ಭಾರೀ ಮಳೆಗೆ ಹಳಿ ತಪ್ಪಿದ ಕಣ್ಣೂರು - ಯಶವಂತಪುರ ಎಕ್ಸ್ ಪ್ರೆಸ್ ರೈಲು ! ನಸುಕಿನ ಜಾವ ಧರ್ಮಪುರಿ ಘಾಟಿಯಲ್ಲಿ ಘಟನೆ

12-11-21 11:42 am       H K Desk   ಕರ್ನಾಟಕ

ರೈಲು ಹಳಿಯ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ ಕಣ್ಣೂರು– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದು ಸ್ವಲ್ಪದರಲ್ಲಿ ದುರಂತ ತಪ್ಪಿದೆ.‌

ಬೆಂಗಳೂರು, ನ.12: ರೈಲು ಹಳಿಯ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ ಕಣ್ಣೂರು– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದು ಸ್ವಲ್ಪದರಲ್ಲಿ ದುರಂತ ತಪ್ಪಿದೆ.‌

ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಧರ್ಮಪುರಿ ಬಳಿಯ ತೊಪ್ಪೂರು– ಸಿವಾಡಿ ಮಧ್ಯೆ ಈ ಘಟನೆ ನಡೆದಿದೆ. ರೈಲು ಸಂಚರಿಸುತ್ತಿದ್ದಾಗಲೇ ಗುಡ್ಡದ ಮೇಲಿನಿಂದ ಬಂಡೆಗಳು ಉರುಳಿದ್ದು, ರೈಲು ಹಳಿಯ ಮೇಲೆ ಬಿದ್ದಿದೆ. 

ರೈಲಿನಲ್ಲಿದ್ದ ಎಲ್ಲ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ, ಯಾವುದೇ ಸಾವು- ನೋವು ಆಗಿಲ್ಲ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಪ್ರಯಾಣಿಕರನ್ನು ಬಸ್ ಮೂಲಕ ತಮ್ಮ ಊರಿಗೆ ಕಳುಹಿಸಲಾಗುತ್ತಿದೆ. ಪ್ರಯಾಣಿಕರಿಗೆ ತಿಂಡಿ ಹಾಗೂ ನೀರಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆಯೇ ಕಲ್ಪಿಸಿದೆ. 

ಈಗಾಗಲೇ ಸ್ಥಳದಲ್ಲಿ ದುರಸ್ತಿ ಕಾರ್ಯಾಚರಣೆ ನಡೆದಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ. ಕಣ್ಣೂರಿನಿಂದ ವಯಾ ತಮಿಳುನಾಡು ಮೂಲಕ ಮೈಸೂರು ದಾರಿಯಲ್ಲಿ ಬೆಂಗಳೂರಿಗೆ ರೈಲು ಸಂಚರಿಸುತ್ತದೆ. ತಮಿಳುನಾಡು ಭಾಗದ ಧರ್ಮಪುರಿಯಲ್ಲಿ ಘಟನೆ ಸಂಭವಿಸಿದೆ.

Several coaches derail as boulders hit Kannur-Bengaluru Express passengers safe