ಕರಾವಳಿಯ ಕೋಮು ದ್ವೇಷವನ್ನು ಇಡೀ ರಾಜ್ಯಕ್ಕೆ ಹರಡಿಸುತ್ತಿದ್ದಾರೆ ; ಬಿಜೆಪಿ ವಿರುದ್ಧ ಎಚ್ಡಿಕೆ ತರಾಟೆ 

23-03-22 06:02 pm       Bengaluru Correspondent   ಕರ್ನಾಟಕ

ಹಿಂದುಗಳ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ ಹೇರುವ ಕ್ರಮದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಬೆಂಗಳೂರು, ಮಾ.23 : ಹಿಂದುಗಳ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ ಹೇರುವ ಕ್ರಮದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮೂರು ನಾಲ್ಕು ತಿಂಗಳ‌ ಹಿಂದೆಯೇ ಹೇಳಿದ್ದೆ. ಇವರು ಚುನಾವಣೆ ಬರುವಾಗ ಭಾವನಾತ್ಮಕ ವಿಚಾರಗಳಲ್ಲಿ ಗೊಂದಲ ಸೃಷ್ಟಿಸಿ, ಕೋಮು ಸಾಮರಸ್ಯ ಕದಡಿಸುವ ಕೆಲಸ ಮಾಡುತ್ತಾರೆಂದು ಭವಿಷ್ಯ ನುಡಿದಿದ್ದೆ ಎಂದರು.

ಉತ್ತರ ಭಾರತದ ಚುನಾವಣಾ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಕರಾವಳಿಯಲ್ಲಿದ್ದ ಕೋಮು ದ್ವೇಷವನ್ನು ರಾಜ್ಯಾದ್ಯಂತ ಹರಡಿಸಲು ಯತ್ನಿಸುತ್ತಿದ್ದಾರೆ. ಜನರು ಇದೆಲ್ಲವನ್ನು ನೋಡುತ್ತಿದ್ದಾರೆ ಎಂದು ಹೇಳಿದರು.

ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ಬದಿಗೆ ಸರಿಸಿ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಜನಪರ ಕೆಲಸಗಳು ದೇಶವನ್ನು ಉದ್ದಾರ ಮಾಡಿದೆಯಂತೆ. ಅದಕ್ಕಾಗಿ ಜನರೂ ಅವರ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿಲ್ಲವೆನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ನೀತಿಗಳನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಖಂಡಿಸಿದರು.

Udupi Kapu jatre restriction for Muslims will spread across state, HDK slams BJP party for disturbing harmony.