ಡಿಜೆ ಹಳ್ಳಿ ಗಲಭೆ: ಆರೋಪಿಗಳ ವಿರುದ್ಧ ಎಸ್ ಸಿ / ಎಸ್ಟಿ ಕಾಯ್ದೆಯಡಿಯಲ್ಲಿ ಎಫ್ಐಆರ್

16-08-20 12:30 pm       Headline Karnataka News Network   ಕರ್ನಾಟಕ

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಎಸ್ ಸಿ / ಎಸ್ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ಹಾಕಲಾಗಿದೆ.

ಬೆಂಗಳೂರು, ಆಗಸ್ಟ್ 16: ದೇವರಜೀವನಹಳ್ಳಿ(ಡಿಜೆ ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ(ಕೆಜಿ ಹಳ್ಳಿ) ಹಾಗೂ ಕಾವಲ್ ಬೈರಸಂದ್ರ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಎಸ್ ಸಿ/ ಎಸ್ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ಹಿಂದುಳಿದ ಸಮುದಾಯದ ಡಿಜೆ ಹಳ್ಳಿ ನಿವಾಸಿ ದೂರು ಹಿನ್ನೆಲೆ SC-ST ಕಾಯ್ದೆ ಅಡಿ ಎಫ್ಐಆರ್ ಹಾಕಲಾಗಿದೆ ಎಂದು ಡಿಜೆ ಹಳ್ಳಿ ಠಾಣಾಧಿಕಾರಿ ಹೇಳಿದ್ದಾರೆ.

ಗಲಭೆ ನಡೆದ ದಿನ 500ರಿಂದ 600ಮಂದಿ ಅವಾಚ್ಯ ಶಬ್ಧಗಳಿಂದ ಬೈಯುತ್ತಾ, ರಾಡ್ ಗಳಿಂದ ಮನೆಯ ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಸುಮಾರು 200 ರಿಂದ 300 ಮಂದಿ ಮನೆ ಒಳಗೆ ನುಗ್ಗಿ ಟಿವಿ, ಸೋಫಾ ಸೇರಿದಂತೆ ಇತರೆ ವಸ್ತುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. 5 ಲಕ್ಷ ನಗದು ಸೇರಿದಂತೆ ಚಿನ್ನಾಭರಣಗಳನ್ನ ದೋಚಿದ್ದಾರೆ.

ಮನೆ ಒಳಗಡೆ ಗ್ಯಾಸ್ ಹಚ್ಚಿದ್ದರಿಂದ ಮನೆಯ ಗೋಡೆ ಕ್ರ್ಯಾಕ್ ಬಿಟ್ಟಿವೆ, ಮನೆ ಮುಂದೆ ನಿಲ್ಲಿಸಿದ್ದ ಸ್ಯಾಂಟ್ರೋ ಕಾರಿಗೂ ಬೆಂಕಿ ಹಚ್ಚಿದ್ದಾರೆ. ನಮಗೆ ಈಗ ವಾಸಿಸಲು ಬೇರೆ ಮನೆ ಇಲ್ಲ, ನಾವೆಲ್ಲ ಪರಿಶಿಷ್ಟ ಜಾತಿ ಭೋವಿ ಸಮುದಾಯಕ್ಕೆ ಸೇರಿದ್ದೇವೆ. ಒಟ್ಟಾರೆ 50ರಿಂದ 60 ಲಕ್ಷ ರೂ. ನಷ್ಟು ಆಸ್ತಿ ಹಾನಿಯಾಗಿದೆ ಎಂದು ಡಿಜೆ ಹಳ್ಳಿ ನಿವಾಸಿ ಪವನ್ ಕುಮಾರ್ ದೂರು ನೀಡಿದ್ದರು. ದೂರಿನನ್ವಯ ಡಿಜೆ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.