ಹಿಂದು ಸಂಘಟನೆಗಳ ವಿರೋಧಿ ಅಭಿಯಾನ ; ತುಮಕೂರಿನ ಸಾಮಾಜಿಕ ಕಾರ್ಯಕರ್ತನಿಂದ ಆತ್ಮಹತ್ಯೆ ಬೆದರಿಕೆ ! ನನ್ನ ಸಾವಿಗೆ ಬಿಜೆಪಿ ಸರಕಾರ ಕಾರಣ ಎಂದು ಟ್ವೀಟ್ 

09-04-22 09:21 pm       HK Desk news   ಕರ್ನಾಟಕ

ಮುಸ್ಲಿಮರ ವಿರುದ್ಧ ಹಿಂದು ಸಂಘಟನೆ ಕಾರ್ಯಕರ್ತರ ಅಭಿಯಾನದಿಂದ ಬೇಸತ್ತ ತುಮಕೂರಿನಲ್ಲಿ ಸಾಮಾಜಿಕ ಕಾರ್ಯಕರ್ತನಾಗಿರುವ ಮುಸ್ಲಿಂ  ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ತುಮಕೂರು, ಎ.9: ಮುಸ್ಲಿಮರ ವಿರುದ್ಧ ಹಿಂದು ಸಂಘಟನೆ ಕಾರ್ಯಕರ್ತರ ಅಭಿಯಾನದಿಂದ ಬೇಸತ್ತ ತುಮಕೂರಿನಲ್ಲಿ ಸಾಮಾಜಿಕ ಕಾರ್ಯಕರ್ತನಾಗಿರುವ ಮುಸ್ಲಿಂ  ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸಾದಿಕ್ ಪಾಷಾ ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. 

ಕರ್ನಾಟಕ ರಾಜ್ಯದಲ್ಲಿ ಶಾಂತಿ ವಾತಾವರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಏಪ್ರಿಲ್ 11 ರಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ತುಮಕೂರಿನ ಎಸ್ಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ನನ್ನ ಸಾವಿಗೆ ಬಿಜೆಪಿ ಸರ್ಕಾರವೇ ನೇರಹೊಣೆ ಎಂದು ಟ್ವೀಟ್​ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಹೆಚ್.​ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಜಿ & ಐಜಿಪಿ, ಎಸ್​ಪಿಗೆ ಟ್ಯಾಗ್ ಮಾಡಿ ಸಾದಿಕ್ ಪಾಷಾ ಟ್ವೀಟ್ ಮಾಡಿದ್ದಾರೆ. 

ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಧೈರ್ಯವಂತನಲ್ಲ. ಆದರೆ ಇದಕ್ಕೆ ಕಾರಣ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು. ಸೂಕ್ತ ಕ್ರಮ ಕೈಗೊಳ್ಳದೆ ಅಧಿಕಾರಕ್ಕಾಗಿ ಮೌನದಲ್ಲಿರುವ ಮಾನ್ಯ ಬಸವರಾಜ ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ತಾವು ಗೃಹ ಸಚಿವರು ಎಂಬ ಪರಿಜ್ಞಾನವಿಲ್ಲದೆ ಅವೈಜ್ಞಾನಿಕ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಈ ನಿರ್ಧಾರ ಮಾಡಿದ್ದೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

Tumkuru Muslim Social worker threatens CM Bommai of suicide due to Hindu outfits campaign against Muslims. He has tweeted this directly to CM Bommai.