ಯುದ್ಧ ಪೀಡಿತ ಇರಾನ್‌ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್ರಹ ; ಚಿನ್ನ, ಬೆಳ್ಳಿ ದಾನ ಕೊಟ್ಟ ಮಹಿಳೆಯರು, ಕಣಿವೆ ಜನರ ಔದಾರ್ಯಕ್ಕೆ ಇರಾನ್ ರಾಯಭಾರ ಕಚೇರಿ‌ ಮೆಚ್ಚುಗೆ

23-03-26 11:33 am       HK News Staffer   ದೇಶ - ವಿದೇಶ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಂಕಷ್ಟಕ್ಕೀಡಾಗಿರುವ ಇರಾನ್ ದೇಶದ ನಾಗರಿಕರಿಗೆ ನೆರವಾಗಲು ಕಾಶ್ಮೀರದ ಕಣಿವೆ ದೇಣಿಗೆ ಸಂಗ್ರಹಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಇರಾನ್ ಪರವಾಗಿ ನಿಂತಿರುವ ಕಾಶ್ಮೀರಿಗಳ ಔದಾರ್ಯವನ್ನು ಇರಾನ್ ರಾಯಭಾರ ಕಚೇರಿ ಶ್ಲಾಘಿಸಿದೆ.

ಶ್ರೀನಗರ, ಮಾರ್ಚ್ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಂಕಷ್ಟಕ್ಕೀಡಾಗಿರುವ ಇರಾನ್ ದೇಶದ ನಾಗರಿಕರಿಗೆ ನೆರವಾಗಲು ಕಾಶ್ಮೀರದ ಕಣಿವೆ ದೇಣಿಗೆ ಸಂಗ್ರಹಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಇರಾನ್ ಪರವಾಗಿ ನಿಂತಿರುವ ಕಾಶ್ಮೀರಿಗಳ ಔದಾರ್ಯವನ್ನು ಇರಾನ್ ರಾಯಭಾರ ಕಚೇರಿ ಶ್ಲಾಘಿಸಿದೆ.

ಈದ್ ಹಬ್ಬದ ಮರುದಿನವೇ ಕಣಿವೆಯ ಯುವಕರು ಶ್ರೀನಗರದ ವಿವಿಧೆಡೆ, ವಿಶೇಷವಾಗಿ ಶಿಯಾ ಪ್ರಾಬಲ್ಯದ ಬುದ್ಗಾಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಮನೆ-ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಹಣವಷ್ಟೇ ಅಲ್ಲ, ಚಿನ್ನ-ಬೆಳ್ಳಿಯನ್ನು ಜನರು ದಾನವಾಗಿ ಕೊಟ್ಟಿದ್ದಾರೆ. ಮಹಿಳೆಯರು ತಮ್ಮ ಆಭರಣಗಳನ್ನು, ಗೃಹಬಳಕೆಯ ತಾಮ್ರದ ಪಾತ್ರೆಗಳನ್ನು ಮತ್ತು ಹಲವರು ತಮ್ಮ ಜಾನುವಾರುಗಳನ್ನು ಕೂಡ ಇರಾನ್ ಪರಿಹಾರ ನಿಧಿಗೆ ನೀಡಿದ್ದಾರೆ.

28 ವರ್ಷಗಳ ಹಿಂದೆ ನಿಧನರಾದ ತನ್ನ ಪತಿಯ ನೆನಪಿಗಾಗಿ ಇಟ್ಟುಕೊಂಡಿದ್ದ ಚಿನ್ನದ ಒಡವೆಯೊಂದನ್ನು ಕಾಶ್ಮೀರದ ಮಹಿಳೆಯೊಬ್ಬರು ಇರಾನ್ ಸಂತ್ರಸ್ತರಿಗಾಗಿ ದಾನ ಮಾಡುವ ಮೂಲಕ ಭಾವನಾತ್ಮಕ ಬೆಂಬಲ ಸೂಚಿಸಿದ್ದಾರೆ. ಶಾಲಾ ಮಕ್ಕಳು ತಮ್ಮ ಉಳಿತಾಯದ ಹಣವನ್ನು ಮಾನವೀಯ ಕಾರ್ಯಕ್ಕಾಗಿ ನೀಡಿರುವುದು ವಿಶೇಷವಾಗಿತ್ತು.

ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಈ ದೇಣಿಗೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ 'X' ನಲ್ಲಿ ಹಂಚಿಕೊಂಡಿದೆ. "ಕಾಶ್ಮೀರದ ಜನರ ಈ ಪ್ರೀತಿ ಮತ್ತು ಮಾನವೀಯತೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಧನ್ಯವಾದಗಳು ಭಾರತ" ಎಂದು ಪೋಸ್ಟ್ ಮಾಡಿದೆ. ಕಾಶ್ಮೀರ ಮತ್ತು ಇರಾನ್ ನಡುವಿನ ದಶಕಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧವನ್ನು ಈ ಘಟನೆಯು ಮತ್ತೊಮ್ಮೆ ಸಾಬೀತುಪಡಿಸಿದೆ. ಸಂಗ್ರಹವಾದ ಈ ಎಲ್ಲ ವಸ್ತುಗಳನ್ನು ಅಧಿಕೃತ ಪರಿಹಾರ ಸಂಸ್ಥೆಗಳ ಮೂಲಕ ಇರಾನ್‌ಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.