ರೋಹಿಣಿ ಸಿಂಧೂರಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ ಸಾರಾ ಮಹೇಶ್ ; ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

22-09-21 12:19 pm       Headline Karnataka News Network   ಕರ್ನಾಟಕ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಜಿಲ್ಲೆಯ ಶಾಸಕ ಸಾ.ರಾ. ಮಹೇಶ್ ನಡುವಿನ ಸಮರದ ಪ್ರತಿಧ್ವನಿ ವಿಧಾನಸಭೆಯಲ್ಲಿ ಕೇಳಿಬಂತು.

ಬೆಂಗಳೂರು, ಸೆ.22: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಜಿಲ್ಲೆಯ ಶಾಸಕ ಸಾ.ರಾ. ಮಹೇಶ್ ನಡುವಿನ ಸಮರದ ಪ್ರತಿಧ್ವನಿ ವಿಧಾನಸಭೆಯಲ್ಲಿ ಕೇಳಿಬಂತು. ಸಾರಾ ಮಹೇಶ್ ಪ್ರಶ್ನೆಗೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಸರ್ಕಾರದ ಅಧಿಕಾರಿಗಳು ಅಧಿಕಾರಿಗಳಾಗಿಯೇ ಕೆಲಸ ಮಾಡಬೇಕೆ ಹೊರತು ಸರ್ವಾಧಿಕಾರಿಗಳಾಗಬಾರದು. ಇದನ್ನು ಸರಕಾರ ಸಹಿಸುವುದಿಲ್ಲ ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. 

ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಾಸಕ ಸಾ.ರಾ. ಮಹೇಶ್ ಮಂಡಿಸಿದ್ದ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಈ ವಿಚಾರದಲ್ಲಿ ಸರ್ಕಾರ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸದನಕ್ಕೆ ತಿಳಿಸಿದರು. 

ಅಧಿಕಾರಿ ತನ್ನ ವ್ಯಾಪ್ತಿ ಮೀರಿ ವರ್ತನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ. ಕಾನೂನು ಉಲ್ಲಂಘನೆಯನ್ನು ಯಾರೇ ಮಾಡಿದರೂ ಅದು ತಪ್ಪಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಆರ್ ನಗರ ಶಾಸಕ ಸಾರಾ ಮಹೇಶ್, ರೋಹಿಣಿ ಸಿಂಧೂರಿ ಅವರು 30 ಲಕ್ಷಕ್ಕೆ ಈಜು ಕೊಳ ನಿರ್ಮಾಣ ಮಾಡಿರುವುದು ಮತ್ತು 15 ಲಕ್ಷಕ್ಕೆ ಕಚೇರಿ ನವೀಕರಣ ಮಾಡಿರುವ ಬಗ್ಗೆ ಸದನದಲ್ಲಿ ಫೋಟೋ ತೋರಿಸಿ ವಿಧಾನಸಭೆಯ ಗಮನಸೆಳೆದರು.

ಶಾಸಕರ ಹಕ್ಕು, ನಗರಪಾಲಿಕೆ ಹಕ್ಕು ಮತ್ತು ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಹಕ್ಕನ್ನು ಮೊಟಕು ಮಾಡಿ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತನೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಪ್ರಸ್ತಾಪ ಮಾಡಿದ ಕಾಮಗಾರಿ ಮತ್ತು ಅನುದಾನವನ್ನು ಬದಿಗೆ ಸರಿಸಿ ತಮಗೆ ಬೇಕಾದಂತೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕುಚ್ಯುತಿ ಕೈಗೊಳ್ಳಬೇಕೆಂದು ಸಾ.ರಾ ಮಹೇಶ್ ಸರ್ಕಾರವನ್ನು ಆಗ್ರಹಪಡಿಸಿದರು.

sa ra mahesh lashes out at rohini sindhuri in assembly session just protocol violation from ias officer says jc madhu swamy