ಹರ್ಷ ಕೊಲೆ ಪ್ರಕರಣ ; ಐದು ಆಯಾಮಗಳಲ್ಲಿ ಪೊಲೀಸ್ ತನಿಖೆ, 40ಕ್ಕೂ ಹೆಚ್ಚು ಎಫ್ಐಆರ್ ! ಕೊಲೆ ಹಿಂದಿನ ಸಂಚು ಬಯಲಿಗೆಳೆಯಲು ಆರೋಪಿಗಳಿಗೆ ಡ್ರಿಲ್ಲಿಂಗ್ !

03-03-22 08:48 pm       HK Desk news   ಕರ್ನಾಟಕ

ಹರ್ಷ ಕೊಲೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೊಲೆಯ ಹಿಂದಿನ ಕಾರಣಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಶಿವಮೊಗ್ಗ, ಮಾ.3:ಹರ್ಷ ಕೊಲೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೊಲೆಯ ಹಿಂದಿನ ಕಾರಣಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಕೊಲೆಗೆ ವೈಯಕ್ತಿಕ ಕಾರಣ ಎಂದು ಹೇಳುತ್ತಿದ್ದರೂ, ಐದು ವಿವಿಧ ಆಯಾಮಗಳ ಮೂಲಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಘಟನೆ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಬಂಧಿತರ ಪೈಕಿ ಮೊಹಮ್ಮದ್ ಖಾಸಿಫ್ ಪ್ರಮುಖ ಆರೋಪಿ. 2015ರಿಂದಲೂ ಖಾಸಿಫ್ ಮತ್ತು ಹರ್ಷ ನಡುವೆ ವೈಯಕ್ತಿಕ ದ್ವೇಷ ಇತ್ತು. ಇದೇ ಕಾರಣಕ್ಕೆ ಖಾಸಿಫ್ ತಂಡ ಕಟ್ಟಿಕೊಂಡು ಈ ಕೃತ್ಯ ನಡೆಸಿದ್ದಾನೆಯೇ, ಬೇರೆ ಕಾರಣಗಳು ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Karnataka High Court said – Government should open schools, told which  institutions have been banned from wearing saffron or hijab | pipanews.com

ಕೊಲೆಯಾಗೋದಕ್ಕೂ ಕೆಲವು ದಿನಗಳ ಹಿಂದೆ, ಶಿವಮೊಗ್ಗದಲ್ಲಿ ಹೊತ್ತಿಕೊಂಡಿದ್ದ ಹಿಜಾಬ್- ಕೇಸರಿ ಶಾಲು ಪ್ರಕರಣದಲ್ಲಿ ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚಿದ್ದರಲ್ಲಿ ಹರ್ಷನದ್ದೂ ಕೈವಾಡ ಇತ್ತು. ಶಿವಮೊಗ್ಗದ ಬಾಪೂಜಿ ರಸ್ತೆಯ ಕಾಲೇಜಿನಲ್ಲಿ ಕಲ್ಲು ತೂರಾಟ, ಕೇಸರಿ ಶಾಲು ಹಾಕಿದ ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ಹರ್ಷ ಇದ್ದ. ಆತನ ಕಾರಣದಿಂದಲೇ ಒಮ್ಮಿಂದೊಮ್ಮೆಲೇ ಕಾಲೇಜಿನಲ್ಲಿ ಹಿಜಾಬ್ ವಿವಾದ ಎದ್ದಿತ್ತು ಎಂಬ ಆರೋಪಗಳಿದ್ದವು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಧ್ವಜವನ್ನೂ ಹಾರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ನೆಪದಲ್ಲಿ ವಿರೋಧಿ ತಂಡ, ಹರ್ಷನನ್ನು ಕೊಲೆ ಮಾಡಲು ಸಂಚು ಹೂಡಿತ್ತೇ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹರ್ಷ ಈ ಹಿಂದೆ ಕೋಮು ವೈಷಮ್ಯದ ಪ್ರಕರಣಗಳಲ್ಲಿ ಆರೋಪಿಯೂ ಆಗಿದ್ದ. ಒಮ್ಮೆ ಪ್ರಕರಣ ಒಂದರಲ್ಲಿ ಜೈಲು ಪಾಲಾಗಿದ್ದ. ಹೀಗಾಗಿ ಆತನ ವಿರುದ್ಧ ಕೋಮು ವೈಷಮ್ಯದ ದ್ವೇಷವೂ ಇತ್ತು. ಬಜರಂಗದಳ ಮತ್ತು ಹಿಂದು ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಹರ್ಷನ ವಿರುದ್ಧ ಸಾಕಷ್ಟು ಮಂದಿ ಹಗೆತನ ಮತ್ತು ವೈರತ್ವ ಬೆಳೆಸಿಕೊಂಡಿದ್ದರು. ಇದೇ ಕಾರಣಕ್ಕಾಗಿ ಖಾಸಿಫ್ ಮೂಲಕ ಕೃತ್ಯ ಮಾಡಿಸಿದ್ದಾರೆಯೇ ಎಂಬ ಗುಮಾನಿಯೂ ಎದ್ದಿದೆ.

ಹಿಂದುತ್ವ, ಹಿಂದುಗಳ ಮೇಲಿನ ಹಲ್ಲೆ ಪ್ರಕರಣಗಳ ಸಂದರ್ಭ ಹರ್ಷ ಫೇಸ್ಬುಕ್ ನಲ್ಲಿ ಹಿಂದುಗಳ ಪರವಾಗಿ ಪೋಸ್ಟ್ ಹಾಕುತ್ತಿದ್ದ. ಇದೇ ವಿಚಾರದಲ್ಲಿ ಹರ್ಷನಿಗೆ ನಿರ್ದಿಷ್ಟ ಸಂಘಟನೆಯ ಕಾರ್ಯಕರ್ತರಿಂದ ಕೊಲೆ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಹರಅಷ ಮನೆಯವರಲ್ಲಿ ಮತ್ತು ಸ್ನೇಹಿತರಲ್ಲೂ ಹೇಳಿಕೊಂಡಿದ್ದ. ಅದೇ ಸಂಘಟನೆಯ ಕಾರ್ಯಕರ್ತರು ಹರ್ಷನನ್ನು ಹಿಜಾಬ್ ದ್ವೇಷದಲ್ಲಿ ಕೊಲೆ ಮಾಡಿ ಮುಗಿಸಿದ್ದಾರೆಯೇ ಎಂಬ ಸಂಶಯವೂ ಪೊಲೀಸರಲ್ಲಿದೆ.

ಇದೇ ವೇಳೆ, ಹರ್ಷ ಶವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಸಜ್ಜತ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಆಧರಿಸಿ ಪೊಲೀಸರು ಕಲ್ಲು ತೂರಾಟ ನಡೆಸಿದ್ದವರನ್ನು ಪತ್ತೆ ಮಾಡಿ ಬಂಧಿಸುತ್ತಿದ್ದಾರೆ. ಇವೆಲ್ಲ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದು ಕೊಲೆಗೇನು ಕಾರಣ ಅನ್ನೋ ನಿಖರ ಮಾಹಿತಿಯನ್ನು ಹೊರಗೆಳೆಯಲು ಪೊಲೀಸರು ಮುಂದಾಗಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಕೊಲೆ ಹಿಂದಿನ ಕಾರಣವನ್ನು ಮತ್ತು ಅದಕ್ಕೆ ಕಾರಣಕರ್ತರಾದವರನ್ನು ಪತ್ತೆ ಮಾಡುತ್ತೇವೆ, ಕಠಿಣ ಶಿಕ್ಷೆಗೆ ಗುರಿ ಪಡಿಸುತ್ತೇವೆ ಎಂದು ಹೇಳಿದ್ದರಿಂದ ಹರ್ಷ ಕೊಲೆ ತನಿಖೆಯೂ ಚುರುಕು ಪಡೆದಿದೆ.

The district police have been probing the murder of Bajrang Dal worker, Harsha, from five angles. Even though prima facie the murder appears to have happened because of old enmity, the police want to know the compulsions which made the accused, who were striving to get two square meals a day, to kill Harsha at the cost of risking their future. It is learnt that over 40 FIRs have been registered so far in this case.