ಜಾರಕಿಹೊಳಿ ಸಿಡಿ ಬ್ಲಾಸ್ಟ್ ಮಾಡಿದ್ದ ಕಲ್ಲಹಳ್ಳಿ ಯು ಟರ್ನ್ !! ದೂರು ವಾಪಸ್ ಪಡೆದು ಸರಕಾರದ ಅಂಗಳಕ್ಕೆ ಚೆಂಡು !

07-03-21 04:29 pm       Headline Karnataka News Network   ಕರ್ನಾಟಕ

ಸಿಡಿ ಸ್ಫೋಟಿಸಿ ಸಚಿವ ರಮೇಶ್ ಜಾರಕಿಹೊಳಿಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಉಲ್ಟಾ ಹೊಡೆದಿದ್ದಾರೆ.

ಬೆಂಗಳೂರು, ಮಾ.7 : ಸಿಡಿ ಸ್ಫೋಟಿಸಿ ರಾಜ್ಯದ ಬಿಜೆಪಿ ಸರಕಾರ ಮತ್ತು ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಉಲ್ಟಾ ಹೊಡೆದಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಗೆ ನೀಡಿದ್ದ ದೂರನ್ನು ವಾಪಸ್ ಪಡೆದಿದ್ದಾರೆ. 

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಲ್ಲಹಳ್ಳಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೂರು ನೀಡಿದವರು ₹5 ಕೋಟಿಗೆ ಡೀಲ್ ಆಗಿದ್ದಾರೆ ಎಂದಿದ್ದರು. ಹೆಚ್‌ಡಿಕೆ ಹೇಳಿಕೆಯಿಂದ ರಾಜ್ಯದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಮಾಹಿತಿ ನೀಡಿದ ನನ್ನ ವಿರುದ್ಧವೇ ಎಚ್​ಡಿಕೆ ಆರೋಪ ಮಾಡಿದ್ದರು. ನನಗೆ ಸಿಕ್ಕ ಮಾಹಿತಿ ಆಧರಿಸಿ ನಾನು ದೂರು ಕೊಟ್ಟಿದ್ದೆ. ತನಿಖೆ ಮಾಡುವಂತೆ ಹೇಳಿದ್ದೆ. ಇಂಥ ಸಂದರ್ಭದಲ್ಲಿ ನನ್ನ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಕುಮಾರಣ್ಣ ಈ ಹೇಳಿಕೆ ನೀಡಿದ್ದಾರೆ. ನನ್ನ ಮನಸ್ಸಿಗೆ ಆಘಾತವಾಗಿದೆ. ಹೀಗಾಗಿ ಬೇಸರವಾಗಿ ದೂರು ವಾಪಸ್ ಪಡೆಯುತ್ತಿದ್ದೇನೆ’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ಇದಕ್ಕೂ ಮೊದಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಲ್ಲಹಳ್ಳಿ ಪರ ವಕೀಲ ಕುಮಾರ್ ಪಾಟೀಲ್, ‘ದಿನೇಶ ಕಲ್ಲಹಳ್ಳಿ ಮೇಲೆ ಯಾವುದೇ ಒತ್ತಡ ಇಲ್ಲ. ಕಾಣದ ಕೈಗಳ ಒತ್ತಡವೂ ಇಲ್ಲ. ಕ್ರಿಮಿನಲ್ ಪ್ರಕರಣ ಇದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ದೂರುದಾರರನ್ನು ಬರಲು ಹೇಳಿದ್ದಾರೆ. ಕಲ್ಲಹಳ್ಳಿ ಬಂದ ಮೇಲೆ ಪ್ರೊಸೀಜರ್ ಪ್ರಕಾರ ವಿತ್​ಡ್ರಾ ಆಗಲಿದೆ ಎಂದಿದ್ದರು. 

ಕುಮಾರಣ್ಣ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ ! 

‘ನಾನು ಆರಂಭಿಸಿದ ಹಲವು ಹೋರಾಟಗಳ ತನಿಖೆಯನ್ನು ರಾಜ್ಯ, ರಾಷ್ಟ್ರ ಮಟ್ಟದ ತನಿಖಾ ಏಜೆನ್ಸಿಗಗಳು ನಡೆಸುತ್ತಿವೆ. ಅಂಥದ್ದರಲ್ಲಿ ಮಾಹಿತಿ ನೀಡಿದ ನನ್ನ ಬಾಯಿ ಮುಚ್ಚಿಸುವ ಕೆಲಸವನ್ನು ಕುಮಾರಣ್ಣ ಮಾಡಿದ್ದಾರೆ. ನನ್ನ ಬಳಿಯಿದ್ದ ಮಾಹಿತಿ ಆಧರಿಸಿ ದೂರು ನೀಡಿದ್ದೆ. ತನಿಖೆ ಮಾಡಿ ಎಂದು ಪೊಲೀಸರನ್ನು ವಿನಂತಿಸಿದ್ದೆ. ಇಂಥ ಸಂದರ್ಭದಲ್ಲಿ ನನ್ನ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಹೊರಬಿದ್ದ ಹೇಳಕೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ’ ಎಂದು ದಿನೇಶ್ ಹೇಳಿದ್ದಾರೆ. 

‘ರಮೇಶ್​ ಜಾರಕಿಹೊಳಿ ಸಚಿವ ಸ್ಥಾನ ಹೋಗಲಿ ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಅನ್ನೋದೊಂದೇ ನನಗೆ ಉದ್ದೇಶವಾಗಿತ್ತು. ಸಚಿವ ಸ್ಥಾನದಿಂದ ಕೆಳಗಿಳಿಸೋದೇ ಉದ್ದೇಶವಾಗಿದ್ದರೆ ರಮೇಶ್ ಜಾರಕಿಹೊಳಿ ಜೊತೆಗೆ ಡೀಲ್ ಮಾಡಿಕೊಳ್ತಿದ್ದೆ. ‘ನಾನು ದೊಡ್ಡವರ ಜೊತೆಗೆ ಇದ್ದೀನಿ’ ಅಂತ ಕುಮಾರಣ್ಣ ಹೇಳಿದ್ದಾರೆ. ಅದನ್ನು ಅವರು ಪ್ರೂವ್ ಮಾಡಲಿ ಎಂದು ದಿನೇಶ್ ಸವಾಲು ಹಾಕಿದರು.

ನನಗೂ ಆತ್ಮಸಾಕ್ಷಿಯಿದೆ. ನಾನು ಕೊಟ್ಟಿರುವುದು ಬರೀ ದೂರು, ತನಿಖೆ ಮಾಡಿ, ಸತ್ಯ ಇದ್ದರೆ ಸತ್ಯ ಎನ್ನಿ. ಸುಳ್ಳಿದ್ದರೆ ಸುಳ್ಳು ಎನ್ನಿ. ನಾನು ಯಾರಿಗೂ ಮಾನಹಾನಿ ಆಗುವಂತೆ ಮಾಡಿಲ್ಲ. ಕಾನೂನು ಹೋರಾಟ ಮಾಡಲು ನಾನು ಸಹ ಸಜ್ಜಾಗಿದ್ದೇನೆ. ದಾಖಲೆಗಳನ್ನಿಟ್ಟುಕೊಂಡೇ ಹೋರಾಟಕ್ಕೆ ಮುಂದಾಗಿದ್ದೇನೆ. ಆರೋಪ ನಿಜವೋ-ಸುಳ್ಳೋ ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸಬೇಕು’ ಎಂದು ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದರು. 

ಬಿಜೆಪಿ ಸರಕಾರದ ಅಂಗಳಕ್ಕೆ ಚೆಂಡು ! 

ದೂರು ವಾಪಸ್ ಪಡೆದರೂ, ಜಾರಕಿಹೊಳಿ ಕಾಣಿಸಿಕೊಂಡಿದ್ದ ಸಿಡಿಯ ವಿಚಾರ ಮಾಧ್ಯಮಗಳಲ್ಲಿ ಬಂದು ಚರ್ಚೆಯ ವಸ್ತುವಾಗಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಇಂಥ ಸಂದರ್ಭದಲ್ಲಿ ಕಲ್ಲಹಳ್ಳಿ ದೂರು ವಾಪಸ್ ಪಡೆದರೂ, ಸಿಡಿ ಪ್ರಕರಣವನ್ನು ಮುಚ್ಚಿ ಹಾಕಲು ಬರಲ್ಲ. ತನಿಖೆಯಂತೂ ಮಾಡಲೇಬೇಕು. ಈ ಮೂಲಕ ಕಲ್ಲಹಳ್ಳಿ ದಿಢೀರ್ ದೂರು ವಾಪಸ್ ಪಡೆದು ಕೈ ಸುಡುತ್ತಿದ್ದ ಚೆಂಡನ್ನು ಬಿಜೆಪಿ ಸರಕಾರದ ಅಂಗಳಕ್ಕೆ ಎಸೆದಿದ್ದಾರೆ. ಬಿಜೆಪಿ ಸರಕಾರ ಏನೇ ಮಾಡಿದ್ರೂ ಅದರ ಬಿಸಿ ಅದಕ್ಕೇ ತಟ್ಟುತ್ತದೆ ಎಂಬ ರಾಜಕೀಯ ಲೆಕ್ಕಾಚಾರವೂ ಇದರ ಹಿಂದಿದೆ.

Dinesh Kallahalli, the activist who filed a complaint against former Karnataka minister Ramesh Jarkiholi in the alleged sex-for-job scam has now taken back his complaint given to the police station.