ನಂದಿನಿ ಹಾಲಿನ ದರ 3 ರೂ. ಹೆಚ್ಚಿಸಲು ಪ್ರಸ್ತಾವನೆ ; ಸಿಎಂ ಬೊಮ್ಮಾಯಿಗೆ ಒತ್ತಡ ಹೇರಲು ಕೆಎಂಎಫ್ ನಿರ್ಧಾರ

15-01-22 10:26 pm       HK Desk news   ಕರ್ನಾಟಕ

ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ಹಾಲಿಗೆ ಲೀಟರ್ ಒಂದಕ್ಕೆ ಮೂರು ರೂಪಾಯಿ ಹೆಚ್ಚಿಸಲು ಮತ್ತೆ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಹೋಗಿದೆ.

ಬೆಂಗಳೂರು, ಜ.15 : ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ಹಾಲಿಗೆ ಲೀಟರ್ ಒಂದಕ್ಕೆ ಮೂರು ರೂಪಾಯಿ ಹೆಚ್ಚಿಸಲು ಮತ್ತೆ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಹೋಗಿದೆ. ಇತ್ತೀಚೆಗೆ ಹಾಲಿನ ದರ ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ದರ ಹೆಚ್ಚಳದ ಪ್ರಸ್ತಾಪಕ್ಕೆ ಸಿಎಂ ಬೊಮ್ಮಾಯಿ ಅನುಮತಿ ನೀಡಿರಲಿಲ್ಲ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಲೀಟರ್ ಹಾಲಿಗೆ ಮೂರು ರೂಪಾಯಿ ಹೆಚ್ಚಿಸುವ ಬಗ್ಗೆ ನಿರ್ಣಯ ಮಾಡಲಾಗಿದೆ. ನಂದಿನಿ ಹಾಲಿನ ದರ ಇಡೀ ದೇಶದಲ್ಲಿ ಅತ್ಯಂತ ಕನಿಷ್ಠವಾಗಿದೆ. ಹೀಗಾಗಿ ದರ ಹೆಚ್ಚಿಸಬೇಕೆಂದು ಹಾಲು ಉತ್ಪಾದಕರ ಸಂಘಗಳು ಒಕ್ಕೂಟಕ್ಕೆ ಮನವಿ ಮಾಡಿದ್ದವು. ದರ ಹೆಚ್ಚಿಸುವ ಬಗ್ಗೆ ಸಿಎಂ ಬೊಮ್ಮಾಯಿ ಜೊತೆಗೆ ಮಾತುಕತೆ ನಡೆಸುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ದೇಶದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರುಕಟ್ಟೆ ಹೆಚ್ಚಿಸುವ ಸಲುವಾಗಿ ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಆರಂಭಿಸಲು ನಿರ್ಧರಿಸಲಾಗಿದೆ. ನಂದಿನಿ ಚೀಸ್, ಪನೀರ್ ಆಧರಿತ ಉತ್ಪನ್ನಗಳು ದೇಶಾದ್ಯಂತ ರವಾನೆಯಾಗುತ್ತಿದ್ದು, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ನಂದಿನಿ ಉತ್ಪನ್ನಗಳು ಇನ್ನಷ್ಟು ಹೆಚ್ಚು ಮಾರುಕಟ್ಟೆ ಸಾಧಿಸಲು ಮೆಗಾ ಫುಡ್ ಪಾರ್ಕ್ ಮಾಡಲಾಗುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲಿಯೂ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವೃದ್ಧಿಸಲು ಯೋಜನೆ ಹಾಕಲಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

The Karnataka Milk Federation (KMF) has sought a Rs 3 hike per litre of milk in the state and appealed to CM Basavaraj Bommai to approve the fresh tariff.