ಅನಂತಪುರದ ದೇವರ ಮೊಸಳೆ ಇನ್ನಿಲ್ಲ ! ಭಕ್ತರನ್ನು ಬಿಟ್ಟಗಲಿದ ಬಬಿಯಾ 

10-10-22 10:58 am       HK News Desk   ದೇಶ - ವಿದೇಶ

ಸರೋವರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ಮೊಸಳೆ 'ಬಬಿಯಾ' ಕೊನೆಯುಸಿರೆಳೆದಿದೆ.

ಕಾಸರಗೋಡು, ಅ.10 : ಸರೋವರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ಮೊಸಳೆ 'ಬಬಿಯಾ' ಕೊನೆಯುಸಿರೆಳೆದಿದೆ. 

ದೇವಸ್ಥಾನವನ್ನು ಆವರಿಸಿಕೊಂಡಿದ್ದ ಕೆರೆಯಿಂದಾಗಿ ಇಲ್ಲಿಗೆ ಸರೋವರ ಕ್ಷೇತ್ರ ಎಂದು ಹೆಸರಾಗಿತ್ತು. ಇಲ್ಲಿನ ಕೆರೆಯಲ್ಲಿ ಹಲವಾರು ವರ್ಷಗಳಿಂದ ಇದ್ದ ಮೊಸಳೆಯನ್ನು ಭಕ್ತರು ಬಬಿಯಾ ಎಂದು ಕರೆಯುತ್ತಿದ್ದರು. ಪ್ರತಿನಿತ್ಯ ಪೂಜೆಯ ಬಳಿಕ ಅರ್ಚಕರೇ ಮೊಸಳೆಗೆ ನೈವೇದ್ಯ ಅರ್ಪಿಸುತ್ತಿದ್ದರು. ಕೆಲವೊಮ್ಮೆ ಮೊಸಳೆ ಕೆರೆಯಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಿತ್ತು. ಹಲವಾರು ಭಕ್ತರು ಇಲ್ಲಿನ ದೇವರ ಮೊಸಳೆ ನೋಡುವುದಕ್ಕಾಗಿಯೇ ತೆರಳುತ್ತಿದ್ದರು. 

ದೇವರ ನೈವೇದ್ಯವೇ ಬಬಿಯಾಗೆ ನಿತ್ಯ ಆಹಾರವಾಗಿತ್ತು. ಕೆರೆಗೆ ಭಕ್ತರು ಇಳಿಯುತ್ತಿದ್ದರೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳಿಲ್ಲ. ಹೀಗಾಗಿ ಅನಂತದ್ಮನಾಭ ಸ್ವಾಮಿಯೇ ಮೊಸಳೆಯ ರೂಪದಲ್ಲಿ ದರ್ಶನ ನೀಡುತ್ತಿದ್ದಾನೆ ಎಂಬ ಪ್ರತೀತಿ ಬೆಳೆದಿತ್ತು. ಸೋಮವಾರ ಬೆಳಗ್ಗೆ ಮೃತಪಟ್ಟ ಮೊಸಳೆಯನ್ನು ಅರ್ಚಕರು ಆರತಿ ಎತ್ತಿ ಭಕ್ತಿಪೂರ್ವಕ ನಮಿಸಿದರು. ಬಳಿಕ ದಫನ ಮಾಡಲಾಗಿದೆ.

Babiya the guardian of the Ananthapura Lake Temple that stands in the namesake village in the Kasaragod District of Kerala is no more.