತ್ಯವಿರುವ ಉದ್ಯೋಗಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತೇವೆ. ಉದ್ಯೋಗಕ್ಕಾಗಿ ಯುವ ಸಮುದಾಯಕ್ಕೆ ಸರ್ಕಾರವೇ ತರಬೇತಿ ನೀಡುತ್ತದೆ" ಎಂದು ಡಿಕೆ ಶಿವಕುಮಾರ್‌ ಇದೇ ವೇಳೆ ಮಾಹಿತಿ ನೀಡಿದರು.

"ಗ್ರಾಮಗಳಲ್ಲಿ ಭಾರತ್ ಜೋಡೋ ಯೂತ್ ಕ್ಲಬ್‌ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಈ ಯುವ ಸಂಘಗಳಿಗೆ ಸರ್ಕಾರ 10 ಲಕ್ಷ ರೂ.ಗಳನ್ನು ನೀಡಲಿದೆ. ಇತರ ಕೆಟ್ಟ ಅಭ್ಯಾಸಗಳಿಗೆ ಆಶ್ರಯಿಸದೆ, ಯುವಕರು ಸಮಾಜ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. 10,000 ಭಾರತ್ ಜೋಡೋ ಕ್ಲಬ್‌ಗಳನ್ನು ರಚಿಸುವುದು ನಮ್ಮ ಗುರಿಯಾಗಿದೆ" ಎಂದು ನೂತನ ಸಿಎಂ ಹೇಳಿದರು.

ಬೆಂಗಳೂರು ನಗರ ಭಾಗದ ರಸ್ತೆಗಳ ಅಭಿವೃದ್ಧಿಗೆ 2,000 ಕೋಟಿ ರೂ. ಮೀಸಲಿಡುವ ತೀರ್ಮಾನವನ್ನೂ, ಡಿಕೆ ಶಿವಕುಮಾರ್‌ ಅವರ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಗ್ರಾಮೀಣ ಭಾಗದ ಅಭಿವೃದ್ಧಿ ಮತ್ತು ರೈತರ ಬದುಕನ್ನು ಹಸನುಗೊಳಿಸುವತ್ತ ಕೆಲಸ ಮಾಡುವುದಾಗಿ ಡಿಕೆ ಶಿವಕುಮಾರ್‌ ಭರವಸೆ ನೀಡಿದರು.