ಬಿಟ್ ಕಾಯಿನ್ ಹಗರಣ ; ನಳಿನ್ ಕುಮಾರ್ - ಪ್ರಸೀದ್ ಶೆಟ್ಟಿ- ಬೊಮ್ಮಾಯಿ ಲಿಂಕ್ ಏನು ?  ಎಷ್ಟು ಕೋಟಿ ಸಂದಾಯ ಆಗಿದೆ ಹೇಳಿ..! ಸ್ಟಾರ್ ಹೊಟೇಲ್ ನಲ್ಲಿದ್ದೇ ವಹಿವಾಟು, ಶ್ರೀಕಿಯನ್ನೇ ಮುಗಿಸಲು ಪ್ಲಾನ್ !    

13-11-21 10:22 pm       Mysuru Correspondent   ಕರ್ನಾಟಕ

 ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಹಗರಣ ಸುಂಟರಗಾಳಿ ಎಬ್ಬಿಸಿರುವಾಗಲೇ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಮತ್ತಷ್ಟು ಮಾಹಿತಿಗಳನ್ನು ಹೊರಗೆಡವಿದ್ದಾರೆ.

ಮೈಸೂರು, ನ.13: ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಹಗರಣ ಸುಂಟರಗಾಳಿ ಎಬ್ಬಿಸಿರುವಾಗಲೇ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಮತ್ತಷ್ಟು ಮಾಹಿತಿಗಳನ್ನು ಹೊರಗೆಡವಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಪುತ್ರ ಸೇರಿದಂತೆ ಪ್ರಭಾವಿ ನಾಯಕರು ಪ್ರಕರಣದಲ್ಲಿ ನೇರ ಶಾಮೀಲಾಗಿದ್ದಾರೆ ಎಂದು ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. 

ಹಗರಣದ ಪ್ರಮುಖ ಆರೋಪಿಯಾಗಿರುವ ಶ್ರೀಕಿ ಅಲಿಯಾಸ್ ನೀಡಿರುವ ಶ್ರೀಕೃಷ್ಣ ಸ್ವತಃ ನೀಡಿರುವ ಹೇಳಿಕೆಯಲ್ಲೇ ಎಲ್ಲದರ ಬಗ್ಗೆ ವಿವರ ಕೊಟ್ಟಿದ್ದಾನೆ. ಈತ ಇಂಟರ್ನ್ಯಾಶನಲ್ ಹ್ಯಾಕರ್ ಆಗಿದ್ದು, ತನ್ನನ್ನು ಉಪಯೋಗಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರಕಾರದ ಖಾತೆಗಳಿಂದ ಹಣವನ್ನು ದೋಚಿದ್ದಾಗಿ ಆತನೇ ಹೇಳಿಕೊಂಡಿದ್ದಾನೆ. 2018ರಲ್ಲಿ ಶ್ರೀಕಿ ಬಂಧನ ಆಗಿದ್ದಾಗ ಬೇಲ್ ಕೊಡಿಸಿದ್ದು ಪ್ರಸೀದ್ ಶೆಟ್ಟಿ ಎಂಬಾತ. ಈತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಆಪ್ತ. ನಳಿನ್ ಕುಮಾರ್ ಮೂಲಕ ಆಗಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಪ್ರಸೀದ್ ಶೆಟ್ಟಿ ಸಂಪರ್ಕ ಗಳಿಸಿದ್ದ. 


ನಳಿನ್ ಕುಮಾರ್ ಗೆ 70 ಕೋಟಿ ಪಾವತಿ  

ಈ ಎಲ್ಲ ವಿಚಾರದ ಬಗ್ಗೆ ಬಿಜೆಪಿ ಕಾರ್ಯಕರ್ತ ಸಚಿನ್ ಮಾಮನಿ ಎಂಬವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಶ್ರೀಕಿ ಯಡಿಯೂರಪ್ಪ ಪುತ್ರನೊಬ್ಬನ ಹಣವನ್ನು ಮಾರಿಷಸ್ ಗೆ ರವಾನೆ ಮಾಡಿರುವ ಬಗ್ಗೆ ಬರೆಯಲಾಗಿದೆ. ಶ್ರೀಕಿ ಒಬ್ಬ ಎಥಿಕಲ್ ಹ್ಯಾಕರ್ ಆಗಿದ್ದು ಬ್ಯಾಂಕ್ ಅಕೌಂಟ್, ಡಿಜಿಟಲ್ ವಹಿವಾಟು ಹ್ಯಾಕ್ ಮಾಡ್ತಾನೆ. ಈತ ಜನಧನ್ ಖಾತೆಯಿಂದ ಒಂದೇ ತಿಂಗಳಲ್ಲಿ 160 ಕೋಟಿ ಕದ್ದಿದ್ದಾನೆ. 80 ಕೋಟಿ ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ ಕದ್ದಿದ್ದ. ಅಲ್ಲದೆ, ಕೇಂದ್ರ ಸರಕಾರದ ಗ್ಯಾಸ್ ಸಬ್ಸಿಡಿ, ಪಿಂಚಣಿ ಯೋಜನೆಯಿಂದಲೂ 1 ರೂ., 80 ಪೈಸೆ ಹೀಗೆ ಕೋಟ್ಯಂತರ ರೂಪಾಯಿ ಕದಿಯುತ್ತಾನೆ. ಇದರ ಪರ್ಸೆಂಟೇಜ್ ಹಣವನ್ನು ಆಗಿನ ಸಚಿವ ಬಸವರಾಜ ಬೊಮ್ಮಾಯಿ ಗೊತ್ತಿದ್ದೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಗೆ 70 ಕೋಟಿ ನೀಡಲಾಗಿತ್ತು. ಇದೆಲ್ಲವನ್ನೂ ಮ್ಯಾನೇಜ್ ಮಾಡುವುದಕ್ಕಾಗಿ ನಳಿನ್ ಕುಮಾರ್ ಗೆ ಹಣ ನೀಡಲಾಗಿತ್ತು ಎಂದು ಪತ್ರದಲ್ಲಿ ಮೋದಿ ಗಮನಕ್ಕೆ ತರಲಾಗಿದೆ. 


ಆರು ಸಾವಿರ ಕೋಟಿ ಹಗರಣದ ಮಾಹಿತಿ 

ಮುಖ್ಯಮಂತ್ರಿ ಪದವಿಯಿಂದ ಯಡಿಯೂರಪ್ಪ ಅವರನ್ನು ಬದಲಿಸಿದ ಬಳಿಕ ಒಬ್ಬ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯೇ ರಾಜ್ಯ ಬಿಜೆಪಿಗೆ ಬೇಕಿತ್ತು. ಇವರ ಎಲ್ಲ ಹಗರಣದ ಬಗ್ಗೆ ಗೊತ್ತಿದ್ದ ಬೊಮ್ಮಾಯಿ ಅವರನ್ನು ಕೂರಿಸಲಾಗಿತ್ತು ಎಂದೂ ಪತ್ರದಲ್ಲಿ ಬರೆಯಲಾಗಿದೆ. ಇದಲ್ಲದೆ, ಇವರಿಗೆ ಹಣ ಹಂಚಿಕೆಯಾಗಿರುವ ಬಗ್ಗೆ ಸೈಬರ್ ಕ್ರೈಮ್ ನಿಂದ ತೆಗೆದುಕೊಂಡಿರುವ ದಾಖಲೆ ಪತ್ರಗಳನ್ನೂ ಇಟ್ಟಿದ್ದಾರೆ. ಇದೆಲ್ಲವೂ ಜನಸಾಮಾನ್ಯರ ಹಣ. ರಾಜ್ಯ ಸರಕಾರದ ಖಾತೆಗಳಿಂದ ಸುಮಾರು 2 ಸಾವಿರ ಕೋಟಿ ಹಾಗೂ ಕೇಂದ್ರ ಸರಕಾರದ ಖಾತೆಗಳಿಂದ ಸುಮಾರು 6 ಸಾವಿರ ಕೋಟಿಯನ್ನು ದೋಚಿದ್ದಾರೆಂಬ ಮಾಹಿತಿ ಇದೆ.  


ಸ್ಟಾರ್ ಹೊಟೇಲ್ ನಲ್ಲಿರಿಸಿ ಹಣ ವರ್ಗಾವಣೆ 

ವಿಶೇಷ ಅಂದ್ರೆ, ಇವನನ್ನು ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನ ಸ್ಟಾರ್ ಹೊಟೇಲ್ ನಲ್ಲಿ ಇರಿಸಿ ಖರ್ಚನ್ನು ನೋಡಿಕೊಳ್ಳುತ್ತಿದ್ದರು. ಪ್ರತಿ ತಿಂಗಳ 60 ಲಕ್ಷ ಬಿಲ್ಲನ್ನು ಯಾರೋ ಕಟ್ತಾ ಇದ್ದರು. ಯಾರೆಂದು ಆತನಿಗೂ ಗೊತ್ತಿಲ್ಲ. ತನ್ನನ್ನು ಬಿಡ್ ಮಾಡಿ ಇರಿಸಿಕೊಂಡಿದ್ದರು. ಒಂದು ತಿಂಗಳು ಒಬ್ಬೊಬ್ಬರು ಇರಿಸಿಕೊಳ್ಳುತ್ತಿದ್ದರು. ಜೊತೆಗೆ ಡ್ರಗ್ಸನ್ನೂ ಪೂರೈಸುತ್ತಿದ್ದರು ಎಂದು ಹೇಳಿಕೊಂಡಿದ್ದ. ಇದಲ್ಲದೆ, ದುಡ್ಡನ್ನು ಟ್ರಾನ್ಸಾಕ್ಷನ್ ಮಾಡುವುದಕ್ಕಾಗಿಯೇ ಬೆಂಗಳೂರು ಸೇರಿ ದೇಶಾದ್ಯಂತ 157 ಮಂದಿಯನ್ನು ಗುರುತಿಸಿದ್ದರು. ದಿನಕ್ಕೆ 10-15 ಕೋಟಿ ವಹಿವಾಟು ನಡೆಸುವ ಮಂದಿಯನ್ನು ಗುರುತಿಸಿ, ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದರು. 5 ಪರ್ಸೆಂಟ್ ಕಮಿಷನ್ ಪಡೆದು ಹಣ ವರ್ಗಾವಣೆ ಮಾಡಿಸುತ್ತಿದ್ದರು. ಹತ್ತು ಕೋಟಿ ವರ್ಗಾವಣೆಯಾದರೆ, 50 ಲಕ್ಷ ಕಮಿಷನ್ ಪಡೆಯುತ್ತಿದ್ದರು. ಇಡೀ ವಹಿವಾಟನ್ನು ಇವರ ಟೀಮ್ ಸೇರಿಕೊಂಡು ಮಾಡುತ್ತಿದ್ದರು. ಶ್ರೀಕಿ ಮೂಲಕ ಈ ಟೀಮ್ ನವರು ಕೆಲಸ ಮಾಡಿಸುತ್ತಿದ್ದರು ಎಂದು ಸ್ವತಃ ಶ್ರೀಕಿಯೇ ಹೇಳಿಕೊಂಡಿದ್ದಾನೆ. 

ಅಮೆರಿಕದ ಅಧ್ಯಕ್ಷರಿಂದ ಮೋದಿಗೆ ವಾರ್ನ್ 

ಇತ್ತೀಚೆಗೆ ಅಮೆರಿಕಕ್ಕೆ ಪ್ರಧಾನಿ ಮೋದಿ ಹೋಗಿದ್ದಾಗ, ಈ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲಿನ ಅಧ್ಯಕ್ಷ ಜೋ ಬಿಡೆನ್, ಪ್ರಧಾನಿ ಮೋದಿಯನ್ನು ಕರೆದು ವಾರ್ನ್ ಮಾಡಿದ್ದರು. ಅಮೆರಿಕದ ಎರಡು ಬಿಟ್ ಕಾಯಿನ್ ಎಕ್ಸ್ ಚೇಂಜ್ ಗಳನ್ನು ಹ್ಯಾಕ್ ಮಾಡಿ 1400 ಬಿಟ್ ಕಾಯಿನ್ ಕದಿಯಲಾಗಿತ್ತು. ಈ ಬಗ್ಗೆ ಅಲ್ಲಿನ ಎಫ್ ಬಿಐ ತನಿಖಾ ಸಂಸ್ಥೆಯ ಅಧಿಕಾರಿಗಳು ಬೆಂಗಳೂರಿಗೆ ಬಂದು 14 ದಿವಸ ಇಲ್ಲಿದ್ದುಕೊಂಡು ತನಿಖೆ ನಡೆಸಿ, ಬಿಡೆನ್ ಗೆ ವರದಿ ನೀಡಿದ್ದರು. ಬೆಂಗಳೂರಿನ ವ್ಯಕ್ತಿ ಮತ್ತು ಇಲ್ಲಿನ ಖದೀಮರ ತಂಡದ ಬಗ್ಗೆ ಮಾಹಿತಿ ನೀಡಿದ್ದರು. ಈ ವಿಚಾರದಲ್ಲಿ ಬಿಡೆನ್, ಮೋದಿಗೆ ಸ್ಪಷ್ಟವಾಗಿ ವಾರ್ನ್ ಮಾಡಿದ್ದರು. ನೀವು ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸದಿದ್ದರೆ ನಾವು ಬೇರೆ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ವಾರ್ನ್ ಮಾಡಿದ್ದರಿಂದ ಮೋದಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. 


ಕಾಂಗ್ರೆಸಿನವರು ಇದ್ದರೆ ಕೂಡಲೇ ಬಂಧಿಸಿ 

ಆದರೆ, ಬಿಟ್ ಕಾಯಿನ್ ಏನೂ ಇಲ್ಲವೆಂದು ಹೇಳಿಕೊಂಡು ಬಂದಿದ್ದ ಬೊಮ್ಮಾಯಿ ಮೊನ್ನೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಬಂದು ಬಿಟ್ ಕಾಯಿನ್ ಬಗ್ಗೆ ವಿವರಣೆ ಕೊಟ್ಟು ಬಂದೆ ಎಂದಿದ್ದಾರೆ. ಇನ್ನೊಂದ್ಕಡೆ ಇದೇ ಬೊಮ್ಮಾಯಿ ಸಿಬಿಐ ತನಿಖೆಗೆ ಕೊಟ್ಟಿದ್ದೇವೆ ಎನ್ನುತ್ತಾರೆ. ಮತ್ತೊಂದ್ಕಡೆ ಗೃಹ ಸಚಿವ ಆರಗ ಜ್ಞಾನೇಂದ್ರ ನಾವು ಇಡಿಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ನಾವು ಕೇಳ್ತಾ ಇರೋದು ಇಷ್ಟೇ.. ಈ ಹಗರಣದಲ್ಲಿ ಬಿಜೆಪಿಯವರು ಇಲ್ಲಾಂದ್ರೆ, ಕಾಂಗ್ರೆಸಿನವರು ಇದ್ದಾರಂದ್ರೆ ಅದರ ಮಾಹಿತಿ ನೀಡಬೇಕು. ಕಾಂಗ್ರೆಸಿನವರಿದ್ದರೆ ಕೂಡಲೇ ಬಂಧಿಸಬೇಕು. 

ನಳಿನ್ ಕುಮಾರ್ ಮತ್ತು ಇತರರಿಗೆ ಏನು ಲಿಂಕ್ ? 

ನೀವು ಇಡಿ ಅಥವಾ ಸಿಬಿಐ ತನಿಖೆಗೆ ನೀಡಿದ್ದೀರಿ ಅಂದ್ರೆ, ಯಾವಾಗ ವಹಿಸಿದ್ದೀರಿ ಅನ್ನೋದ್ರ ಮಾಹಿತಿ ಕೊಡಿ. ಪ್ರತಾಪಸಿಂಹ ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಹಗರಣ ಆಗಿತ್ತು ಅನ್ನುತ್ತಿದ್ದಾರೆ. 2018ರ ನವೆಂಬರ್ ನಲ್ಲಿ ಈ ಹಗರಣ ಬೆಳಕಿಗೆ ಬಂದಾಗ ಸಿದ್ದರಾಮಯ್ಯ ಅಧಿಕಾರದಲ್ಲಿದ್ರಾ ಅನ್ನೋದನ್ನು ನೀವೇ ಹೇಳಬೇಕು. ದೇಶದ 14 ರಾಜ್ಯಗಳ ಹಣಕಾಸು ಖಾತೆಯಿಂದ ಹಣ ಲಪಟಾಯಿಸಲಾಗಿದೆ ಎಂದು ಹೇಳಲಾಗಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರಕಾರದ ಖಾತೆಗಳಿಂದ ಎಷ್ಟು ಸಾವಿರ ಕೋಟಿ ಹಣ ದೋಚಲಾಗಿದೆ ಅನ್ನುವುದರ ಮಾಹಿತಿ ಕೊಡಿ. ಈ ಪ್ರಕರಣದಲ್ಲಿ ಯಾರೆಲ್ಲ ಇದ್ದಾರೆ, ನಳಿನ್ ಕುಮಾರ್ ಗೆ ಏನು ಲಿಂಕ್ ಇದೆ, ಪ್ರಸೀದ್ ಶೆಟ್ಟಿಗೂ ನಳಿನ್ ಕುಮಾರ್ ಗೂ ಏನು ಸಂಬಂಧ ಇದೆ, ಇವರಿಗೆಲ್ಲ ಎಷ್ಟು ಹಣ ಸಂದಾಯ ಆಗಿದೆ, ಡಿಜಿಟಲ್ ಕರೆನ್ಸಿಯನ್ನೇ ಕೊಟ್ಟಿದ್ದಾರಾ ಎನ್ನೋದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಒತ್ತಾಯಿಸಿದ್ದಾರೆ. 

ಸುಪ್ರೀಂ ಹಾಲಿ ಜಡ್ಜ್ ನಿಂದ ತನಿಖೆ ನಡೆಸಿ 

ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ಮೂಲಕ ಈ ಪ್ರಕರಣವನ್ನು ತನಿಖೆ ನಡೆಸಬೇಕು. ಯಾಕಂದ್ರೆ, ಇದರಲ್ಲಿ ಟಾಪ್ ಮೋಸ್ಟ್ ಐಪಿಎಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕರ್ನಾಟಕದ ಟಾಪ್ ಮೋಸ್ಟ್ ಅಧಿಕಾರಿಯೊಬ್ಬರ ಅಳಿಯನೂ ಇದ್ದಾರೆ. ಅಧಿಕಾರದಲ್ಲಿರುವ ನಾಯಕರು ಶಾಮೀಲು ಇರೋದ್ರಿಂದ ಪ್ರತ್ಯೇಕ ತನಿಖಾ ತಂಡವನ್ನು ರಚಿಸಿ ತನಿಖೆ ಆಗಬೇಕು. ಮೊದಲಿಗೆ ಶ್ರೀಕಿ ಹೇಳಿಕೆ ಆಧರಿಸಿ, ಎಲ್ಲರ ವಿರುದ್ಧವೂ ಎಫ್ಐಆರ್ ದಾಖಲು ಮಾಡಬೇಕು. ಯಾರೆಲ್ಲರ ಹೆಸರಿದೆ ಅವರನ್ನು ಈ ಪ್ರಕರಣದಲ್ಲಿ ಸೇರಿಸಬೇಕು. ಎಷ್ಟೆಲ್ಲ ಹಣ ಹೋಗಿದೆ ಅನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ನಾವು ಆಗ್ರಹ ಮಾಡುತ್ತಿದ್ದೇವೆ. 

ಶ್ರೀಕಿಯನ್ನು ನಿಗೂಢ ಜಾಗಕ್ಕೆ ಶಿಫ್ಟ್ 

ಇವೆಲ್ಲದರ ಮಧ್ಯೆ, ಹಗರಣದ ಆರೋಪಿ ಶ್ರೀಕಿ ಎಲ್ಲಿದ್ದಾನೆ ಅನ್ನುವುದರ ಮಾಹಿತಿ ಬೇಕು. ನಮ್ಗೆ ಇರೋ ಮಾಹಿತಿ ಪ್ರಕಾರ, ಆತನನ್ನು ಮೂರು ಸಾವಿರ ಕಿಮೀ ದೂರಕ್ಕೆ, ನಿಗೂಢ ಜಾಗಕ್ಕೆ ಒಯ್ಯಲಾಗಿದೆ. ಹೇಗೂ ಡ್ರಗ್ಸ್ ಪ್ರಕರಣದಲ್ಲಿ ಇದ್ದಾನೆ. ಆತನನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ನಡೆಸಿದ್ದಾರೆ. ಹಾಗಾಗಿ ಆತ ಎಲ್ಲಿದ್ದಾನೆ ಅನ್ನುವುದನ್ನು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಈ ಬಿಟ್ ಕಾಯಿನ್ ಹಗರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಕಾಂಗ್ರೆಸ್ ಪಕ್ಷ ಮಾತ್ರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ರೂಪಿಸಲಿದೆ ಎಂದು ಹೇಳಿದ್ದಾರೆ. 

BJP Bitcoin scam in Karnataka Needle of Doubt pointed at Nalin Kateel, Bommai Alleges Lakshman in Mysuru. Also Karnataka Chief Minister Basavaraj Bommai called on former Chief Minister BS Yediyurappa amid the opposition allegations that the BJP government was not doing enough to probe the alleged Bitcoin scam. The two leaders reportedly had a discussion for about 30 minutes late on Friday, sources close to Mr Bommai said.