ಗಣೇಶ ಚತುರ್ಥಿಯಂದೇ ತೆರೆದುಕೊಳ್ಳಲಿದೆ ನಿತ್ಯಾನಂದನ ಕೈಲಾಸ, ಹೊಸ ಕರೆನ್ಸಿ !

21-08-20 11:32 am       Headline Karnataka News Network   ಕರ್ನಾಟಕ

ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಈಗ ಹೊಸ ಅವತಾರಕ್ಕೆ ರೆಡಿಯಾಗಿದ್ದಾನೆ. ಗಣೇಶ ಚತುರ್ಥಿ ದಿವಸ ಆಗಸ್ಟ್ 22ರಂದು ಹೊಸ ಕರೆನ್ಸಿಯನ್ನು ಜಾರಿಗೆ ತರಲಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಬೆಂಗಳೂರು, ಆಗಸ್ಟ್ 20: ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಈಗ ಹೊಸ ಅವತಾರಕ್ಕೆ ರೆಡಿಯಾಗಿದ್ದಾನೆ. ಕಳೆದ ವರ್ಷ ದಿಢೀರ್ ಆಗಿ ನಾಪತ್ತೆಯಾಗಿದ್ದ ರೇಪ್ ಆರೋಪಿ ನಿತ್ಯಾನಂದ ಈಗ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದು, ತನ್ನ ಹೊಸ ಲೋಕದ ಬಗ್ಗೆ ಹೇಳಿಕೊಂಡಿದ್ದಾನೆ.

ತಾನು ಹೊಸತೊಂದು ಲೋಕ ಸೃಷ್ಟಿಸಿದ್ದು ಆ ದೇಶಕ್ಕೆ ಕೈಲಾಸ ಎನ್ನುವ ಹೆಸರಿಟ್ಟಿದ್ದೇನೆ. ಆ ದೇಶಕ್ಕೊಂದು ಬೇರೆಯದ್ದೇ ಆದ ಕರೆನ್ಸಿಯನ್ನೂ ಜಾರಿಗೆ ತರುತ್ತೇನೆ. ಅದು ಕೈಲಾಸದ ರಿಸರ್ವ್ ಬ್ಯಾಂಕ್ ಆಗಿರಲಿದ್ದು ವ್ಯಾಟಿಕನ್ ಬ್ಯಾಂಕಿನ ಮಾದರಿಯಲ್ಲೇ ಇರಲಿದೆ. ಈ ಹೊಸ ಕರೆನ್ಸಿಯನ್ನು ಗಣೇಶ ಚತುರ್ಥಿ ದಿವಸ ಆಗಸ್ಟ್ 22ರಂದು ಜಾರಿಗೆ ತರಲಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಹೊಸ ಕರೆನ್ಸಿ ಜಾರಿಗೆ ತರುವುದಕ್ಕಾಗಿ ಆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹೊಸ ಕರೆನ್ಸಿ ಮತ್ತು ಬ್ಯಾಂಕ್ ಸ್ಥಾಪನೆ ಎಲ್ಲವೂ ಕಾನೂನು ರೀತ್ಯ ಆಗಲಿದ್ದು, ಅದಕ್ಕಾಗಿ 300 ಪುಟಗಳ ಆರ್ಥಿಕ ಮಾಹಿತಿಗಳುಳ್ಳ ದಾಖಲೆಯನ್ನು ರೆಡಿ ಮಾಡಿದ್ದೇನೆ. ಇತರೇ ದೇಶಗಳ ಜೊತೆ ಹೇಗೆ ಕರೆನ್ಸಿ ವ್ಯವಹರಿಸಲಿದೆ ಎನ್ನುವುದಕ್ಕೆ ಪ್ರತ್ಯೇಕ ಪಾಲಿಸಿಗಳನ್ನು ಹೊಂದಿದ್ದೇನೆ ಎಂದಿರುವ ನಿತ್ಯಾನಂದ, ಕೊರೊನಾ ಸೋಂಕು ಹರಡುವ ಮುನ್ನವೇ ನಾನು ನಿಗೂಢ ಜಾಗದಲ್ಲಿ ಹೊಸ ದೇಶದ ಸೃಷ್ಟಿಯಲ್ಲಿ ತೊಡಗಿದ್ದೆ. ಅದಕ್ಕಾಗಿ ಭಕ್ತರಿಂದ ಪ್ರತ್ಯೇಕವಾಗಿ ಇದ್ದೇನೆ ಎಂದು ಹೇಳಿದ್ದಾಗ ಕೆಲವರು ನಕ್ಕಿದ್ದರು. ಕುಹಕದ ಮಾತಾಡಿದ್ದರು. ಆದರೆ, ಈಗ ಎಲ್ಲರೂ ಕ್ವಾರಂಟೈನ್, ಐಸೋಲೇಶನ್, ಅಂತರ ಕಾಯ್ದುಕೊಳ್ಳುವ ಮಂತ್ರ ಜಪಿಸುತ್ತಿದ್ದಾರೆ. ಆ ಪರಶಿವನೇ ನಮ್ಮನ್ನು ಕಾಪಾಡಬೇಕು. ಅದು ದೇವನ ಶಕ್ತಿ ಎಂದು ಹೇಳಿದ್ದಾನೆ.

ಕೈಲಾಸ ದೇಶಕ್ಕೆ ಯಾವುದೇ ಗಡಿಗಳ ತಂಟೆ ಇರುವುದಿಲ್ಲ. ಜಗತ್ತಿನಲ್ಲಿ ಅನಾಥವಾಗಿರುವ ಹಿಂದುಗಳೆಲ್ಲ ಸೇರಿ ಈ ದೇಶವನ್ನು ನಿರ್ಮಿಸಿದ್ದಾರೆ. ತಮ್ಮ ದೇಶಗಳಲ್ಲಿ ಹಿಂದುಯಿಸಂನ್ನು ಪಾಲಿಸಲಾಗದೆ ಹೊರಬಂದವರು ಈ ದೇಶದಲ್ಲಿ ಇರಲಿದ್ದಾರೆ ಎಂದಿರುವ ನಿತ್ಯಾನಂದ ಈ ದೇಶ ಎಲ್ಲಿದೆ ಎನ್ನುವುದನ್ನು ಹೇಳಿಕೊಂಡಿಲ್ಲ. Kailasa.org  ಎನ್ನುವ ಹೆಸರಿನಲ್ಲಿ ವೆಬ್ ಸೈಟ್ ಹಾಗೂ Nithyanandapedia  ಎನ್ನುವ ಹೆಸರಲ್ಲಿ ವಿಕಿಪೀಡಿಯಾ ಪೇಜ್ ಗಳನ್ನು ಹೊಂದಿದ್ದು, ತನ್ನ ವಿಚಾರಗಳನ್ನು ಪ್ರಕಟಿಸಲು ವೇದಿಕೆಯಾಗಿ ಮಾಡಿಕೊಂಡಿದ್ದಾನೆ.

ಅಂದಹಾಗೆ, 2010ರ ಚಿತ್ರನಟಿಯ ರೇಪ್ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದನ ಜಾಮೀನನ್ನು ಕಳೆದ ಜನವರಿ ತಿಂಗಳಲ್ಲಿ ಹೈಕೋರ್ಟ್ ರದ್ದು ಮಾಡಿತ್ತು. ಅಲ್ಲದೆ, ಕೆಳಗಿನ ಕೋರ್ಟಿಗೆ ನಿತ್ಯಾನಂದನ ಬಂಧನಕ್ಕೆ ಆದೇಶ ಮಾಡುವಂತೆ ನಿರ್ದೇಶನ ನೀಡಿತ್ತು.