ಯಡಿಯೂರಪ್ಪ ಬದಲಾವಣೆ ಇಲ್ಲ ; ವಿರೋಧಿ ಬಣಕ್ಕೆ ಛಾಟಿ ಬೀಸಿದ ಬಿಜೆಪಿ ಹೈಕಮಾಂಡ್

10-06-21 01:43 pm       Headline Karnataka News Network   ಕರ್ನಾಟಕ

ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ಪ್ರಶ್ನೆಯೇ ಇಲ್ಲವೆಂದು ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಖಡಕ್ಕಾಗಿ ಹೇಳಿದ್ದಾರೆ. 

ಬೆಂಗಳೂರು, ಜೂನ್ 10: ಸಿಎಂ ಯಡಿಯೂರಪ್ಪ ವಿರೋಧಿಗಳಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ಪ್ರಶ್ನೆಯೇ ಇಲ್ಲವೆಂದು ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಖಡಕ್ಕಾಗಿ ಹೇಳಿದ್ದಾರೆ. 

ಸಿಎಂ ಬದಲಾವಣೆ ವಿಚಾರ ಎನ್ನುವುದು ಬರೀ ವದಂತಿ ಅಷ್ಟೇ.‌ ಅಂತಹ ಯಾವುದೇ ಪ್ರಸ್ತಾಪ ಬಿಜೆಪಿ ಬಳಿ ಇಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಬದಲಾವಣೆ ಎಂದು ಹೇಳಿಕೊಂಡು ತಿರುಗಾಡಿದ್ದ ವಿರೋಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. 

ಇದೇ ವೇಳೆ, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಆಗುವುದೇ ಎನ್ನುವ ಬಗ್ಗೆಯೂ ಅವೆಲ್ಲವೂ ವದಂತಿ ಮಾತ್ರ. ಆ ಬಗ್ಗೆ ನಾವು ಸಾರ್ವಜನಿಕವಾಗಿ ಚರ್ಚೆ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷದ ಆಂತರಿಕ ಸಭೆಯಲ್ಲಿ ಆ ರೀತಿಯ ಚಿಂತನೆ ಆಗಿದೆಯೇ ಎನ್ನುವ ಪ್ರಶ್ನೆಗೆ, ಅದರ ಬಗ್ಗೆ ಏನಾಗಿದೆ ಎನ್ನುವ ಬಗ್ಗೆ ನಾನು ಮಾಧ್ಯಮದಲ್ಲಿ ಹೇಳಕ್ಕಾಗಲ್ಲ. ಎಲ್ಲ ರಾಜ್ಯಗಳ ಅಧ್ಯಕ್ಷರು ಕೂಡ ಒಳ್ಳೆಯ ರೀತಿಯಲ್ಲಿ ಸಂಘಟನಾ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಕರ್ನಾಟಕದಲ್ಲಿಯೂ ಒಳ್ಳೆದಾಗೇ ನಡೀತಿದೆ. ನಾಡಿದ್ದು ಕರ್ನಾಟಕ ತೆರಳಲಿದ್ದು ನಾಯಕರ ಅಹವಾಲು ಕೇಳಲಿದ್ದೇನೆ ಎಂದು ಹೇಳಿದರು. 

ಜೂನ್ 18, 19 ರಂದು ಅರುಣ್ ಸಿಂಗ್ ರಾಜ್ಯಕ್ಕೆ ಬರಲಿದ್ದು ಶಾಸಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೆ, ಶಾಸಕಾಂಗ ಸಭೆ ಕರೆಯುವ ವಿಚಾರ ಮುಖ್ಯಮಂತ್ರಿಗೆ ಬಿಟ್ಟದ್ದು ಎನ್ನುವುದನ್ನು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.