Jnanendra Kumar IAS Arrest: ಪಶುವೈದ್ಯರ ನೇಮಕಾತಿ ಪ್ರಕರಣ ; ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಸಿಐಡಿ ಬಲೆಗೆ, ಅಭ್ಯರ್ಥಿಗಳಿಂದ ಹಣ ಪಡೆದು ಒಎಂಆರ್ ಶೀಟ್ ತಿದ್ದುಪಡಿ ಆರೋಪ 

30-08-26 05:13 pm       HK News Staffer   ಕರ್ನಾಟಕ

ಕೆಪಿಎಸ್ಸಿ ನಡೆಸಿದ ಪಶುವೈದ್ಯರ ನೇಮಕಾತಿ ಹಗರಣ ತೀವ್ರ ಸ್ವರೂಪ ಪಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು, ಆ.30: ಕೆಪಿಎಸ್ಸಿ ನಡೆಸಿದ ಪಶುವೈದ್ಯರ ನೇಮಕಾತಿ ಹಗರಣ ತೀವ್ರ ಸ್ವರೂಪ ಪಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. 

ಜ್ಞಾನೇಂದ್ರ ಕುಮಾರ್ 2016ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಫೆಬ್ರವರಿ 2024 ರಿಂದ ಮಾರ್ಚ್ 2026ರ ಅವಧಿಯಲ್ಲಿ KPSC ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಎಂಎಸ್‌ಎಂಇ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್ ಉತ್ತರ ಪತ್ರಿಕೆಗಳನ್ನು ತಿದ್ದಿ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪವಿದೆ. ಇಬ್ಬರು ಅಭ್ಯರ್ಥಿಗಳಿಂದ ಸುಮಾರು ₹1.1 ಕೋಟಿ ಲಂಚ ಪಡೆದು ಒಎಂಆರ್ ಶೀಟ್ ಮ್ಯಾನಿಪುಲೇಟ್ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. 

ಹಗರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಜಾರಿ ನಿರ್ದೇಶನಾಲಯ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರು ಮತ್ತು ಬರೇಲಿ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಇಡಿ ದಾಳಿಯ ಬೆನ್ನಲ್ಲೇ ಅವರು ದಿಢೀರ್ ನಾಪತ್ತೆಯಾಗಿದ್ದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಪ್ರತ್ಯಕ್ಷರಾದ ಅಧಿಕಾರಿಯನ್ನು ಸಿಐಡಿ ಸತತ ಎರಡು ದಿನಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿತು. ವಿಚಾರಣೆಯಲ್ಲಿ ತನಿಖೆಗೆ ಸರಿಯಾಗಿ ಸಹಕರಿಸದ ಕಾರಣ ಸದ್ಯ ಅವರನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪ್ರಕರಣದ ಮತ್ತಷ್ಟು ಆಳವಾದ ಮಾಹಿತಿ ಹಾಗೂ ಇತರ ಪ್ರಭಾವಿಗಳ ಪಾತ್ರವನ್ನು ಬಯಲಿಗೆಳೆಯಲು ಕಸ್ಟಡಿಗೆ ಪಡೆಯಲಿದ್ದಾರೆ. 

ಪ್ರಕರಣದಲ್ಲಿ ಇನ್ನೊಂದೆಡೆ ಇಡಿ ಅಧಿಕಾರಿಗಳು, ಕೆಪಿಎಎಸ್ ಮಾಜಿ ಅಧ್ಯಕ್ಷ, ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.