ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಮುದ್ದಾಡಿದ ಅಲಿನ್ ಪೋಷಕರು ; ಕೇರಳದಲ್ಲಿ ಮಾನವೀಯತೆ ಮೆರಗು

24-04-26 07:35 pm       HK News Staffer   ದೇಶ - ವಿದೇಶ

ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕಂದಮ್ಮನ ದುರಂತವು ಕೇರಳದಲ್ಲಿ ಹೃದಯ ವಿದ್ರಾವಕ ಕಥೆಯಾಗಿ ಉಳಿದಿದೆ. ಆದರೆ, ಅದೇ ಘಟನೆ ಮಾನವೀಯತೆಯ ಮಹತ್ವವನ್ನೂ ಜಗತ್ತಿಗೆ ತೋರಿಸಿದೆ. ಆಲಿನ್ ಶೆರಿನ್ ಎಂಬ 9 ತಿಂಗಳ ಮಗುವನ್ನು ಕಳೆದುಕೊಂಡ ಪೋಷಕರು ತಮ್ಮ ದುಃಖವನ್ನು ಮೀರಿ ಅಂಗಾಂಗ ದಾನದ ಮೂಲಕ ಇತರ ಮಕ್ಕಳಿಗೆ ಹೊಸ ಜೀವ ನೀಡುವ ಮಹತ್ತರ ನಿರ್ಧಾರ ಕೈಗೊಂಡಿದ್ದರು.

ತಿರುವನಂತಪುರಂ, ಏಪ್ರಿಲ್ 24: ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕಂದಮ್ಮನ ದುರಂತವು ಕೇರಳದಲ್ಲಿ ಹೃದಯ ವಿದ್ರಾವಕ ಕಥೆಯಾಗಿ ಉಳಿದಿದೆ. ಆದರೆ, ಅದೇ ಘಟನೆ ಮಾನವೀಯತೆಯ ಮಹತ್ವವನ್ನೂ ಜಗತ್ತಿಗೆ ತೋರಿಸಿದೆ. ಆಲಿನ್ ಶೆರಿನ್ ಎಂಬ 9 ತಿಂಗಳ ಮಗುವನ್ನು ಕಳೆದುಕೊಂಡ ಪೋಷಕರು ತಮ್ಮ ದುಃಖವನ್ನು ಮೀರಿ ಅಂಗಾಂಗ ದಾನದ ಮೂಲಕ ಇತರ ಮಕ್ಕಳಿಗೆ ಹೊಸ ಜೀವ ನೀಡುವ ಮಹತ್ತರ ನಿರ್ಧಾರ ಕೈಗೊಂಡಿದ್ದರು.

ಕೇರಳ ರಾಜ್ಯದ ದಂಪತಿಗಳಾದ ಅರುಣ್ ಮತ್ತು ಶೆರಿನ್ ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅಪಾರ ಮಾನವೀಯತೆ ಮೆರೆದಿದ್ದರು. ಆಲಿನ್‌ನ ಯಕೃತ್ತು ದಾನದಿಂದ ಮರುಜೀವ ಪಡೆದ ಮಗು ಇದೀಗ ಆರೋಗ್ಯವಾಗಿದ್ದು, ಮೊದಲ ಬಾರಿಗೆ ಆ ಮಗುವನ್ನು ಪೋಷಕರು ಭೇಟಿ ಮಾಡಿದ ಕ್ಷಣ ತಿರುವನಂತಪುರಂನ ಕಿಮ್ಸ್ ಹೆಲ್ತ್ ಆಸ್ಪತ್ರೆ ಯಲ್ಲಿ ಭಾವುಕ ದೃಶ್ಯಕ್ಕೆ ಸಾಕ್ಷಿಯಾಯಿತು.

ಅಂಗಾಂಗ ದಾನ ಪಡೆದ ಮಗುವನ್ನು ತನ್ನ ಮಡಿಲಲ್ಲಿ ಎತ್ತಿಕೊಂಡಾಗ, ಆಲಿನ್ ತಾಯಿ ಶೆರಿನ್ ತಮ್ಮದೇ ಮಗಳನ್ನು ನೋಡಿದಂತೆ ಕಣ್ಣೀರಿಟ್ಟರು. ಮರುಜೀವ ಪಡೆದ ಮಗುವಿನ ಪೋಷಕರು ಕೂಡ ಕೃತಜ್ಞತೆಯಿಂದ ಆಲಿನ್ ಪೋಷಕರಿಗೆ ಧನ್ಯವಾದ ಸಲ್ಲಿಸಿದರು. ಸಾಮಾನ್ಯವಾಗಿ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಗೌಪ್ಯತೆ ಕಾಪಾಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಮಾನವೀಯ ದೃಷ್ಟಿಯಿಂದ ವೈದ್ಯರು ವಿಶೇಷವಾಗಿ ಈ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ.

ಘಟನೆಯ ಹಿನ್ನಲೆ:
2025ರ ಫೆಬ್ರವರಿ 5ರಂದು, ಆಲಿನ್ ಶೆರಿನ್ ಕುಟುಂಬದೊಂದಿಗೆ ಕೊಟ್ಟಾಯಂನಿಂದ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಾಗ ಪಲ್ಲಂ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಆಕೆಯ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು. ನಂತರ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದರೂ, ಫೆಬ್ರವರಿ 10ರಂದು ಆಲಿನ್ ನಿಧನಳಾದಳು.
ಈ ದುಃಖದ ನಡುವೆಯೂ, ಪೋಷಕರು ಕಣ್ಣು, ಹೃದಯ, ಕಿಡ್ನಿ ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು. ಅಂಗಾಂಗಗಳನ್ನು ಸಮಯಕ್ಕೆ ತಲುಪಿಸಲು ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದು, ಅನೇಕ ಜೀವಗಳನ್ನು ಉಳಿಸಲು ನೆರವಾಯಿತು.

ಒಂದು ಜೀವ ಕಳೆದುಕೊಂಡ ನೋವು ಎಂದಿಗೂ ಮರೆಯಲಾಗದು. ಆದರೆ ಅದೇ ಜೀವ ಇನ್ನೂ ಹಲವರಲ್ಲಿ ಉಸಿರಾಗಿ ಉಳಿದರೆ—ಅದು ಮಾನವೀಯತೆಯ ಅತ್ಯುನ್ನತ ರೂಪ. ಆಲಿನ್ ಶೆರಿನ್ ಕೇವಲ ಮಗು ಅಲ್ಲ, ಬದುಕು ಹಂಚಿದ ಒಂದು ಸ್ಪೂರ್ತಿ.