Kasaragod Manjeshwar accident, Ambulance: ಮಂಜೇಶ್ವರ ಹೊಸ ಹೆದ್ದಾರಿಯಲ್ಲಿ ಭೀಕರ ಅಪಘಾತ ;  ಏಕಮುಖ ರಸ್ತೆಯಲ್ಲಿ ತಪ್ಪಾಗಿ ನುಗ್ಗಿಬಂದಿದ್ದ ಆಂಬುಲೆನ್ಸ್ - ಕಾರು ಮುಖಾಮುಖಿ ಡಿಕ್ಕಿ, ಕೊಲ್ಲೂರಿನಿಂದ ಮರಳುತ್ತಿದ್ದ ಮೂವರು ಸಾವು, ಅಪ್ಪಚ್ಚಿಯಾದ ಕಾರು

07-05-24 03:26 pm       HK News Desk   ದೇಶ - ವಿದೇಶ

ಹೊಸತಾಗಿ ನಿರ್ಮಾಣಗೊಂಡಿರುವ ತಲಪಾಡಿ – ಮಂಜೇಶ್ವರ – ಕಾಸರಗೋಡು ಹೆದ್ದಾರಿಯಲ್ಲಿ ಭೀಕರ ಅಪಘಾತ ಉಂಟಾಗಿದ್ದು, ಕಾರು ಮತ್ತು ಆಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಜೇಶ್ವರ, ಮೇ.7: ಹೊಸತಾಗಿ ನಿರ್ಮಾಣಗೊಂಡಿರುವ ತಲಪಾಡಿ – ಮಂಜೇಶ್ವರ – ಕಾಸರಗೋಡು ಹೆದ್ದಾರಿಯಲ್ಲಿ ಭೀಕರ ಅಪಘಾತ ಉಂಟಾಗಿದ್ದು, ಕಾರು ಮತ್ತು ಆಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಂಡೈ ಕಾರಿನಲ್ಲಿ ಕೊಲ್ಲೂರು ಹೋಗಿ ಬರುತ್ತಿದ್ದ ತೃಶ್ಶೂರು ಜಿಲ್ಲೆಯ ಇರಿಂಜಾಲಕುಡ ನಿವಾಸಿ ಪಿ. ಶಿವಕುಮಾರ್ (54) ಹಾಗೂ ಅವರ ಮಕ್ಕಳಾದ ಶರತ್ (23) ಮತ್ತು ಸೌರವ್ (15) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.

ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ವೇಗವಾಗಿ ತೆರಳುತ್ತಿದ್ದ ಆಂಬುಲೆನ್ಸ್ ವಾಹನ ಮಂಜೇಶ್ವರದಲ್ಲಿ ಏಕಮುಖದ ಹೆದ್ದಾರಿಗೆ ತಪ್ಪಾಗಿ ಎಂಟ್ರಿ ಕೊಟ್ಟಿದೆ. ಕಾಸರಗೋಡಿನಲ್ಲಿ ನಿನ್ನೆ ನಡೆದಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ಮಂಗಳೂರಿಗೆ ಕರೆತರುತ್ತಿದ್ದ ಆಂಬುಲೆನ್ಸ್ ಸರ್ವಿಸ್ ರಸ್ತೆಯ ಮೂಲಕ ಬಲಭಾಗಕ್ಕೆ ತಿರುಗಿ ತಲಪಾಡಿಯಿಂದ ಕಾಸರಗೋಡಿನತ್ತ ತೆರಳುವ ಹೆದ್ದಾರಿಗೆ ತಪ್ಪಾಗಿ ನುಗ್ಗಿತ್ತು. ಅಲ್ಲದೆ, ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗಲೇ ಎದುರಿನಿಂದ ಅತಿ ವೇಗದಲ್ಲಿ ಬಂದ ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ಮಂಗಳವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಕಾರನ್ನು ನೂರು ಮೀಟರ್ ದೂರದ ವರೆಗೂ ಆಂಬುಲೆನ್ಸ್ ಎಳೆದೊಯ್ದಿದ್ದು, ಎರಡೂ ವಾಹನಗಳು ಪಲ್ಟಿಯಾಗಿ ಬಿದ್ದಿವೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದರೊಳಗಿದ್ದ ಪ್ರಯಾಣಿಕರು ತೀವ್ರ ಗಾಯಗೊಂಡು ಸಿಲುಕಿಕೊಂಡಿದ್ದರು. ಆಂಬುಲೆನ್ಸ್ ವಾಹನದಲ್ಲಿದ್ದ ರೋಗಿ ಸಹಿತ ಜೊತೆಗಿದ್ದವರು ಮತ್ತು ಚಾಲಕ ತೀವ್ರ ಗಾಯಗೊಂಡಿದ್ದಾರೆ. ಆಂಬುಲೆನ್ಸ್ ನಲ್ಲಿ ಮಹಿಳಾ ರೋಗಿಯಿದ್ದು, ಅವರ ಜೊತೆಗೆ ಗಂಡನೂ ಇದ್ದರು.

ತೃಶ್ಶೂರು ಜಿಲ್ಲೆಯ ಇರಿಂಜಾಲಕುಡ ನಿವಾಸಿ ಶಿವಕುಮಾರ್ ದುಬೈನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ರಜೆಯಲ್ಲಿ ಬಂದಿದ್ದರು. ಬೆಂಗಳೂರಿನಲ್ಲಿರುವ ಸಂಬಂಧಿಕರನ್ನು ನೋಡಿ ಬರಲೆಂದು ಹುಂಡೈ ಇಯಾನ್ ಕಾರಿನಲ್ಲಿ ತೆರಳಿದ್ದರು. ಹಿಂತಿರುಗಿ ಬರುತ್ತಿದ್ದಾಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಮನೆಯತ್ತ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಂದೆ, ಮಕ್ಕಳು ಸಾವನ್ನಪ್ಪಿದರೆ, ಪತ್ನಿ ಗಾಯಗೊಂಡಿದ್ದಾರೆ. ಕಾರು ಪೂರ್ತಿ ನಜ್ಜುಗುಜ್ಜಾಗಿದ್ದು, ಅದರ ಒಳಗೆ ಸಿಲುಕಿದ್ದವರನ್ನು ಹೊರಗೆ ತೆಗೆಯಲು ಸ್ಥಳೀಯರು ಹರಸಾಹಸ ನಡೆಸಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kasaragod Manjeshwar accident, three killed after ambulance rams over car. Three people returning from Mookambika temple in Kollur were killed when a speeding ambulance with a patient crashed into their Hyundai Eon near Talapady toll gate on the border of Kasaragod's Manjeshwar, said police. The deceased are P Sivakumar (54) from Thrissur's Irinjalakuda, and his sons Sarath S Menon (23) and Sourav (15).