ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗುರುಗಳ ಹತ್ಯೆ; ಉದ್ರಿಕ್ತರಿಂದ ಹಿಂದುಗಳ ನೂರಾರು ಅಂಗಡಿ - ಮನೆಗಳಿಗೆ ದಾಳಿ, ಮತ್ತೆ ಹಿಂಸಾಚಾರ

13-04-26 09:07 pm       HK News Staffer   ದೇಶ - ವಿದೇಶ

ಬಾಂಗ್ಲಾದೇಶದ ಪಶ್ಚಿಮ ಕುಶ್ಟಿಯಾ ಮತ್ತು ರಂಗ್ ಪುರದಲ್ಲಿ ನಡೆದ ಎರಡು ಪ್ರತ್ಯೇಕ ಗುಂಪು ದಾಳಿಗಳಲ್ಲಿ ಹಿಂದೂಗಳ ಒಡೆತನದ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಮುಸ್ಲಿಂ ಧರ್ಮ ಗುರುವನ್ನು ಡ್ರಗ್ ಪೆಡ್ಲರ್ ಮುಸ್ಲಿಂ ಯುವಕನೊಬ್ಬ ಹತ್ಯೆ ಮಾಡಿದ ನಂತರ ಉದ್ರಿಕ್ತ ಗುಂಪೊಂದು ಹಿಂದುಗಳ ಮೇಲೆ ಹಲ್ಲೆಗೆ ಮುಂದಾಗಿದ್ದು ಅಂಗಡಿಗಳನ್ನು ಧ್ವಂಸ ಮಾಡಿದೆ.

ಢಾಕಾ, ಎಪ್ರಿಲ್ 13 ; ಬಾಂಗ್ಲಾದೇಶದ ಪಶ್ಚಿಮ ಕುಶ್ಟಿಯಾ ಮತ್ತು ರಂಗ್ ಪುರದಲ್ಲಿ ನಡೆದ ಎರಡು ಪ್ರತ್ಯೇಕ ಗುಂಪು ದಾಳಿಗಳಲ್ಲಿ ಹಿಂದೂಗಳ ಒಡೆತನದ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಮುಸ್ಲಿಂ ಧರ್ಮ ಗುರುವನ್ನು ಡ್ರಗ್ ಪೆಡ್ಲರ್ ಮುಸ್ಲಿಂ ಯುವಕನೊಬ್ಬ ಹತ್ಯೆ ಮಾಡಿದ ನಂತರ ಉದ್ರಿಕ್ತ ಗುಂಪೊಂದು ಹಿಂದುಗಳ ಮೇಲೆ ಹಲ್ಲೆಗೆ ಮುಂದಾಗಿದ್ದು ಅಂಗಡಿಗಳನ್ನು ಧ್ವಂಸ ಮಾಡಿದೆ. 

ಢಾಕಾದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ರಂಗ್ ಪುರದಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಿದ್ದು ಅದೇ ಪ್ರದೇಶ ಮಾರುಕಟ್ಟೆ ಏರಿಯಾದಲ್ಲಿ ಮುಸ್ಲಿಂ ಧರ್ಮಗುರುವನ್ನು ಹಲ್ಲೆಗೈದು ಕೊಲ್ಲಲಾಗಿತ್ತು. ಈ ಕೃತ್ಯವನ್ನು ಡ್ರಗ್‌ ಪೆಡ್ಲರ್ ಮೊಹಮ್ಮದ್ ಮೋಮಿನ್‌ ಎಂಬಾತ ನಡೆಸಿದ್ದರೂ ಇದರ ನೆಪದಲ್ಲಿ ಉದ್ರಿಕ್ತ ಗುಂಪು ಹಲವಾರು ಹಿಂದೂ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮಾಡಿದೆ. ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಈ ವಿಧ್ವಂಸಕ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ  ಹಸನ್ ಅವರನ್ನು ಮೊಹಮ್ಮದ್ ಮೋಮಿನ್ ಕೊಲೆ ಮಾಡಿದ್ದ. ಅನಂತರ ಬಂಧನ ಆಗುವ ಭಯದಲ್ಲಿ ಮೋಮಿನ್ ತನ್ನ ಮನೆ ಖಾಲಿ ಮಾಡಿ ತಲೆಮರೆಸಿಕೊಂಡಿದ್ದಾನೆ. ಉದ್ರಿಕ್ತ ಗುಂಪಿನ ದಾಳಿ ಭೀತಿಯಲ್ಲಿ ಆತನ ಕುಟುಂಬ ಸದಸ್ಯರು ಕೂಡ ತಲೆಮರೆಸಿಕೊಂಡಿದ್ದಾರೆ. "ನಮಗೆ ಅವರ (ಹಿಂದೂ) ಜೊತೆ ಯಾವುದೇ ಸಮಸ್ಯೆ ಅಥವಾ ಭಿನ್ನಾಭಿಪ್ರಾಯ ಇಲ್ಲ" ಎಂದು ಹಸನ್ ಅವರ ತಾಯಿ ನೂರ್ ಜಹಾನ್ ಬೇಗಂ ತಿಳಿಸಿದ್ದಾರೆ. "ನಾವು ನಿಜವಾದ ಕೊಲೆಗಾರರನ್ನು ಪತ್ತೆಹಚ್ಚುತ್ತಿದ್ದೇವೆ. ಹಿಂದೂ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸ ಮಾಡಿದವರನ್ನು ಸಹ ನಾವು ಗುರುತಿಸಿದ್ದೇವೆ" ಎಂದು ರಂಗ್‌ಪುರದ ಪೊಲೀಸ್ ಆಯುಕ್ತ ಮೊಹಮ್ಮದ್ ಮಜೀದ್ ಅಲಿ ತಿಳಿಸಿದ್ದಾರೆ.
 
ಕಳೆದ ಜನವರಿ 1ರಿಂದ ಮಾರ್ಚ್ 31ರ ಅವಧಿಯಲ್ಲಿ 133 ಕೋಮು ಹಿಂಸಾಚಾರ ಘಟನೆಗಳು ನಡೆದಿವೆ ಎಂದು ಬಾಂಗ್ಲಾದೇಶ ಹಿಂದೂ- ಬೌದ್ಧ ಕ್ರಿಶ್ಚಿಯನ್ ಏಕತಾ ಮಂಡಳಿ ಹೇಳಿದೆ. ಮತ್ತೊಂದು ಪ್ರತ್ಯೇಕ  ಘಟನೆಯಲ್ಲಿ, ಢಾಕಾದಿಂದ ಪಶ್ಚಿಮಕ್ಕೆ ಸುಮಾರು 200 ಕಿಮೀ ದೂರದಲ್ಲಿರುವ ಕುಶ್ಟಿಯಾದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಹಲ್ಲೆಕೋರರ ಗುಂಪೊಂದು ಶಾಲಾ ಶಿಕ್ಷಕ ಮತ್ತು ಧರ್ಮಗುರು ಶಮೀಮ್ ರೆಜಾ ಜಹಾಂಗೀರ್ ಎಂಬವರನ್ನು ಕೊಂದು ಅವರ ಕನಿಷ್ಠ ಏಳು ಅನುಯಾಯಿಗಳನ್ನು ತೀವ್ರವಾಗಿ ಗಾಯಗೊಳಿಸಿದೆ ಮತ್ತು ಅವರ ಪ್ರಾರ್ಥನಾ ಸ್ಥಳ 'ದರ್ಬಾರ್'ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಹಿಂಸಾಚಾರವನ್ನು ತಡೆಗಟ್ಟಲು ಸಶಸ್ತ್ರ ಪೊಲೀಸರು ಮತ್ತು ಅಪರಾಧ ವಿರೋಧಿ ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್ (RAB) ಪಡೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. 2021 ರಲ್ಲಿ ಪೊಲೀಸರು "ವಿವಾದಾತ್ಮಕ ಚಟುವಟಿಕೆಗಳನ್ನು" ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಜಹಾಂಗೀರ್ ಅವರನ್ನು ಬಂಧಿಸಿದ್ದರು.