ಪಾವಗಡದಲ್ಲಿ ಭೀಕರ ಬಸ್ ದುರಂತ ; ಕಿಕ್ಕಿರಿದು ತುಂಬಿದ್ದ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಸಾವಿನ ಶಂಕೆ! ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು !  

19-03-22 11:51 am       HK Desk news   ಕರ್ನಾಟಕ

ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಖಾಸಗಿ ಬಸ್ ಪಲ್ಟಿಯಾಗಿ ಬಿದ್ದು ಭೀಕರ ದುರಂತ ನಡೆದಿದ್ದು, 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಭೀತಿ ವ್ಯಕ್ತವಾಗಿದೆ.

ತುಮಕೂರು, ಮಾ.19: ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಖಾಸಗಿ ಬಸ್ ಪಲ್ಟಿಯಾಗಿ ಬಿದ್ದು ಭೀಕರ ದುರಂತ ನಡೆದಿದ್ದು, 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಭೀತಿ ವ್ಯಕ್ತವಾಗಿದೆ. ಎಂಟು ಮಂದಿ ಯುವಕರ ಶವಗಳು ಚೆಲ್ಲಾಪಿಲ್ಲಿಯಾಗಿ ಸ್ಥಳದಲ್ಲಿ ಬಿದ್ದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಎಂಬಲ್ಲಿ ನಡೆದಿದ್ದು ಮೃತರದಲ್ಲಿ ಬಹುತೇಕ ವಿದ್ಯಾರ್ಥಿಗಳೇ ಆಗಿದ್ದಾರೆ.  

ಸಮತಟ್ಟು ಆಗಿರುವ ರಸ್ತೆ ಮಧ್ಯದಲ್ಲೇ ಬಸ್ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿ ದುರಂತವೇ ನಡೆದುಹೋಗಿದೆ. ಎಸ್ ವಿಟಿ ಎನ್ನುವ ಹೆಸರಿನ ಖಾಸಗಿ ಬಸ್ ಇದಾಗಿದ್ದು, ಬಸ್ಸಿನಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದರು ಎನ್ನಲಾಗಿದೆ. ಬಸ್ ಸಂಖ್ಯೆ ಕಡಿಮೆ ಇದ್ದುದರಿಂದ ಬೆಳಗ್ಗಿನ ಹೊತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಬಸ್ಸಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ಬಸ್ ವೈಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿತ್ತು.

ಬಸ್ ಪಲ್ಟಿಯಾಗಿದ್ದರಿಂದ ಹೊರಗಡೆ ನೇತಾಡುತ್ತಿದ್ದವರೆಲ್ಲ ಬಸ್ಸಿನ ಅಡಿಗೆ ಬಿದ್ದು ಸ್ಥಳದಲ್ಲೇ ಛಿದ್ರವಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳು ಎನ್ನಲಾಗುತ್ತಿದೆ. ಸ್ಥಳದಲ್ಲಿ ಎಂಟು ಮಂದಿ ದುರಂತ ಸಾವಿಗೀಡಾಗಿದ್ದರೆ, ಇನ್ನಷ್ಟು ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ. ಬಸ್ಸಿನಲ್ಲಿ ಮೇಲ್ಭಾಗದಲ್ಲಿಯೂ ಕುಳಿತುಕೊಂಡು ತೆರಳುತ್ತಿದ್ದರು ಎನ್ನಲಾಗಿದೆ.

ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದು, ಜನರು ರೋದನದಲ್ಲಿ ತೊಡಗಿದ್ದಾರೆ. ಮೃತ ಯುವಕರು ಯಾರೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ. ಬಸ್ ಪಲ್ಟಿಯಾಗಿ ಬಿದ್ದ ಜಾಗದಲ್ಲಿ ಒಳಭಾಗದಲ್ಲಿಯೂ ಹಲವರು ಸಿಕ್ಕಿಕೊಂಡಿದ್ದು, ಅವರನ್ನು ಸ್ಥಳೀಯರು ಎಳೆದು ತೆಗೆಯುವ ಪ್ರಯತ್ನ ಪಟ್ಟಿದ್ದಾರೆ. ಅಮೂಲ್ಯ, ಕಲ್ಯಾಣ್, ಅಜಿತ್, ಶಾನವಾಜ್ ಮತ್ತು ಕೆಲವರ ಗುರುತು ಪತ್ತೆಯಾಗಿದೆ. ಖಾಸಗಿ ಬಸ್ಸಿನ ನಿರ್ಲಕ್ಷ್ಯದ ಚಾಲನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

At least eight persons diad and more than 20 have been critically injured, including students, as a bus overturned near Pavagada in Karnataka's Tumkur district.