ವಿದ್ಯುತ್ ಬಿಲ್ ನಲ್ಲಿ ಲಕ್ಷಾಂತರ ಗೋಲ್ಮಾಲ್ ; ಬಿಲ್ಲನ್ನೇ ತಿದ್ದಿ ಬರೆಯುತ್ತಿದ್ದ ಬೆಸ್ಕಾಂ ಸಿಬಂದಿ, ಮೂವರ ಸಸ್ಪೆಂಡ್ ಮಾಡಿದ ಸಚಿವ ಸುನಿಲ್ !

04-09-21 04:41 pm       Headline Karnataka News Network   ಕರ್ನಾಟಕ

ವಿದ್ಯುತ್ ಬಿಲ್‌ನಲ್ಲಿ ಉದ್ದೇಶಪೂರ್ವಕ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡುತ್ತಿದ್ದ ಮೂವರು ಸಿಬ್ಬಂದಿಯನ್ನು ಇಂಧನ ಸಚಿವ ಸುನಿಲ್ ಕುಮಾರ್ ಸೇವೆಯಿಂದ ಅಮಾನತು ಮಾಡಿದ್ದಾರೆ. 

ಬೆಂಗಳೂರು, ಸೆ.4 : ವಿದ್ಯುತ್ ಬಿಲ್‌ನಲ್ಲಿ ಉದ್ದೇಶಪೂರ್ವಕ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡುತ್ತಿದ್ದ ಮೂವರು ಸಿಬ್ಬಂದಿಯನ್ನು ಇಂಧನ ಸಚಿವ ಸುನಿಲ್ ಕುಮಾರ್ ಸೇವೆಯಿಂದ ಅಮಾನತು ಮಾಡಿದ್ದಾರೆ. 

ಮುಳಬಾಗಿಲು ಉಪ ವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಯಕಿಯರಾದ ಗಾಯತ್ರಮ್ಮ ಹಾಗೂ ಸುಜಾತಮ್ಮ ಎಂಬವರೇ ಅಮಾನತುಗೊಂಡ ಸಿಬ್ಬಂದಿ. ಪ್ರತಿ ತಿಂಗಳು ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆ ಕೆಲವು ಬಿಲ್‌ಗಳಲ್ಲಿ ತಿದ್ದುಪಡಿ ಮಾಡುವ ಮೂಲಕ ಬಿಲ್‌ ಮೊತ್ತವನ್ನು ಉದ್ದೇಶಪೂರ್ವಕ ಕಡಿಮೆ ಮಾಡಿದ್ದರು. ಆ ಮೂಲಕ ಬೆಸ್ಕಾಂಗೆ ಬರಬೇಕಾದ ಆದಾಯದಲ್ಲಿ ನಷ್ಟ ಉಂಟು ಮಾಡುತ್ತಿದ್ದರು.

ಇವರು ಬೇರೆ, ಬೇರೆ ಐಪಿ ವಿಳಾಸ ಹೊಂದಿರುವ ಗಣಕ ಯಂತ್ರಗಳಲ್ಲಿ ತಮ್ಮ ಐಡಿ ಉಪಯೋಗಿಸಿ ವಂಚನೆ ಎಸಗಿದ್ದರು. ಇದಲ್ಲದೆ, 8 ಆರ್ ಆರ್ ಸಂಖ್ಯೆಗಳಲ್ಲಿ ಒಟ್ಟು 4,44,966 ರೂ.ಗಳಷ್ಟು ಮೊತ್ತ ನಷ್ಟವಾಗಿತ್ತು. ಅದರಿಂದ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಈ ಬಗ್ಗೆ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ತಾವು ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಅಕ್ರಮ ಎಸಗಿ ಆ ಮೂಲಕ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

Bangalore Current Minister suspends three employees of Bescom for fraudental activities