ರಾಹುಲ್ ದ್ವಿಪೌರತ್ವ ಪ್ರಕರಣ ; ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು, ಅರ್ಜಿದಾರನ ಮಾಧ್ಯಮ ಪೋಸ್ಟ್ ಬಗ್ಗೆ ತೀವ್ರ ಅಸಮಾಧಾನ

20-04-26 10:54 pm       HK News Staffer   ದೇಶ - ವಿದೇಶ

ಮಹತ್ವದ ಬೆಳವಣಿಗೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ದ್ವಿಪೌರತ್ವ ಪ್ರಕರಣದ ವಿಚಾರಣೆಯಿಂದ ಅಲಹಾಬಾದ್ ಹೈಕೋರ್ಟಿನ ಲಖ್ನೋ ಪೀಠದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ಸೋಮವಾರ ಹಿಂದೆ ಸರಿದಿದ್ದಾರೆ.

ಲಕ್ನೋ, ಎಪ್ರಿಲ್ 20: ಮಹತ್ವದ ಬೆಳವಣಿಗೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ದ್ವಿಪೌರತ್ವ ಪ್ರಕರಣದ ವಿಚಾರಣೆಯಿಂದ ಅಲಹಾಬಾದ್ ಹೈಕೋರ್ಟಿನ ಲಖ್ನೋ ಪೀಠದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ಸೋಮವಾರ ಹಿಂದೆ ಸರಿದಿದ್ದಾರೆ.

ಇದೇ ವೇಳೆ, ರಾಹುಲ್ ದ್ವಿಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿರುವ ಅರ್ಜಿದಾರ, ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅವರ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಮಾಧ್ಯಮ ಸಂದರ್ಶನಗಳಿಗೆ ನ್ಯಾಯಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವಾದಾತ್ಮಕ ಪೋಸ್ಟ್‌ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿದ್ಯಾರ್ಥಿ, ಅರ್ಜಿದಾರ ಶಿಶಿರ್ ತಮ್ಮನ್ನು "ರಾಜಕೀಯ ಲಾಭಕ್ಕಾಗಿ" ಬಳಸಿಕೊಂಡಿದ್ದಾರೆ ಎಂದು ಮೌಖಿಕವಾಗಿ ಹೇಳಿ ಪ್ರಕರಣದ ವಿಚಾರಣೆಗೆ "ವಿಷಾದಿಸುತ್ತೇನೆ" ಎಂದು ಹೇಳಿದ್ದಾರೆ. 

ಅರ್ಜಿದಾರರು ಈ ಪೀಠದ ಮುಂದೆ ಪ್ರಕರಣವನ್ನು ಮುಂದುವರಿಸಬೇಕೆ ಬೇಡವೇ ಎಂಬುದರ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಕೋರುತ್ತಿದ್ದಾರೆ ಮತ್ತು ಈ ವಿಷಯದಲ್ಲಿ ಸಿಜೆಐ ಅವರ ಸಮ್ಮತಿ ಕೋರಿದ್ದಾರೆ ಎಂದು ಗಮನಿಸಿದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ, ದುರುದ್ದೇಶದಿಂದ "ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಸಂದೇಶಗಳು ನ್ಯಾಯಾಲಯದ ವಿರುದ್ಧ ಆರೋಪ ಮಾಡಿದಂತೆ ಎಂದು ಹೇಳಿದ್ದಾರೆ.

ಶಿಶಿರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲರು ಮತ್ತು ಭಾರತದ ಉಪ ಸಾಲಿಸಿಟರ್ ಜನರಲ್ ಸಹ ಹೇಳಿದ್ದಾರೆ. ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರನ್ನು ಒಳಗೊಂಡ ಹೈಕೋರ್ಟ್ ಪೀಠ, ಕಳೆದ ಶನಿವಾರ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮೊದಲು ನಿರ್ದೇಶಿಸಿತ್ತು. ಆದರೆ ಟೈಪ್ ಮಾಡಿ ಸಹಿ ಮಾಡುವ ಮೊದಲು ಪೀಠ, ತನ್ನ ಆದೇಶವನ್ನು ತಡೆ ಹಿಡಿದಿದೆ.