ಸರಕಾರ ರಚಿಸಲು ಯಡಿಯೂರಪ್ಪ ಬೇಕಿತ್ತು , ಈಗ ಬೇಡವೇ ; ನಿಡುಮಾಮಿಡಿ ಶ್ರೀ ಪ್ರಶ್ನೆ

21-07-21 03:01 pm       Headline Karnataka News Network   ಕರ್ನಾಟಕ

ಸರಕಾರ ರಚಿಸಲು ಯಡಿಯೂರಪ್ಪ ಬೇಕಿತ್ತು. ಈಗ ಅಧಿಕಾರ ಬಂದ ಬಳಿಕ ಯಡಿಯೂರಪ್ಪ ಬೇಡವೇ ಎಂದು ನಿಡುಮಾಮಿಡಿ ಮಠದ ಚೆನ್ನಮಲ್ಲ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರು, ಜುಲೈ 21: ಸರಕಾರ ರಚಿಸಲು ಯಡಿಯೂರಪ್ಪ ಬೇಕಿತ್ತು. ಈಗ ಅಧಿಕಾರ ಬಂದ ಬಳಿಕ ಯಡಿಯೂರಪ್ಪ ಬೇಡವೇ ಎಂದು ನಿಡುಮಾಮಿಡಿ ಮಠದ ಚೆನ್ನಮಲ್ಲ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. 

ಸಿಎಂ ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದ ಸ್ವಾಮೀಜಿ, ತಮ್ಮ ಬೆಂಬಲ ಘೋಷಿಸಿದ್ದಾರೆ. ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣಕ್ಕೆ ಬದಲಾವಣೆ ಮಾಡುವುದಿದ್ದರೆ ಸರಕಾರ ರಚನೆಯ ವೇಳೆಯೇ ಈ ಬಗ್ಗೆ ನಿರ್ಧಾರ ಮಾಡಬೇಕಿತ್ತು. ಈಗ ಮಧ್ಯದಲ್ಲಿ ಅವರನ್ನು ಕೈಬಿಡುವುದು ಬಿಜೆಪಿ ನಾಯಕರ ದುಡುಕಿನ ನಿರ್ಧಾರ ಎಂದು ಹೇಳುತ್ತೇನೆ. ಇದರಿಂದ ಪಕ್ಷಕ್ಕೆ ಹಾನಿಯೇ ಹೆಚ್ಚು. ಒಂದ್ವೇಳೆ ಯಡಿಯೂರಪ್ಪ ಅವರನ್ನು ಬದಲಾಯಿಸಲೇಬೇಕು ಅಂದ್ರೆ ಅವರನ್ನು ಮನವೊಲಿಸಿ ಈ ಕೆಲಸ ಮಾಡಬೇಕು. ಅದೇ ಸಮುದಾಯದ ಇನ್ನೊಬ್ಬರನ್ನು ಅವರ ಬೆಂಬಲ ಪಡೆದುಕೊಂಡೇ ನೇಮಕ ಮಾಡಬೇಕು. ಅದು ಬಿಟ್ಟು ಈ ರೀತಿ ನಡುವಿನಲ್ಲಿ ಹೊರಕ್ಕೆ ದೂಡುವುದು ಸರಿಯಲ್ಲ. 

ಯಡಿಯೂರಪ್ಪ ಇರುವ ಕಾರಣಕ್ಕೆ ಬಿಜೆಪಿಯನ್ನು ವೀರಶೈವ, ಲಿಂಗಾಯತರು ಬೆಂಬಲಿಸಿದ್ದಾರೆ. ಬಿಜೆಪಿಯನ್ನು 40 ವರ್ಷಗಳಿಂದ ಕಟ್ಟಿ ಬೆಳೆಸಿದ್ದಾರೆ. ಇಂಥ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದು ಪರಿಣಾಮ ಎದುರಿಸಬೇಕಾಗಬಹುದು ಎಂದು ಸ್ವಾಮೀಜಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. 

ಸಿಎಂ ಪರವಾಗಿ ಉತ್ತರ ಕರ್ನಾಟಕ ಭಾಗದ ವಿವಿಧ ಸಮುದಾಯದ ನೂರಾರು ಮಠಗಳ ಸ್ವಾಮೀಜಿಗಳು ಬೆಂಬಲ ಘೋಷಿಸಿದ್ದಾರೆ. ನಿನ್ನೆಯೇ 40 ಕ್ಕೂ ಹೆಚ್ಚು ಸ್ವಾಮೀಜಿಗಳು ಬೆಂಗಳೂರಿಗೆ ಬಂದು ಸಿಎಂ ಯಡಿಯೂರಪ್ಪ ಪರವಾಗಿ ಮಾತನಾಡಿದ್ದರು. ಇಂದು ಕೂಡ ಮಠಾಧೀಶರ ಬೆಂಬಲ ಮುಂದುವರಿದಿದ್ದು ಬೆಳಗ್ಗಿನಿಂದ 30 ಕ್ಕೂ ಹೆಚ್ಚು ಮಂದಿ ಬೆಂಗಳೂರಿನ ಸಿಎಂ ನಿವಾಸಕ್ಕೆ ಬಂದು ತಮ್ಮ ಬೆಂಬಲ ಘೋಷಿಸಿದ್ದಾರೆ. ‌

Cm Yeddyurappa wants bjp for only gaining power Nidumamidy Swamiji slams central leaders.