ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಭಾರತೀಯ ಇಂಜಿನಿಯರ್ ಅಳಲು ವೈರಲ್

03-03-26 04:14 pm       HK News Staffer   ದೇಶ - ವಿದೇಶ

ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾನ್ ಮೇಲೆ ಯುದ್ಧ ಘೋಷಿಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನ ಸ್ಥಿತಿ ಜಾಗತಿಕ ವಿಮಾನಯಾನ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದೆ. ಇದರ ಪರಿಣಾಮ ಲಕ್ಷಾಂತರ ಪ್ರಯಾಣಿಕರು, ಅದರಲ್ಲೂ ಅನೇಕ ಭಾರತೀಯರು ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.

ಮಾಸ್ಕೋ, ಮಾರ್ಚ್ 3: ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾನ್ ಮೇಲೆ ಯುದ್ಧ ಘೋಷಿಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನ ಸ್ಥಿತಿ ಜಾಗತಿಕ ವಿಮಾನಯಾನ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದೆ. ಇದರ ಪರಿಣಾಮ ಲಕ್ಷಾಂತರ ಪ್ರಯಾಣಿಕರು, ಅದರಲ್ಲೂ ಅನೇಕ ಭಾರತೀಯರು ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ನಡುವೆ, ಮಾಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯ ಇಂಜಿನಿಯರ್ ಒಬ್ಬರು “ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ” ಎಂದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರಿದಾಡುತ್ತಿದೆ.

ಮುಂಬೈ ಮೂಲದ ಇಂಜಿನಿಯರ್ ಸುನಿಲ್ ಗುಪ್ತಾ ಎಂಬವರು ಮಾಸ್ಕೋದಲ್ಲಿ ತಾನು ಸಂಪೂರ್ಣ ಒಂಟಿಯಾಗಿದ್ದೇನೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ. ಅವರು ಇತಿಹಾದ್ ಏರ್‌ವೇಸ್ ಮತ್ತು ಮೇಕ್ ಮೈ ಟ್ರಿಪ್ ಸೇವೆಗಳನ್ನು ಟೀಕಿಸಿದ್ದು, ಮುನ್ಸೂಚನೆ ಇಲ್ಲದೆ ವಿಮಾನ ರದ್ದುಗೊಂಡ ಕಾರಣ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಹೇಳಿದ್ದಾರೆ. “ರಷ್ಯಾದಲ್ಲಿ ವೀಸಾ ಅಥವಾ ಮಾಸ್ಟರ್‌ಕಾರ್ಡ್ ಸ್ವೀಕಾರವಾಗುತ್ತಿಲ್ಲ. ಊಟ, ನೀರಿಗೆ ಹಣವೂ ಇಲ್ಲ. ನಾನು ಇಲ್ಲಿ ಭಿಕ್ಷುಕನಂತೆ ನಿಂತಿದ್ದೇನೆ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡಿದ್ದು, ಇದರಿಂದ ಹಲವು ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಹೀಗಾಗಿ ಸಾವಿರಾರು ವಿಮಾನಗಳು ರದ್ದಾಗಿದ್ದು, ಜಾಗತಿಕ ಪ್ರಯಾಣ ವ್ಯವಸ್ಥೆ ಅಸ್ಥಿರವಾಗಿದೆ. ಸುನಿಲ್ ಗುಪ್ತಾ ಅವರು ವಿಮಾನಯಾನ ಸಂಸ್ಥೆ ಮತ್ತು ಬುಕ್ಕಿಂಗ್ ಪ್ಲಾಟ್‌ ಫಾರ್ಮ್‌ಗಳಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ. ಹೋಟೆಲ್ ವೋಚರ್ ಅಥವಾ ಆಹಾರ ಸಹಾಯವನ್ನೂ ನೀಡಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಭಾರತ ಸರ್ಕಾರದ ರಾಯಭಾರ ಕಚೇರಿ ಮಧ್ಯಪ್ರವೇಶಿಸಿದೆ ಎಂದು ವರದಿಯಾಗಿದೆ. ಕೆಲವು ರಾಜಕೀಯ ನಾಯಕರು ಕೂಡ ಏರ್‌ಲೈನ್ಸ್ ಮತ್ತು ಟ್ರಾವೆಲ್ ಕಂಪನಿಗಳ ಕಾರ್ಯ ವೈಖರಿಯನ್ನು ಟೀಕಿಸಿದ್ದಾರೆ. ನಂತರ ಮೇಕ್ ಮೈ ಟ್ರಿಪ್ ತಂಡವು ಸುನಿಲ್‌ಗೆ ತಾತ್ಕಾಲಿಕ ಹೋಟೆಲ್ ವ್ಯವಸ್ಥೆ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಒಂದೇ ದಿನದಲ್ಲಿ 4,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಸೂಚಿಸಲಾಗಿದೆ.