ಖಾತೆ ಹಂಚಿಕೆ ಅಸಮಾಧಾನ ; ತನಗೆ ಸಚಿವ ಸ್ಥಾನವೇ ಬೇಡ ! ರಾಜಿನಾಮೆಗೆ ಮುಂದಾದ ಹಿರಿಯ ಸಚಿವ ರಾಮಲಿಂಗಾರೆಡ್ಡಿ, ಡಿಕೆಶಿ ಅಧಿಕಾರಕ್ಕೇರಿದ ಒಂದೇ ದಿನದಲ್ಲಿ ಭಿನ್ನಸ್ವರ !

04-06-26 07:35 pm       HK News Staffer   ಕರ್ನಾಟಕ

ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬೆನ್ನಲ್ಲೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡವೆಂದು ಹಿರಿಯ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮಧ್ಯಾಹ್ನ ಸಿಎಂ ಡಿಕೆಶಿ ಜೊತೆಗೆ ಮೀಟಿಂಗ್ ಹಾಲ್ ನಲ್ಲಿ ಕೆಲವು ಸಚಿವರು ಮಾತುಕತೆ ಮಾಡಿದ್ದು ಅದರಲ್ಲಿ ರಾಮಲಿಂಗಾರೆಡ್ಡಿ ಅವರೂ ಪಾಲ್ಗೊಂಡಿದ್ದರು. ಸಭೆಯಲ್ಲಿ ಬಿಸಿ ಬಿಸಿ ಮಾತುಕತೆ ಆಗಿದ್ದು ರೆಡ್ಡಿ ಅರ್ಧಕ್ಕೆ ಎದ್ದು ಬಂದಿದ್ದಾರೆ.

ಬೆಂಗಳೂರು, ಜೂ.4: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬೆನ್ನಲ್ಲೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡವೆಂದು ಹಿರಿಯ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮಧ್ಯಾಹ್ನ ಸಿಎಂ ಡಿಕೆಶಿ ಜೊತೆಗೆ ಮೀಟಿಂಗ್ ಹಾಲ್ ನಲ್ಲಿ ಕೆಲವು ಸಚಿವರು ಮಾತುಕತೆ ಮಾಡಿದ್ದು ಅದರಲ್ಲಿ ರಾಮಲಿಂಗಾರೆಡ್ಡಿ ಅವರೂ ಪಾಲ್ಗೊಂಡಿದ್ದರು. ಸಭೆಯಲ್ಲಿ ಬಿಸಿ ಬಿಸಿ ಮಾತುಕತೆ ಆಗಿದ್ದು ರೆಡ್ಡಿ ಅರ್ಧಕ್ಕೆ ಎದ್ದು ಬಂದಿದ್ದಾರೆ. 

ರಾಮಲಿಂಗಾರೆಡ್ಡಿ ಅವರು ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಸಿಟ್ಟಾದ ರಾಮಲಿಂಗಾರೆಡ್ಡಿ ಸಭೆಯಿಂದ ಹೊರಬಂದು ಸಿಟ್ಟು ತೋರಿಸಿಕೊಳ್ಳದಿದ್ದರೂ ನೇರವಾಗಿ ಸಿಎಂ ಕಚೇರಿಯತ್ತ ತೆರಳಿದ್ದಾರೆ. ಇದರಿಂದ ಮಾಧ್ಯಮದವರಿಗೂ ಏನೋ ಎಡವಟ್ಟು ಆದ ಮಾಹಿತಿ ಸೋರಿಕೆಯಾಗಿತ್ತು. ಆನಂತರ, ಕಚೇರಿಗೆ ಬಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಈ ವೇಳೆ, ತನಗೆ ಸಚಿವ ಸ್ಥಾನವೇ ಬೇಡವೆಂದು ಹೇಳಿ ರಾಜೀನಾಮೆ ನೀಡಿದ್ದಾರೆಂಬ ವದಂತಿ ಹರಡಿದೆ. 

2023ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಆಗಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಪಡೆದಿದ್ದರು. ಬಳಿಕ ಮುಖ್ಯಮಂತ್ರಿಯಾದ ನಂತರ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೆ ಕೊಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರಿಗೆ ಮಾತು ಕೊಟ್ಟಿದ್ದರು ಎನ್ನಲಾಗಿದೆ. 

ಆದರೆ ಈಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ನೀಡಿರುವುದು ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಅವರಲ್ಲಿ ಬೇಸರ ಮೂಡಿಸಿದೆ. ನನಗೆ ಸಚಿವ ಸ್ಥಾನವೇ ಬೇಡ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ. ಅವರನ್ನು ಸಮಾಧಾನಿಸಿ ಮನವೊಲಿಸಲು ಡಿ.ಕೆ. ಶಿವಕುಮಾರ್ ಪಯತ್ನ ನಡೆಸಿದ್ದಾರೆ. ಆದರೆ ಅದಕ್ಕೆ ಒಪ್ಪದ ಸಚಿವ ರಾಮಲಿಂಗಾರೆಡ್ಡಿ  ಅಸಮಾಧಾನದಲ್ಲಿ ಹೊರ ನಡೆದಿದ್ದಾರೆ.