ಬೊಮ್ಮಾಯಿ ವಿರುದ್ಧ ಕೆರಳಿದ ಸಿದ್ದರಾಮಯ್ಯ ; ಬಾಳಿಗಾ ಕೊಲೆ ಪ್ರಕರಣದ ಆರೋಪಿಯೇ ನಿಮ್ಮ ಅಧ್ಯಕ್ಷನ ಆಪ್ತ ! 

15-10-21 03:47 pm       Bengaluru Correspondent   ಕರ್ನಾಟಕ

ನೈತಿಕ ಪೊಲೀಸ್ ಗಿರಿ ಕೃತ್ಯಗಳನ್ನು ಸಮರ್ಥಿಸಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಟ್ವಿಟರ್ ವಾರ್ ನಡೆದಿದೆ.

ಬೆಂಗಳೂರು, ಅ.15: ನೈತಿಕ ಪೊಲೀಸ್ ಗಿರಿ ಕೃತ್ಯಗಳನ್ನು ಸಮರ್ಥಿಸಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಟ್ವಿಟರ್ ವಾರ್ ನಡೆದಿದೆ. ಟ್ವಿಟರ್ ನಲ್ಲಿ ಸಿದ್ದರಾಮಯ್ಯರನ್ನು, ನಿಮ್ಮ ಆಡಳಿತ ಅವಧಿಯಲ್ಲಿ ಟಿಪ್ಪು ಮಾದರಿಯಲ್ಲಿ ಹಿಂದುಗಳನ್ನು ಕೊಲೆಗೈದವರು ನೀವು ಎಂದು ಬೊಮ್ಮಾಯಿ ಟೀಕಿಸಿದ್ದಕ್ಕೆ ಸಿದ್ದರಾಮಯ್ಯ ವ್ಯಗ್ರರಾಗಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದವರ ಪಟ್ಟಿಯನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಕೊಲೆಯಾದವರ ಬಗ್ಗೆ ನೀಡಿದ್ದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ಹೇಳಿದ ಮತ್ತು ಹೇಳದೇ ಇರುವ ಸಾವುಗಳ ಕುರಿತ ನಗ್ನಸತ್ಯ ಎಂಬ ತಲೆಬರಹದಡಿ ಕಾಂಗ್ರೆಸ್ ಈ ಹಿಂದೆ ಚುನಾವಣೆ ಕಾಲದಲ್ಲಿ ಹಂಚಿಕೊಂಡಿದ್ದ ಮಾಹಿತಿಯನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಕೇಶವ ಶೆಟ್ಟಿ, ಪ್ರಕಾಶ್ ಕುಳಾಯಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಿದ್ದಾರೆ. ಇವರನ್ನು ಸಂಘ ಪರಿವಾರದ ಕಾರ್ಯಕರ್ತರೇ ಕೊಂದಿದ್ದರು. ಇದರ ಬಗ್ಗೆ ಯಾಕೆ ನ್ಯಾಯ ದೊರಕಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಕೊಲೆ ಆರೋಪಿಯೇ ನಿಮ್ಮ ಅಧ್ಯಕ್ಷನ ಆಪ್ತ !

ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ನರೇಶ್ ಶೆಣೈ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಖಾಸಾ ದೋಸ್ತ್. ಕಟ್ಟಾ ಹಿಂದು ಆಗಿದ್ದ ವಿನಾಯಕ ಬಾಳಿಗಾ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಸೋದರಿಯರಿಗೆ ನೀವಿಬ್ಬರೂ ಸೇರಿ ನ್ಯಾಯ ಕೊಡಿಸಿ ಎಂದು ಸಿದ್ದರಾಮಯ್ಯ ಮಾರ್ಮಿಕ ತಿರುಗೇಟು ನೀಡಿದ್ದಾರೆ.

ನನ್ನಿಂದ ಆಡಳಿತವನ್ನಾಗಲೀ, ಪೊಲೀಸಿಂಗ್ ಅನ್ನಾಗಲೀ ಕಲಿಯಬೇಕಿಲ್ಲ ಎಂದಿದ್ದೀರಿ. ಧನ್ಯವಾದಗಳು. ನನ್ನಿಂದಾಗಲೀ, ನಿಮ್ಮ ತಂದೆ ಎಸ್.ಆರ್. ಬೊಮ್ಮಾಯಿ ಅವರಿಂದಾಗಲೀ ಏನಾದರೂ ಕಲಿತಿದ್ದರೆ ಕೇವಲ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆ ಹೇಗೆ ಸೇರಿಕೊಳ್ಳುತ್ತಿದ್ದಿರಿ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕೂಗುಮಾರಿ ಆಗೋ ಮುನ್ನ ಯೋಚಿಸಿ

2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ 10 ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ ಮತ್ತು ಪಿಎಫ್ಐ ಸಂಘಟನೆಯವರು. ಆದರೆ, ಹನ್ನೊಂದು ಮುಸ್ಲಿಂ ಮತ್ತು ಹತ್ತು ಹಿಂದುಗಳ ಹತ್ಯೆಯಲ್ಲಿ ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆಗೆ ಸೇರಿದವರು ಎಂದು ಸಿದ್ದರಾಮಯ್ಯ ಟಾಂಗ್ ಇಟ್ಟಿದ್ದಾರೆ. ಅಲ್ಲದೆ, ನಾವೇ ಹಿಂದುಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಸಂಘ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ. ಇಂತಹ ಬೇಜವಾಬ್ದಾರಿ ಹೇಳಿಕೆಯ ಮೊದಲು ನೀವು ಕೂತಿರುವ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು. ಈ ಆರೋಪಕ್ಕಾಗಿ ನಾನು ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು. ಆದರೆ, ಕಿರಿಯರಿದ್ದೀರಿ. ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ ಎಂದು ಬೊಮ್ಮಾಯಿ ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.  

A spat between Karnataka Chief Minister Basavaraj Bommai and Congress leader Siddaramaiah has been playing out for the past two days on Twitter. The trigger is Bommai’s comments on moral policing. After Bommai accused Siddaramaiah of having got Hindu activists killed during his regime, the Opposition party leader in the Assembly retorted that he could file a defamation case against the CM but was rather advising him to correct himself.