ದಾವಣಗೆರೆ; ಪಿಸ್ತೂಲ್‌ ಸ್ವಚ್ಛಗೊಳಿಸುವ ವೇಳೆ ಗುಂಡು ತಗುಲಿ 28 ವರ್ಷದ ಕಾನ್‌ಸ್ಟೆಬಲ್ ಸಾವು

23-08-21 02:13 pm       Headline Karnataka News Network   ಕರ್ನಾಟಕ

ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಪಿಸ್ತೂಲ್‌ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಕಾನ್‌ಸ್ಟೆಬಲ್ ಮೃತಪಟ್ಟಿದ್ದಾರೆ.

ದಾವಣಗೆರೆ, ಆಗಸ್ಟ್ 23: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಪಿಸ್ತೂಲ್‌ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಮೃತಪಟ್ಟಿದ್ದಾರೆ. ಚೇತನ್ (28) ಮೃತಪಟ್ಟ ಪೊಲೀಸ್ ಕಾನ್‌ಸ್ಟೆಬಲ್. 

ಬೆಳಿಗ್ಗೆಯ ತರಬೇತಿ ಮುಗಿಸಿ ಆಯುಧ ಸ್ವಚ್ಛಗೊಳಿಸುತ್ತಿದ್ದ ವೇಳೆ 9 ಎಂ.ಎಂ.ನ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ತಗುಲಿದೆ. 

ಕೂಡಲೇ ಅವರನ್ನು ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಮೃತಪಟ್ಟರು. ಚೇತನ್ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದ ನಿವಾಸಿ. 2012ರಲ್ಲಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ್ದರು.

ಆಸ್ಪತ್ರೆಗೆ ಪೂರ್ವ ವಲಯ ಐಜಿಪಿ ಎಸ್. ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿದರು. 

ಇಲಾಖೆಯಿಂದ ಚೇತನ್‌ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಪೂರ್ವ ವಲಯ ಐಜಿಪಿ ಎಸ್ ರವಿ ತಿಳಿಸಿದರು. ಚೇತನ್‌ಗೆ ಪತ್ನಿ, ಗಂಡು ಮಗು ಇದ್ದಾರೆ.

Davanagere 28 year old Police Constable dies over accidental fire while cleaning Gun. The deceased has been identified as Chetan.