1983ರಿಂದ ಬೇತಾಳ ಕಟ್ಕೊಂಡು ಬಂದೆ, ಅದು ಬೆಳೀತು, ನನ್ನ ತಲೇಗೆ ಹೊಡೀತು ; ಸಂಪುಟದ ಬಗ್ಗೆ ಅಪ್ಪಚ್ಚು ರಂಜನ್ ಬೇಸರ

07-08-21 02:39 pm       Headline Karnataka News Network   ಕರ್ನಾಟಕ

ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ವಿಚಾರದಲ್ಲಿ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಕಿಡಿಕಾರಿದ್ದಾರೆ.‌ ಪಕ್ಷದವರೇ ನಮಗೆ ಮುಳ್ಳಾಗಿದ್ದಾರೆ ಎಂದು ಹೇಳಿದ್ದಾರೆ. 

ಮಡಿಕೇರಿ, ಆಗಸ್ಟ್ 7: ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ವಿಚಾರದಲ್ಲಿ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಕಿಡಿಕಾರಿದ್ದಾರೆ.‌ ಪಕ್ಷದವರೇ ನಮಗೆ ಮುಳ್ಳಾಗಿದ್ದಾರೆ.‌ ನಾವು ಬೆಂಬಲಿಸಿ ಬೆಳೆಸಿದವರೇ ಮುಳ್ಳಾಗಿ ಪರಿಣಮಿಸಿದ್ದಾರೆ ಎಂದು ಹೇಳಿದ್ದಾರೆ. 

ಪಕ್ಷದ ಮುಖಂಡರಿಂದಲೇ ನನಗೆ ತೊಂದರೆ ಆಯ್ತು. ಇಲ್ಲದಿದ್ರೆ ನನಗೆ ಸಚಿವ ಸ್ಥಾನ ಸಿಗುತ್ತಿತ್ತು. ಪಟ್ಟಿಯಲ್ಲಿ ನನ್ನ ಹೆಸರಿತ್ತು, ಕೊನೇ ಕ್ಷಣದಲ್ಲಿ ಕೈಬಿಟ್ಟಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ಪರೋಕ್ಷವಾಗಿ ಶಾಪ‌ ಹಾಕಿದ್ದಾರೆ. 

1983ರಿಂದ ಬೇತಾಳವನ್ನು ಹಿಂದೆ ಕಟ್ಕೊಂಡು ಬಂದೆ. ಆ ಬೇತಾಳ ಚನ್ನಾಗಿ ಬೆಳೀತು, ಈಗ ನನಗೇ ತಲೆಗೆ ಹೊಡೀತಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾರ್ಮಿಕ ನುಡಿಗಳನ್ನಾಡಿದ್ದಾರೆ.‌

24 ವರ್ಷದಿಂದ ಶಾಸಕನಾಗಿದ್ರೂ ಸಚಿವ ಸ್ಥಾನ ಸಿಗಲಿಲ್ಲ. ಇದು ನನಗೆ ಮಾತ್ರವಲ್ಲ, ಕೊಡಗಿನ ಜನರಿಗೂ ಬೇಸರ ತರಿಸಿದೆ.‌ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಆಗಿಲ್ಲ.‌ ಕೊಡಗು ಸೇರಿ 13 ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಮೊದಲ ಸುತ್ತಿನಲ್ಲಿ ಸಚಿವನಾಗಿ ಮಾಡದಿರಲು ನನ್ನಲ್ಲೇನು ಕೊರತೆಯಿತ್ತು? ಎಂದು ಪಕ್ಷದ ವರಿಷ್ಠರನ್ನು  ಅಪ್ಪಚ್ಚು ಪ್ರಶ್ನೆ ಮಾಡಿದ್ದಾರೆ.‌

ಕೋವಿಡ್ ಸೆಂಟರ್‌ಗೆ ಭೇಟಿ ನೀಡಿದ ಮೊದಲ ಶಾಸಕ ನಾನು. ಪಿಪಿಇ ಕಿಟ್ ಹಾಕಿ ಸೋಂಕಿತರಿಗೆ ಧೈರ್ಯ ಹೇಳಿದ್ದೇನೆ. ಆನಂತರ ಅನೇಕರು ಹೋಗಿದ್ದಾರೆ. ಜನತೆಯನ್ನು ನಾನು ಕೈಬಿಡಲ್ಲ, ಜನರ ಮನಸ್ಸಿನಲ್ಲಿ ನಾನಿದ್ದೇನೆ.‌ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಜಿಲ್ಲೆ ಕೊಡಗು ಮಾಡಿದ್ದೇವೆ.‌ ಹಾಗಿದ್ದರೂ ನಮ್ಮನ್ನು ಕಡೆಗಣಿಸಿದ್ದಾರೆ. ಇದು ದೊಡ್ಡ ತಪ್ಪು.‌ ಮಡಿಕೇರಿ ಜನರಿಗೆ ಮಾಡಿದ ಅನ್ಯಾಯ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

Madikeri Appachu Ranjan disappointed about cabinet expansion slams party leaders