ಸೆ.25ಕ್ಕೆ ಕರ್ನಾಟಕ ಬಂದ್ ಇರಲ್ಲ - ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ

22-09-20 09:11 pm       Headline Karnataka News Network   ಕರ್ನಾಟಕ

ಕರ್ನಾಟಕ ಬಂದ್ ಕುರಿತು ನಡೆಯುತ್ತಿದ್ದ ಚರ್ಚೆಗೆ ತೆರೆ ಬಿದ್ದಿದ್ದು, ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರು, ಸೆಪ್ಟಂಬರ್ 22: ಕರ್ನಾಟಕ ಬಂದ್ ಕುರಿತು ನಡೆಯುತ್ತಿದ್ದ ಚರ್ಚೆಗೆ ತೆರೆ ಬಿದ್ದಿದ್ದು, ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ, ಸರ್ಕಾರದ ಮುಂದಿನ ನಡೆ ನೋಡಿಕೊಂಡು ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಇಂದು ಜೂಮ್ ಮೀಟಿಂಗ್‍ನಲ್ಲಿ ವಿವಿಧ ರೈತ ಮುಖಂಡರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸೆಪ್ಟೆಂಬರ್ 25ರಂದು ಕರ್ನಾಟಕ ಬಂದ್ ಇರುವುದಿಲ್ಲ. ಕೇವಲ ರಾಷ್ಟ್ರಿಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಇದೀಗ ಅಧಿವೇಶನ ನಡೆಯುತ್ತಿದ್ದು, ಸದನಲ್ಲಿ ಈ ಕುರಿತು ಚರ್ಚಿಸಿ ಸರ್ಕಾರ ಬಿಲ್ ಹಿಂಪಡೆಯದಿದ್ದರೆ ಬಂದ್ ದಿನಾಂಕವನ್ನು ಪ್ರಕಟ ಮಾಡುತ್ತೇವೆ ಎಂದರು.

ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ಬಂದ್‍ಗೆ ಕರೆ ಕೊಟ್ಟಿದೆ. ಪಂಜಾಬ್ ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಚಳುವಳಿ ತೀವ್ರವಾಗಿ ನಡೆಯುತ್ತಿದೆ. ಈ ಬಂದ್‍ಗೆ ನಾವು ಬೆಂಬಲ ಕೊಡುತ್ತೇವೆ. ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆಯನ್ನು ಕೈಬಿಟ್ಟರೆ ರಾಜ್ಯ ರೈತಸಂಘದಿಂದ ಬಂದ್ ಇರಲ್ಲ. ಒಂದು ವೇಳೆ ಇದೇ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದರೆ ಬಂದ್ ಮಾಡುತ್ತೇವೆ. ಪ್ರತಿಭಟನೆ ನೋಡಿ ಯಡಿಯೂರಪ್ಪನವರು ಮನಸ್ಸು ಬದಲಿಸಬಹುದು, ಕಾದುನೋಡುತ್ತೇವೆ ಎಂದು ತಿಳಿಸಿದರು.