ಮೋದಿ ನಂಬಿ ಕೂತರೆ ಆಗಲ್ಲ ; ವಿಪಕ್ಷಗಳನ್ನ ಹಗುರವಾಗಿ ತಗೋಬೇಡಿ, ಡಿಕೆಶಿ ನಮ್ಮ ಶಾಸಕರನ್ನು ಸೆಳೆಯುತ್ತಿದ್ದಾರೆ !

19-09-21 03:13 pm       Headline Karnataka News Network   ಕರ್ನಾಟಕ

ಈ ಬಾರಿ ಯಾರು ಕೂಡ ವಿಪಕ್ಷಗಳನ್ನ ಹಗುರವಾಗಿ ತಗೋಬೇಡಿ. ಕಾಂಗ್ರೆಸಿನವರು ಕೂಡ ಎದ್ದು ಕುಳಿತಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿಯವರನ್ನು ಸಂಪರ್ಕಿಸುತ್ತಿದ್ದಾರೆ. ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ದಾವಣಗೆರೆ, ಸೆ.19: ಈ ಬಾರಿ ಯಾರು ಕೂಡ ವಿಪಕ್ಷಗಳನ್ನ ಹಗುರವಾಗಿ ತಗೋಬೇಡಿ. ಕಾಂಗ್ರೆಸಿನವರು ಕೂಡ ಎದ್ದು ಕುಳಿತಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿಯವರನ್ನು ಸಂಪರ್ಕಿಸುತ್ತಿದ್ದಾರೆ. ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷವೂ ಬಲಗೊಳ್ಳಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಈ ಮಾತು ಹೇಳಿದ್ದಾರೆ. ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಬೇಕಿದೆ. ಅದಕ್ಕಾಗಿ ತಳಮಟ್ಟದಿಂದಲೇ ಕೆಲಸ ಆಗಬೇಕಾಗಿದೆ. ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಮತಗಳನ್ನು ಸೆಳೆಯಲು ಅವರ ನಾಯಕರನ್ನು ನಮ್ಮಲ್ಲಿಗೆ ತರಬೇಕಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 141 ಸೀಟನ್ನು ನಾವು ಗೆಲ್ಲಬೇಕಿದೆ. ಇದೇನು ಕಷ್ಟವಲ್ಲ. ಹಾಗೆಂದು ಕೇವಲ ಮೋದಿಯನ್ನು ನಂಬಿ ಕೂತರೆ ಆಗುವುದಿಲ್ಲ. ಎಲ್ಲ ಚುನಾವಣೆಗಳಲ್ಲಿ ಮೋದಿ ಅಲೆ ಕೆಲಸ ಮಾಡಲ್ಲ ಎಂದು ಹೇಳಿದರು.

ಕಳೆದ 15 ದಿನಗಳಲ್ಲಿ ನಮ್ಮ‌ ಶಾಸಕರನ್ನು ಸಂಪರ್ಕಿಸಲು ಡಿಕೆಶಿ ಯತ್ನಿಸುತ್ತಿದ್ದಾರೆ. ಒಂದಿಬ್ಬರು ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಅನ್ನೋದು ಗೊತ್ತು. ಡಿಕೆಶಿ ತಮ್ಮ ಪಕ್ಷವನ್ನು ಬಲಪಡಿಸಲು ಇಂತಹ ಪ್ರಯತ್ನ ಮಾಡಿದ್ದಾರೆ. ಆದರೆ ಯಾರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಹೋಗಲ್ಲ ಎನ್ನುವುದನ್ನು ನಂಬುತ್ತೇನೆ. ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ. ಬದಲಿಗೆ, ಅನೇಕ ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರ್ತಾರೆ ಎಂದು ಹೇಳಿದರು.

ದೇಗುಲ ತೆರವು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ , ರಾಜ್ಯದಲ್ಲಿ ಯಾವುದೇ ಕಾರಣಕ್ಕು ಮುಂದಕ್ಕೆ ದೇಗುಲ ತೆರವು ಮಾಡಲ್ಲ. ಈ ಬಗ್ಗೆ ನಾವು ಸುಪ್ರೀಂ ಕೋರ್ಟಿಗೆ ಮೇಲ್ಮನವಿಯನ್ನೂ ಸಲ್ಲಿಸುತ್ತೇವೆ. ದೇಗುಲ ತೆರವು ಆದೇಶದ ಬಗ್ಗೆ ಸುಪ್ರೀಂಗೆ ಮನವಿ ಮಾಡುತ್ತೇವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇಗುಲ ಒಡೆದಿರುವ ಕೆಲಸ ಅಧಿಕಾರಿಗಳ ಎಡವಟ್ಟಿನಿಂದ ಆಗಿದೆ. ಇದರ ಬಗ್ಗೆ ಯಾವ ಕ್ರಮ ಆಗಬೇಕೋ ಅದನ್ನು ಮಾಡುತ್ತೇವೆ. ಯಾರು ತಪ್ಪು ಮಾಡಿದ್ದಾರೋ, ಅವರಿಗೆ ಶಿಕ್ಷೆ ನೀಡುತ್ತೇವೆ ಎಂದು ಹೇಳಿದರು.

Don't take Silly as Opposition Party BS Yediyurappa Advices to Party.