ಹಿಂದು ಎನ್ನುವುದು ಭೌಗೋಳಿಕ ದೃಷ್ಟಿ, ಭಾರತೀಯರೆಲ್ಲ ಹಿಂದುಗಳೇ, ಹಿಂದು ಎನ್ನಲು ಇಷ್ಟಪಡುತ್ತೇನೆ ; ಕೇರಳ ರಾಜ್ಯಪಾಲ 

29-01-23 01:38 pm       HK News Desk   ದೇಶ - ವಿದೇಶ

ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪಕರು ಮತ್ತು ಶಿಕ್ಷಣ ತಜ್ಞರಾಗಿದ್ದ ಸರ್‌ ಸೈಯದ್‌ ಅಹ್ಮದ್‌ ಖಾನ್‌ ಹಿಂದೊಮ್ಮೆ ತನ್ನನ್ನು ಹಿಂದು ಎಂದು ಕರೆಯಬೇಕು ಎಂದು ಹೇಳಿಕೆ ನೀಡಿದ್ದರು.

ತಿರುವನಂತಪುರಂ, ಜ.29: ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪಕರು ಮತ್ತು ಶಿಕ್ಷಣ ತಜ್ಞರಾಗಿದ್ದ ಸರ್‌ ಸೈಯದ್‌ ಅಹ್ಮದ್‌ ಖಾನ್‌ ಹಿಂದೊಮ್ಮೆ ತನ್ನನ್ನು ಹಿಂದು ಎಂದು ಕರೆಯಬೇಕು ಎಂದು ಹೇಳಿಕೆ ನೀಡಿದ್ದರು. ಹಿಂದು ಎನ್ನುವುದು ಭೌಗೋಳಿಕ ದೃಷ್ಟಿಯಿಂದ ಹೇಳುವುದು. ಭಾರತೀಯರೆಲ್ಲ ಹಿಂದುಗಳೇ. ಹಾಗಾಗಿ ನಾನು ಕೂಡ ಹಿಂದು ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಕೇರಳದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಹೇಳಿದ್ದಾರೆ.

ತಿರುವನಂತಪುರದಲ್ಲಿ ಉತ್ತರ ಅಮೆರಿಕದ ಕೇರಳ ಹಿಂದೂಗಳ ಸಂಘಟನೆ (ಕೆಎಚ್‌ಎನ್‌ಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರಿಫ್‌ ಖಾನ್‌ ಹೇಳಿರುವ ಮಾತುಗಳು ಗಮನ ಸೆಳೆದಿವೆ. 

ನೀವು ವಿದೇಶದಲ್ಲಿ ನೆಲೆಸಿದವರು ನಮ್ಮನ್ನು ಯಾಕೆ ಹಿಂದುಗಳೆಂದು ಪರಿಗಣಿಸಲ್ಲ. ನಾನು ಹಿಂದು ಎನ್ನುವುದು ಒಂದು ಧಾರ್ಮಿಕ ಪದವೆಂಬುದನ್ನು ಪರಿಗಣಿಸುವುದಿಲ್ಲ. ಹಿಂದು ಎನ್ನುವುದನ್ನು ಭೌಗೋಳಿಕ ದೃಷ್ಟಿಯಿಂದ ನೋಡುತ್ತೇನೆ. ಭಾರತದಲ್ಲಿ ಯಾರು ಜನಿಸಿದ್ದಾರೋ, ಈ ದೇಶದಲ್ಲಿ ತಯಾರಾದ ಆಹಾರವನ್ನು ಯಾರು ಸೇವಿಸುವರೋ, ಭಾರತದ ನದಿಗಳ ನೀರನ್ನು ಯಾರು ಕುಡಿಯುವರೋ,  ಅವರೆಲ್ಲರೂ ತಮ್ಮನ್ನು ತಾವು ಹಿಂದುಗಳೆಂದೇ ಪರಿಗಣಿಸಬೇಕು. ಹೀಗಾಗಿ, ಸರ್‌ ಸೈಯದ್‌ ಅಹ್ಮದ್‌ ಖಾನ್‌ ಮಾತುಗಳಿಗೆ ನನ್ನ ಪೂರ್ಣ ಬೆಂಬಲ ಇದೆ. ನನ್ನನ್ನು ಹಿಂದು ಎಂದೇ ಕರೆಯುವಂತೆ ಕೇಳಿಕೊಳ್ಳುತ್ತೇನೆ ಎಂದವರು ಹೇಳಿದ್ದಾರೆ.

ವಸಾಹತುಶಾಹಿ ಯುಗದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್‌ನಂತಹ ಪರಿಭಾಷೆಗಳನ್ನು ಬಳಸುವುದು ತಪ್ಪಲ್ಲ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಬ್ರಿಟಿಷರು ನಾಗರಿಕರ ಸಾಮಾನ್ಯ ಹಕ್ಕುಗಳನ್ನು ನಿರ್ಧರಿಸಲು ಸಮುದಾಯಗಳನ್ನು ಆಧಾರ ಮಾಡಿಕೊಂಡಿದ್ದರು. ಅದರಿಂದಾಗಿ ಜಾತಿ, ಮತಗಳಿಗೆ ಪ್ರಾಮುಖ್ಯತೆ ಸಿಕ್ಕಿತ್ತು. ಸ್ವಾತಂತ್ರ್ಯಕ್ಕೆ ಮೊದಲೇ ಸನಾತನ ಧರ್ಮದಲ್ಲಿ ನಂಬಿಕೆಯಿಟ್ಟಿದ್ದ ದೇಶದ ರಾಜರು ಮತ್ತು ಆಡಳಿತಗಾರರು ಎಲ್ಲಾ ಧಾರ್ಮಿಕ ಗುಂಪುಗಳನ್ನು ಮುಕ್ತ ಭಾವಗಳಿಂದ ಸ್ವೀಕರಿಸುತ್ತಿದ್ದರು. ವ್ಯತ್ಯಾಸ ತೋರುತ್ತಿರಲಿಲ್ಲ ಎಂದವರು ಹೇಳಿದ್ದಾರೆ.

ಭಾರತ ಸ್ವಾತಂತ್ರ್ಯಗೊಂಡಾಗ ಈ ದೇಶ ಬಹಳ ದಿನಗಳ ಕಾಲ ಬದುಕುವುದಿಲ್ಲ ಎಂದು ಬ್ರಿಟಿಷರು ಅಂದಾಜಿಸಿದ್ದರು. ಭಾರತೀಯರು ಪರಸ್ಪರ ಜಗಳವಾಡಿ ಇಬ್ಭಾಗವಾಗಲಿದ್ದಾರೆ ಎಂದು ಊಹಿಸಿದ್ದರು. ಆದರೆ ಭಾರತವು ತನ್ನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಿರುವುದು ಮಾತ್ರವಲ್ಲ, ಏಕತೆಯ ಪಥದಲ್ಲಿ ಅತ್ಯಂತ ದೃಢವಾಗಿ ಸಾಗುತ್ತಿದೆ. ಇದು ಕೆಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಹೇಳಿದ್ದಾರೆ.

Kerala Governor Arif Mohammed Khan on Saturday recalled the words of Sir Syed Ahmed Khan, founder of the Aligarh Muslim University who was said to have urged to call him a "Hindu" over a century ago. While speaking at a Hindu conclave in Thiruvananthapuram, the Governor quoted the reported words of Sir Syed Khan that "you must call me a Hindu" which he had made during an Arya Samaj meeting.