ಖಮೇನಿ ಹತ್ಯೆಗೆ ಕಾಶ್ಮೀರದಲ್ಲಿ ಬೀದಿಗಿಳಿದ ಶಿಯಾಗಳು ; ಪ್ರತಿಭಟನೆಗೆ ಪೊಲೀಸರ ನಿರ್ಬಂಧ, ಸಿಆರ್ ಪಿಎಫ್ ನಿಯೋಜನೆ, ಮೊಬೈಲ್- ಇಂಟರ್ನೆಟ್ ಮೇಲೆ ನಿಯಂತ್ರಣ

02-03-26 03:10 pm       HK News Staffer   ದೇಶ - ವಿದೇಶ

ಇರಾನ್ ನಾಯಕ ಅಯತೊಲ್ಲಾ ಅಲ್ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಶಿಯಾ ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದು ಪ್ರತಿಭಟನೆಗೆ ನಿರ್ಬಂಧ ವಿಧಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 15 ಲಕ್ಷಕ್ಕೂ ಹೆಚ್ಚು ಶಿಯಾ ಮುಸ್ಲಿಮರಿದ್ದಾರೆ.

ನವದೆಹಲಿ, ಮಾರ್ಚ್ 2: ಇರಾನ್ ನಾಯಕ ಅಯತೊಲ್ಲಾ ಅಲ್ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಶಿಯಾ ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದು ಪ್ರತಿಭಟನೆಗೆ ನಿರ್ಬಂಧ ವಿಧಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 15 ಲಕ್ಷಕ್ಕೂ ಹೆಚ್ಚು ಶಿಯಾ ಮುಸ್ಲಿಮರಿದ್ದಾರೆ.

ಕಾಶ್ಮೀರದಲ್ಲಿ ಹಲವು ಕಡೆ ಪ್ರತಿಭಟನೆಗೆ ನಿರ್ಬಂಧ ಹೇಳಲಾಗಿದೆ. ಅಲ್ಲದೆ,ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಘಂಟಾ ಘರ್ ನಲ್ಲಿ ಪೊಲೀಸರು ರಸ್ತೆಗೆ ಅಲ್ಲಲ್ಲಿ ತಡೆಬೇಲಿ ಹಾಕಿದ್ದಾರೆ. ನಗರದಲ್ಲಿ ಪ್ರತಿಭಟನೆ ತಪ್ಪಿಸಲು ಪೊಲೀಸ್ ಮತ್ತು ಸಿಆರ್ ಪಿಎಫ್ ನಿಯೋಜಿಸಲಾಗಿದೆ. ಖಮೇನಿ ಹತ್ಯೆ ಬಳಿಕ ಕಾಶ್ಮೀರದ ಅನಂತನಾಗ್, ಬುದ್ಗಾಂವ್, ಸೈದಾ ಕಡಲ್, ಲಾಲ್ ಚೌಕ, ಬಂಡೀಪುರ್, ಪುಲ್ವಾಮಾದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದವು. 

ಪ್ರತಿಭಟನೆಗಿಳಿದ ಜನರು ತಮ್ಮ ಎದೆಗೆ ಚಾಟಿಯಿಂದ ಹೊಡೆಯುತ್ತ ಇಸ್ರೇಲ್- ಅಮೆರಿಕ ವಿರುದ್ಧ ಘೋಷಣೆ ಕೂಗಿದ್ದಾರೆ. ಇದೀಗ ಶಿಯಾ ಪ್ರಾಬಲ್ಯ ಇರುವಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಲಾಲ್ ಚೌಕ್ ನಗರವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಇಂಟರ್ನೆಟ್ ವೇಗಕ್ಕೆ ನಿಯಂತ್ರಣ ಹೇರಲಾಗಿದ್ದು ವೈರಲ್ ವಿಡಿಯೋಗಳಿಂದ ಜನರು ಉದ್ರೇಕಗೊಳ್ಳದಂತೆ ತಡೆಯುವ ಕೆಲಸ ಮಾಡಿದ್ದಾರೆ. ಶ್ರೀನಗರದಲ್ಲಿಯೂ ನಿರ್ಬಂಧ ಹೇರಲಾಗಿದೆ. ಇದೇ ವೇಳೆ, ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ಕಾಶ್ಮೀರಿ ಜನರಿಗೆ ತಮ್ಮ ಶೋಕಾಚರಣೆ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ.

ಮುತಾಹಿದ್ ಮಜ್ಲಿಸ್ ಉಲಮಾ ಸಂಘಟನೆ, ಮೆಹಬೂಬ ಮುಫ್ತಿ ಅವರ ಪಿಡಿಪಿ ಮುಷ್ಕರಕ್ಕೆ ಕರೆಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರು ನಿರ್ಬಂಧಗಳನ್ನು ವಿಧಿಸಿದ್ದಾರೆ.