Air India Plane Crash, Black Box Recovered: ವಿಮಾನ ದುರಂತದಲ್ಲಿ 265ಕ್ಕೂ ಹೆಚ್ಚು ಸಾವು ; ಒಂದು ಬ್ಲಾಕ್ ಬಾಕ್ಸ್ ಪತ್ತೆ, ನೇರ ಲಂಡನ್ ಸಂಚಾರಕ್ಕಾಗಿ 1.25 ಲಕ್ಷ ಲೀಟರ್ ಇಂಧನ ತುಂಬಿದ್ದರು, ಕಟ್ಟಡಕ್ಕೆ ಬಡಿಯುತ್ತಲೇ ಬ್ಲಾಸ್ಟ್..! ತನಿಖೆಗೆ ಬಂದ ಯುಕೆ, ಅಮೆರಿಕನ್ ಏಜನ್ಸಿಗಳು 

13-06-25 10:42 pm       HK News Desk   ದೇಶ - ವಿದೇಶ

ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲಿ ಅಳವಡಿಸಲಾಗಿದ್ದ ಒಂದು ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಹಾಸ್ಟೆಲ್ ಕಟ್ಟಡದ ಮೇಲ್ಭಾಗದಲ್ಲಿ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಪತ್ತೆಯಾಗಿದ್ದು, ಇನ್ನೊಂದು ಬಾಕ್ಸ್ ಪತ್ತೆಗಾಗಿ ಹುಡುಕಾಟ ನಡೆದಿದೆ. ಕೊನೆಕ್ಷಣದಲ್ಲಿ ಪೈಲಟ್ ಇನ್ನಿತರ ಪ್ರಮುಖರು ಮಾತನಾಡುವುದನ್ನು ರೆಕಾರ್ಡ್ ಮಾಡುವ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಮತ್ತೊಂದು ಬ್ಲಾಕ್ ಬಾಕ್ಸ್) ಇನ್ನೂ ಪತ್ತೆಯಾಗಿಲ್ಲ. ಕೇಂದ್ರೀಯ ತನಿಖಾ ಏಜನ್ಸಿಗಳಾದ ಎನ್ಐಎ, ಸಿಬಿಐ ಮತ್ತಿತರ ತಂಡಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿವೆ.

ಅಹ್ಮದಾಬಾದ್, ಜೂನ್ 13 : ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲಿ ಅಳವಡಿಸಲಾಗಿದ್ದ ಒಂದು ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಹಾಸ್ಟೆಲ್ ಕಟ್ಟಡದ ಮೇಲ್ಭಾಗದಲ್ಲಿ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಪತ್ತೆಯಾಗಿದ್ದು, ಇನ್ನೊಂದು ಬಾಕ್ಸ್ ಪತ್ತೆಗಾಗಿ ಹುಡುಕಾಟ ನಡೆದಿದೆ. ಕೊನೆಕ್ಷಣದಲ್ಲಿ ಪೈಲಟ್ ಇನ್ನಿತರ ಪ್ರಮುಖರು ಮಾತನಾಡುವುದನ್ನು ರೆಕಾರ್ಡ್ ಮಾಡುವ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಮತ್ತೊಂದು ಬ್ಲಾಕ್ ಬಾಕ್ಸ್) ಇನ್ನೂ ಪತ್ತೆಯಾಗಿಲ್ಲ. ಕೇಂದ್ರೀಯ ತನಿಖಾ ಏಜನ್ಸಿಗಳಾದ ಎನ್ಐಎ, ಸಿಬಿಐ ಮತ್ತಿತರ ತಂಡಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿವೆ. ವಿಮಾನ ದುರಂತದಲ್ಲಿ 241 ಪ್ರಯಾಣಿಕ ಮತ್ತು ಸಿಬಂದಿ ಸೇರಿ ಸ್ಥಳದಲ್ಲಿದ್ದವರು ಒಟ್ಟು 265ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.  

ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ದುರಂತ ಸ್ಥಳಕ್ಕೆ ಬಂದಿದ್ದು, ದುರಂತದಲ್ಲಿ ಪವಾಡ ಎನ್ನುವಂತೆ ಬದುಕುಳಿದಿರುವ ಏಕೈಕ ವ್ಯಕ್ತಿ ರಮೇಶ್ ವಿಶ್ವಾಸ್ ಕುಮಾರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಮರ್ಜೆನ್ಸಿ ಬಾಗಿಲ ಬಳಿಯಲ್ಲೇ ಸೀಟ್ ನಂ 11ರಲ್ಲಿ ಕುಳಿತಿದ್ದ ರಮೇಶ್, ವಿಮಾನವು ಕಟ್ಟಡಕ್ಕೆ ಅಪ್ಪಳಿಸುತ್ತಲೇ ಬಾಗಿಲು ಓಪನ್ ಆಗಿ ಹೊರಕ್ಕೆ ಬಿದ್ದಿದ್ದಾರೆ. ಇದರಿಂದ ಬಯಲು ಪ್ರದೇಶಕ್ಕೆ ಎಸೆಯಲ್ಪಟ್ಟಿದ್ದ ರಮೇಶ್ ಬದುಕಿದ್ದು, ಇವರು ಹೊರ ಬಿದ್ದ ನಂತರವೇ ವಿಮಾನ ಬ್ಲಾಸ್ಟ್ ಆಗಿತ್ತು. ದುರಂತ ನಡೆದ ಸ್ಥಳದಲ್ಲಿ ಬ್ಲಾಸ್ಟ್ ಆಗಿದ್ದರಿಂದ ಒಂದೇ ಸಮಯಕ್ಕೆ ಒಂದು ಸಾವಿರ ಡಿಗ್ರಿ ಸೆಲ್ಸಿಯಸ್ ಉಷ್ಣತೆ ಏರಿಕೆಯಾಗಿತ್ತು. ಇದರಿಂದಾಗಿ ತುರ್ತು ಕಾರ್ಯಾಚರಣೆಗೂ ತೊಡಕಾಗಿತ್ತು. ಘಟನೆ ಬಗ್ಗೆ ತನಿಖೆಗಾಗಿ ಯುಕೆ ಮತ್ತು ಅಮೆರಿಕದ ತ‌ನಿಖಾ ಏಜನ್ಸಿಗಳು ಕೂಡ ಅಹ್ಮದಾಬಾದ್ ಬಂದಿಳಿದಿವೆ. 

ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ವಿಮಾನ ಬಿದ್ದು ಬ್ಲಾಸ್ಟ್ ಆಗಿತ್ತು. ಬೋಯಿಂಗ್ ವಿಮಾನ ಆಗಿದ್ದರಿಂದ ನೇರವಾಗಿ ಸಂಚರಿಸಿ ಹತ್ತು ಗಂಟೆಗಳಲ್ಲಿ ಲಂಡನ್ ತಲುಪುವ ಗುರಿಯಿದ್ದುದರಿಂದ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು. ಇದರಿಂದಾಗಿ ವಿಮಾನವು ಕಟ್ಟಡಕ್ಕೆ ಡಿಕ್ಕಿಯಾಗುತ್ತಲೇ ಇಂಧನ ಟ್ಯಾಂಕ್ ಒಡೆದು ಬ್ಲಾಸ್ಟ್ ಆಗಿದ್ದು, ಇಡೀ ಸ್ಥಳಕ್ಕೆ ಪೆಟ್ರೋಲ್ ಚೆಲ್ಲಿದ್ದರಿಂದ ಬಾಂಬ್ ಇಟ್ಟಂತಾಗಿತ್ತು. ಇದರಿಂದಾಗಿ ವಿಮಾನದಲ್ಲಿದ್ದವರು ಸೇರಿದಂತೆ ಹಾಸ್ಟೆಲ್ ಕಟ್ಟಡದಲ್ಲಿದ್ದವರು, ಅಲ್ಲಿಯೇ ಕೆಳಗಡೆ ನಿಂತುಕೊಂಡಿದ್ದವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ನಾಲ್ವರು ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಸ್ಥಳದಲ್ಲಿದ್ದ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಎಷ್ಟು ಮಂದಿ ಅಲ್ಲಿದ್ದರು, ಯಾರೆಲ್ಲ ಸತ್ತಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಇಡೀ ಕಟ್ಟಡ ಮತ್ತು ಆ ಜಾಗ ವಿಮಾನದೊಂದಿಗೆ ಬ್ಲಾಸ್ಟ್ ಆಗಿದ್ದರಿಂದ ಅಲ್ಲಿದ್ದವರೆಲ್ಲ ಗುರುತು ಸಿಗದಂತೆ ಉರಿದು ಹೋಗಿದ್ದಾರೆ.  

ದುರಂತದಲ್ಲಿ ಮೃತಪಟ್ಟ ಒಬ್ಬೊಬ್ಬರದು ಒಂದೊಂದು ಕತೆ ಇದೆ. ಹಾಸ್ಟೆಲ್ ಕಟ್ಟಡದಲ್ಲಿದ್ದ ನಾಲ್ವರು ಮೃತರಲ್ಲಿ ಜೈಪ್ರಕಾಶ್ ಚೌಧರಿ ಒಬ್ಬರು. ಬರ್ಮಾರ್ ಜಿಲ್ಲೆಯ ಕಾರ್ಮಿಕ ಕುಟುಂಬದಿಂದ ಬಂದಿದ್ದ ಜೈಪ್ರಕಾಶ್, ಅವರ ಕುಟುಂಬದಲ್ಲಿ ಮೊದಲ ಬಾರಿಗೆ ಮೆಡಿಕಲ್ ಸೀಟು ಪಡೆದದಿದ್ದವರಂತೆ. ಬಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡನೇ ವರ್ಷದಲ್ಲಿದ್ದ ಜೈಪ್ರಕಾಶ್, ಘಟನೆ ಸಂದರ್ಭದಲ್ಲಿ ಹಾಸ್ಟೆಲ್ ಕಟ್ಟಡದಲ್ಲಿ ಊಟ ಮುಗಿಸಿ ಕೈ ವಾಶ್ ಮಾಡುತ್ತಿದ್ದರು. ಗೋಡೆ ಬದಿಯ ಬೇಸಿನ್ನಲ್ಲಿ ಕೈ ವಾಶ್ ಮಾಡುತ್ತಿದ್ದಾಗಲೇ ವಿಮಾನ ಬಂದಪ್ಪಳಿಸಿದ್ದು, ಗೋಡೆ ಬದಿಯಲ್ಲಿದ್ದರಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಮಧ್ಯಾಹ್ನ ಸಮಯವಾಗಿದ್ದರಿಂದ 100ರಷ್ಟು ವಿದ್ಯಾರ್ಥಿಗಳು ಹಾಸ್ಟೆಲಿಗೆ ಬಂದು ಊಟದಲ್ಲಿ ನಿರತರಾಗಿದ್ದರು. ಘಟನೆಯಲ್ಲಿ ಕಟ್ಟಡದ ಪಕ್ಕದಲ್ಲಿ ಅಂಗಡಿ ಹೊಂದಿದ್ದ ಮಹಿಳೆಯ ಪುತ್ರನೂ ಸಾವನ್ನಪ್ಪಿದ್ದಾನೆ.

In one of the deadliest aviation disasters in recent years, an Air India Boeing aircraft crashed into a hostel building belonging to BJ Medical College in Ahmedabad, claiming the lives of over 265 people, including passengers, crew, and individuals on the ground.