ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ; ವಿದೇಶಿ ಶಕ್ತಿಗಳ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಂದಾಗಬೇಕು, ಗಲ್ಫ್ ದೇಶಗಳಿಗೆ ಇರಾನ್ ಅಧ್ಯಕ್ಷರ ಸಲಹೆ

22-03-26 11:41 am       HK News Staffer   ದೇಶ - ವಿದೇಶ

ಒಂದೆಡೆ ಅಮೆರಿಕ- ಇರಾನ್ ಸಂಘರ್ಷ 24 ದಿನಕ್ಕೆ ಕಾಲಿರಿಸಿದ್ದರೆ ಇದೇ ವೇಳೆ, ಮುಸ್ಲಿಮರ ಪವಿತ್ರ ಹಬ್ಬ ಈದ್ ಅಲ್-ಫಿತರ್ ಸಂದರ್ಭದಲ್ಲಿ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಬೇಕೆಂದು ಇರಾನ್ ಕರೆ ನೀಡಿದೆ. ನಾವು ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ನಮ್ಮ ಗುರಿ ಒಂದೇ ಆಗಿರಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಟೆಹ್ರಾನ್, ಮಾರ್ಚ್ 22: ಒಂದೆಡೆ ಅಮೆರಿಕ- ಇರಾನ್ ಸಂಘರ್ಷ 24 ದಿನಕ್ಕೆ ಕಾಲಿರಿಸಿದ್ದರೆ ಇದೇ ವೇಳೆ, ಮುಸ್ಲಿಮರ ಪವಿತ್ರ ಹಬ್ಬ ಈದ್ ಅಲ್-ಫಿತರ್ ಸಂದರ್ಭದಲ್ಲಿ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಬೇಕೆಂದು ಇರಾನ್ ಕರೆ ನೀಡಿದೆ. ನಾವು ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ನಮ್ಮ ಗುರಿ ಒಂದೇ ಆಗಿರಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಇರಾನ್ ಮೇಲೆ ಯುಎಸ್- ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳ ಬಗ್ಗೆ ಇರಾನ್ ಅಧ್ಯಕ್ಷರು ನೀಡಿರುವ ಹೇಳಿಕೆ ಮಹತ್ವ ಮೂಡಿಸಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೆರಿಕದ ನೆಲೆ ಕಲ್ಪಿಸಲು ಅವಕಾಶ ನೀಡಿದ್ದನ್ನು ಖಂಡಿಸಿದ ಅವರು 'ಮಧ್ಯಪ್ರಾಚ್ಯದ ಇಸ್ಲಾಮಿಕ್ ಅಸೆಂಬ್ಲಿ' ರಚನೆಗಾಗಿ ಒತ್ತಾಯಿಸಿದ್ದಾರೆ. ಗಲ್ಫ್ ದೇಶಗಳು ಶತ್ರುಗಳು ಬೀಸುವ ಬಲೆಗೆ ಬೀಳಬಾರದು ಎಂದಿದ್ದಾರೆ.

ಇರಾನ್ ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಬಯಸುವುದಿಲ್ಲ ಮತ್ತು ಯಾವುದೇ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಗುರಿಯನ್ನು ಹೊಂದಿಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ನೆರೆಹೊರೆಯವರು ಒಗ್ಗೂಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಉಂಟಾಗಿರುವ ಪ್ರಕ್ಷುಬ್ಧತೆ, ಅಸ್ಥಿರತೆ, ನರಮೇಧದ ಕೃತ್ಯಗಳು, ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಇಸ್ರೇಲ್ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ನಾವು ಯುದ್ಧ, ಪ್ರಕ್ಷುಬ್ಧ ಸ್ಥಿತಿಯಾಗುವುದನ್ನು ಬಯಸುವುದಿಲ್ಲ ಎಂದು ನಾವು ಜಗತ್ತಿಗೆ ಘೋಷಿಸುತ್ತೇವೆ. ಯಾವುದೇ ದೇಶವು ತನ್ನನ್ನು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಒತ್ತಾಯಿಸುವುದನ್ನು ನಾವು ಬಯಸುವುದಿಲ್ಲ, ದಾಳಿ ನಡೆಸಲಾಗುತ್ತದೆಯೇ ಅಥವಾ ಇಲ್ಲವೇ ಎಂದು ಕಾದು ನೋಡುತ್ತೇವೆ ಮತ್ತು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ನಾವು ಯಾವುದೇ ರೀತಿಯಲ್ಲಿ ಯೋಚಿಸಿಲ್ಲ ಎಂದು ಪೆಜೆಶ್ಕಿಯಾನ್ ಹೇಳಿಕೆ ನೀಡಿದ್ದಾರೆ.‌

ನಾವು ಒಟ್ಟಾಗಿ ಕೆಲಸ ಮಾಡುವ ಮೂಲಕ ಸಮಸ್ಯೆ ಪರಿಹರಿಸಬಹುದು. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ರಾಷ್ಟ್ರಗಳಿಗೆ ಇದನ್ನು ಹೇಳಬಯಸುತ್ತೇನೆ. ಈ ಪ್ರದೇಶದಲ್ಲಿ ಅಸ್ಥಿರ, ನರಮೇಧ, ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಇರಾನ್ ಕಾರಣ ಎಂದು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಬದಲು ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇರಾನ್ ಇತರ ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಶತ್ರುಗಳು ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೆಜೆಶ್ಕಿಯಾನ್ ಆರೋಪಿಸಿದ್ದಾರೆ.

ಪವಿತ್ರ ರಂಜಾನ್ ತಿಂಗಳಿನಲ್ಲಿ ಇರಾನ್‌ನ ಸರ್ವೋಚ್ಚ ನಾಯಕ, ಕಮಾಂಡರ್‌ಗಳು, ಮಂತ್ರಿಗಳು ಮತ್ತು ನಾಗರಿಕರು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ವಿವರಿಸಿದ್ದಾರೆ. ಮಿನಾಬ್ ಶಾಲೆಯಲ್ಲಿ ನಡೆದ ದಾಳಿಯಲ್ಲಿ ವಿದ್ಯಾರ್ಥಿಗಳ ಸಾವನ್ನು ತಮ್ಮ ಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ. ಜನರು ಏಕತೆ ಮತ್ತು ರಾಷ್ಟ್ರೀಯ ಒಗ್ಗಟ್ಟಿನಿಂದ ಒಗ್ಗೂಡಬೇಕೆಂದು ಒತ್ತಾಯಿಸಿದ್ದಾರೆ.