ರಾಜ್ಯದ ಜನತೆಗೆ ಮತ್ತಷ್ಟು ರಿಲೀಫ್ ಕೊಟ್ಟ ಸಿಎಂ ; ಇನ್ಮುಂದೆ ನೈಟ್ ಕರ್ಫ್ಯೂ ಇಲ್ಲ, ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್, ಕಿಕ್ ಏರಿಸೋಕೆ ಫುಲ್ ಪರ್ಮಿಷನ್ !

29-01-22 04:49 pm       HK Desk news   ಕರ್ನಾಟಕ

ರಾಜ್ಯದಲ್ಲಿ ಜನವರಿ 31ರ ಬಳಿಕ ಹಲವು ಕೋವಿಡ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರು, ಜ 29 : ರಾಜ್ಯದಲ್ಲಿ ಜನವರಿ 31ರ ಬಳಿಕ ಹಲವು ಕೋವಿಡ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯಾದ್ಯಂತ ಜನವರಿ 31ರಿಂದ ರಾತ್ರಿ ಕರ್ಫ್ಯೂ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಪಬ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್​ಗಳಿಗೆ ಶೆ. 100 ರಷ್ಟು ಅವಕಾಶ ನೀಡಲಾಗಿದೆ. ಆದರೆ ಸಿನಿಮಾ ಥಿಯೇಟರ್​ಗಳಿಗೆ ಶೇ. 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ . ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ ನೀಡಲಾಗಿದೆ. ಮಂದಿರ, ಮಸೀದಿ, ಚರ್ಚ್​ಗಳಲ್ಲಿ ಸೇವೆ ಪುನಾರಂಭ ಮಾಡಬಹುದು. ಆದರೆ ಧಾರ್ಮಿಕ ಸ್ಥಳಗಳಲ್ಲಿ 50 ಜನ ಮಾತ್ರ ಒಂದೇ ಬಾರಿ ದರ್ಶನ ಪಡೆಯಬಹುದು. ಜಾತ್ರೆ, ಮೆರವಣಿಗೆ, ಧರಣಿ, ಪ್ರತಿಭಟನೆ ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಜಿಮ್, ಈಜುಕೊಳದಲ್ಲಿ ಶೇ. 50 ರಷ್ಟು ಅವಕಾಶ ನೀಡಲಾಗಿದೆ ಅಂತ ಆರ್ ಅಶೋಕ್ ಹೇಳಿದರು.

ಪ್ರವಾಸಿತಾಣಗಳ ಭೇಟಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಅಂತ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್​​ ಹೇಳಿದ್ದಾರೆ. ಕೊವಿಡ್​ ನಿಯಮ ಪಾಲಿಸಿ ಪ್ರವಾಸಿಗರು ಭೇಟಿ ನೀಡಬಹುದು. ರಾಜ್ಯದ ಪ್ರವಾಸಿತಾಣಗಳು ಪ್ರವಾಸಿಗರಿಗೆ ಮುಕ್ತವಾಗಿರಲಿವೆ. ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗೆ ಅವಕಾಶ ಇರುತ್ತದೆ ಅಂತ ಹೇಳಿದ್ದಾರೆ.

ಇಂದು ನಡೆದ ಸಭೆಯಲ್ಲಿ ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆಗೆ ಶೇ. 25 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಗಿದ್ದು, ಕೊವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕೊರೊನಾಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳನ್ನ ಬಂದ್ ಮಾಡಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಕೊರೊನಾ ತೀವ್ರತೆ ಕಡಿಮೆ ಇರುವುದರಿಂದ ಶಾಲೆಗಳನ್ನ ಪುನರಾರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಸೋಮವಾರದಿಂದ ಎಲ್ಲಾ ತರಗತಿ ಪುನಾರಂಭವಾಗುತ್ತದೆ ಅಂತ ಶಿಕ್ಷಣ ಸಚಿವ ಬಿಸಿ ನಾಗೇಶ್​ ಹೇಳಿಕೆ ನೀಡಿದ್ದಾರೆ. ಕೊವಿಡ್​ ನಿಯಮ ಪಾಲಿಸಿ ಶಾಲೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ. ಶಾಲೆ ಆರಂಭಕ್ಕೆ ಕೊವಿಡ್​ ನಿಯಮ ಪಾಲಿಸುವುದು ಕಡ್ಡಾಯ.

ಯಾವುದಾದರೂ ತರಗತಿಯಲ್ಲಿ ಮಕ್ಕಳಿಗೆ ಪಾಸಿಟಿವ್ ಬಂದರೆ, ಅಂತಹ ತರಗತಿ ಮುಚ್ಚಿ ಸ್ಯಾನಿಟೈಸ್ ಮಾಡಲಾಗುವುದು. ಶಾಲೆಗಳಿಗೆ ರಜೆ ವಿಚಾರದಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು

  • ರಾಜ್ಯಾದ್ಯಂತ ಜನವರಿ 31ರಿಂದ ರಾತ್ರಿ ಕರ್ಫ್ಯೂ ರದ್ದು
  • ಸಾರಿಗೆ ವಾಹನಗಳಲ್ಲಿ ಆಸನ ಶೇ.100ರಷ್ಟು ಭರ್ತಿಗೆ ಅನುಮತಿ
  • ಮದುವೆಗಳನ್ನು ಇನ್ನುಮುಂದೆ ಹೊರಾಂಗಣದಲ್ಲಿ 300, ಒಳಾಂಗಣದಲ್ಲಿ 200 ಮಂದಿಗೆ ಅವಕಾಶ
  • ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಶೇ.100ರಷ್ಟು ಅನುಮತಿ
  • ಸಿನಿಮಾ, ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ.50ರಷ್ಟು ಅನುಮತಿ
  • ಎಲ್ಲಾ ಜಾತ್ರೆಗಳು, ಮೆರವಣಿಗೆಗಳು, ಧರಣಿ, ಪ್ರತಿಭಟನೆ, ಸಾಮಾಜಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳಿಗೆ ನಿರ್ಬಂಧ ಮುಂದುವರಿಕೆ
  • ಎಲ್ಲಾ ಕಚೇರಿಗಳಲ್ಲಿ ಶೇ.100ರಷ್ಟು ಹಾಜರಾತಿ
  • ಬೆಂಗಳೂರಿನ ಎಲ್ಲಾ ಶಾಲೆಗಳು ಜನವರಿ 31ರಿಂದ ಆರಂಭ
  • ಈಜುಕೊಳ, ಜಿಮ್‌ಗಳಲ್ಲಿ ಶೇ.50ರಷ್ಟು ಅನುಮತಿ
  • ಕ್ರೀಡಾ ಕಾಂಪ್ಲೆಕ್ಸ್‌, ಕ್ರೀಡಾಂಗಣದಲ್ಲಿ ಶೇ.50ರಷ್ಟು ಅನುಮತಿ
  • ಧಾರ್ಮಿಕ ಸ್ಥಳಗಳಲ್ಲಿ ಎಲ್ಲಾ ಸೇವೆಗಳಿಗೆ ಅನುಮತಿ, ಆದರೆ ಒಮ್ಮೆಗೆ 50ಮಂದಿಗೆ ಮಾತ್ರ ಅವಕಾಶ
  • ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

 

Karnataka government on Saturday announced to withdraw the night curfew from Jan 31 and also 50% occupancy rule in hotels, bars and pubs except cinema halls. All schools in Bengaluru are allowed to start offline classes from Monday.