ಬಿಗ್‍ಬಾಸ್ ವಿನ್ನರ್, ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

26-08-20 03:35 pm       Bangalore Correspondent   ಕರ್ನಾಟಕ

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬಜರಂಗದಳ ಮುಖಂಡ ತೇಜಸ್ ಗೌಡ ಅವರು ಚಂದನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪದ ಮೇರೆಗೆ ಬಿಗ್‍ಬಾಸ್ ವಿನ್ನರ್, ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬಜರಂಗದಳ ಮುಖಂಡ ತೇಜಸ್ ಗೌಡ ಅವರು ಚಂದನ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲು ಮಾಡಿದ್ದಾರೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಜಾನಪದ ಗೀತೆಯನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳುವಂತೆ ತೇಜಸ್ ಗೌಡ ದೂರು ನೀಡಿದ್ದಾರೆ.

ಏನಿದು ಪ್ರಕರಣ?
ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.