ಕೊರೊನಾ ಭಯಕ್ಕೆ ಹೃದಯಾಘಾತ.. ಒಂದೇ ದಿನ ತಂದೆ ಮಗನ ಬಾಳಲ್ಲಿ ವಿಧಿಯಾಟ

24-08-20 10:13 pm       Headline Karnataka News Network   ಕರ್ನಾಟಕ

ವಿಧಿಯಾಟಕ್ಕೆ ಒಂದೇ ದಿನ ತಂದೆ, ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ತಿರುಮಲೆ ಬಡಾವಣೆಯಲ್ಲಿ ನಡೆದಿದೆ.

ರಾಮನಗರ, ಆಗಸ್ಟ್ 24: ವಿಧಿಯಾಟಕ್ಕೆ ಒಂದೇ ದಿನ ತಂದೆ, ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ತಿರುಮಲೆ ಬಡಾವಣೆಯಲ್ಲಿ ನಡೆದಿದೆ. ವೇಣುಗೋಪಾಲ್​ (40) ಹಾಗೂ ಶಂಕರಪ್ಪ (68) ಮೃತ ದುರ್ದೈವಿಗಳು.

ಕೊರೊನಾ ಬಂದಿರಬಹುದೆಂಬ ಆತಂಕಕ್ಕೆ ಒಳಗಾಗಿ ಹೃದಯಾಘಾತ ಸಂಭವಿಸಿದೆ ಅಂತಾ ಹೇಳಲಾಗುತ್ತಿದೆ. ಸಾಮಾನ್ಯ ರೋಗ ಲಕ್ಷಣದಿಂದ ಬಳಲುತ್ತಿದ್ದ ವೇಣುಗೋಪಾಲ್​ ಅವರು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ​ಟೆಸ್ಟ್​ ಮಾಡಿಸಿದ್ದರು. ಇದರ ವರದಿ ನೆಗೆಟಿವ್ ಬಂದಿತ್ತು.

ಆದರೂ ಸಹ ತಮಗೆ ಕೊರೊನಾ ಇರಬಹುದೆಂಬ ಭಯದಿಂದ ಆರ್​ಆರ್​ ಮೆಡಿಕಲ್​ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಆತಂಕದಲ್ಲಿದ್ದ ವೇಣುಗೋಪಾಲ್​​ಗೆ ನಿನ್ನೆ ರಾತ್ರಿ 1.30ಕ್ಕೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಮಗನ ಸಾವಿನ ವಿಷಯ ತಿಳಿದು ಆಘಾತಕ್ಕೆ ಒಳಗಾದ ತಂದೆ ಶಂಕರಪ್ಪನವರಿಗೂ ಹೃದಯಘಾತವಾಗಿದೆ. ಬೆಳಗ್ಗೆ 9.30ಕ್ಕೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಧರ ಆಕ್ರಂದನ ಮುಗಿಲು ಮುಟ್ಟಿದೆ.