ಅಧಿಕಾರಕ್ಕೆ ಬರುತ್ತಿದ್ದಂತೆ ‘ಎಣ್ಣೆ ಸಾಮ್ರಾಜ್ಯ’ ಕ್ಕೆ ಕೈಯಿಟ್ಟ ಸಿಎಂ ವಿಜಯ್; 717 ವೈನ್‌ಸ್ಟೋರ್‌ಗಳಿಗೆ ಬೀಗ ಜಡಿಯಲು ದಳಪತಿ ಆದೇಶ

12-05-26 11:34 am       HK News Staffer   ದೇಶ - ವಿದೇಶ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜನಪರ ಹಾಗೂ ಧೈರ್ಯಶಾಲಿ ನಿರ್ಧಾರವೊಂದನ್ನು ಘೋಷಿಸಿದ್ದು, ರಾಜ್ಯದಾದ್ಯಂತ ದೇವಾಲಯಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವ 717 ಟಾಸ್ಮಾಕ್ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ. ಈ ಆದೇಶವನ್ನು ಎರಡು ವಾರಗಳೊಳಗೆ ಜಾರಿಗೆ ತರಲು ಸೂಚನೆ ನೀಡಲಾಗಿದ್ದು, ಇದು ವಿಜಯ್ ಸರ್ಕಾರದ ಮೊದಲ ದೊಡ್ಡ ಆಡಳಿತಾತ್ಮಕ ಹೆಜ್ಜೆಯಾಗಿ ಗಮನ ಸೆಳೆದಿದೆ.

ಚೆನ್ನೈ, ಮೇ 12: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜನಪರ ಹಾಗೂ ಧೈರ್ಯಶಾಲಿ ನಿರ್ಧಾರವೊಂದನ್ನು ಘೋಷಿಸಿದ್ದು, ರಾಜ್ಯದಾದ್ಯಂತ ದೇವಾಲಯಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವ 717 ಟಾಸ್ಮಾಕ್ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ. ಈ ಆದೇಶವನ್ನು ಎರಡು ವಾರಗಳೊಳಗೆ ಜಾರಿಗೆ ತರಲು ಸೂಚನೆ ನೀಡಲಾಗಿದ್ದು, ಇದು ವಿಜಯ್ ಸರ್ಕಾರದ ಮೊದಲ ದೊಡ್ಡ ಆಡಳಿತಾತ್ಮಕ ಹೆಜ್ಜೆಯಾಗಿ ಗಮನ ಸೆಳೆದಿದೆ.

ಕಳೆದ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸಾಧನೆ ಮಾಡಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದಿದ್ದರೂ, ಸ್ಪಷ್ಟ ಬಹುಮತಕ್ಕಿಂತ 10 ಸ್ಥಾನ ಕಡಿಮೆ ಇದ್ದ ಕಾರಣ ಕೆಲ ದಿನಗಳ ರಾಜಕೀಯ ಹಗ್ಗಜಗ್ಗಾಟ ನಡೆಯಿತು. ಬಳಿಕ ಕಾಂಗ್ರೆಸ್‌, ಎರಡು ಎಡಪಂಥೀಯ ಪಕ್ಷಗಳು ಹಾಗೂ ವಿಡುತಲೈ ಚಿರುತೈಗಳ್ ಕಚ್ಚಿ ಪಕ್ಷದ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚನೆ ಸಾಧ್ಯವಾಯಿತು. ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ವಿಜಯ್ ತೆಗೆದುಕೊಂಡ ಈ ನಿರ್ಧಾರ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮುಚ್ಚಲಾಗುತ್ತಿರುವ 717 ಮದ್ಯದಂಗಡಿಗಳಲ್ಲಿ 276 ಅಂಗಡಿಗಳು ದೇವಾಲಯಗಳ ಸಮೀಪ, 186 ಅಂಗಡಿಗಳು ಶಿಕ್ಷಣ ಸಂಸ್ಥೆಗಳ ಹತ್ತಿರ ಹಾಗೂ 255 ಅಂಗಡಿಗಳು ಬಸ್ ನಿಲ್ದಾಣಗಳ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಟಾಸ್ಮಾಕ್ ಮೂಲಕ ರಾಜ್ಯದಾದ್ಯಂತ ಒಟ್ಟು 4,765 ಸರ್ಕಾರಿ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ.

ಮದ್ಯ ಮಾರಾಟದಿಂದ ಸರ್ಕಾರಕ್ಕೆ ಭಾರೀ ಆದಾಯ ಬರುತ್ತಿದ್ದರೂ, ಸಾರ್ವಜನಿಕರಿಂದ ಹಾಗೂ ವಿವಿಧ ಸಂಘಟನೆಗಳಿಂದ ವರ್ಷಗಳಿಂದ ಟಾಸ್ಮಾಕ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿತ್ತು. 2025ರಲ್ಲಿ ಮಾತ್ರ ಟಾಸ್ಮಾಕ್ ಮಾರಾಟದಿಂದ ಸರ್ಕಾರಕ್ಕೆ ₹48 ಸಾವಿರ ಕೋಟಿಗೂ ಅಧಿಕ ಆದಾಯ ಬಂದಿತ್ತು. ಆದಾಗ್ಯೂ, “ವ್ಯಸನಮುಕ್ತ ತಮಿಳುನಾಡು” ನಿರ್ಮಾಣದತ್ತ ಮೊದಲ ಹೆಜ್ಜೆಯಾಗಿ ವಿಜಯ್ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಟಾಸ್ಮಾಕ್ ವಿರುದ್ಧ ಜಾರಿ ನಿರ್ದೇಶನಾಲಯ (ED) ನಡೆಸಿದ್ದ ತನಿಖೆಯೂ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಚುನಾವಣೆಗೆ ಮುನ್ನ ನಡೆದ ದಾಳಿಗಳ ವೇಳೆ ಸುಮಾರು ₹1,000 ಕೋಟಿ ಲೆಕ್ಕಕ್ಕೆ ಬಾರದ ಹಣ ಪತ್ತೆಯಾಗಿದೆ ಎಂದು ಇಡಿ ಆರೋಪಿಸಿತ್ತು. ಬಾರ್ ಲೈಸೆನ್ಸ್, ಸಾರಿಗೆ ಟೆಂಡರ್ ಹಾಗೂ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವುದರ ಜೊತೆಗೆ, ಕೆಲ ಡಿಸ್ಟಿಲರಿಗಳಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಪ್ರತೀ ಮದ್ಯದ ಬಾಟಲಿಗೆ ₹10ರಿಂದ ₹30ವರೆಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಸಾಕ್ಷ್ಯಗಳೂ ಸಿಕ್ಕಿವೆ ಎಂದು ಇಡಿ ತಿಳಿಸಿತ್ತು.

ಆದರೆ ಆಗಿನ ಡಿಎಂಕೆ ಸರ್ಕಾರ ಈ ದಾಳಿಗಳನ್ನು “ರಾಜಕೀಯ ಪ್ರೇರಿತ ಕ್ರಮ” ಎಂದು ತೀವ್ರವಾಗಿ ಟೀಕಿಸಿತ್ತು. ಅಬಕಾರಿ ಸಚಿವ ಎಸ್. ಮುತ್ತುಸಾಮಿ, ರಾಜ್ಯದ ಅಧಿಕಾರಿಗಳನ್ನು ಗುರಿಯಾಗಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, “ರಾಜ್ಯದ ತನಿಖಾ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆಯೇ?” ಎಂದು ನ್ಯಾಯಪೀಠವೂ ಪ್ರಶ್ನಿಸಿತ್ತು.

ಒಟ್ಟಿನಲ್ಲಿ ಮುಖ್ಯಮಂತ್ರಿ ವಿಜಯ್ ಅವರ ಈ ನಿರ್ಧಾರ ತಮಿಳುನಾಡಿನ ಆಡಳಿತ ಶೈಲಿಯಲ್ಲಿ ಹೊಸ ಸಂದೇಶ ರವಾನಿಸಿದೆ. ಸರ್ಕಾರದ ಆದಾಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದ್ದರೂ, ಶಾಲೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಪ್ರದೇಶಗಳ ಸುತ್ತಮುತ್ತ ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಹಾಗೂ ಪೋಷಕರ ವಲಯದಲ್ಲಿ ಈ ಕ್ರಮಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಮದ್ಯ ವ್ಯಸನವು ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಶಾಂತಿಯನ್ನೂ ಹಾಳುಮಾಡುತ್ತದೆ. ಶಾಲೆ ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾಗುವುದು ಯುವಜನತೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಸಹಕಾರಿ. ಸರ್ಕಾರದ ಕ್ರಮದ ಜೊತೆಗೆ ಸಮಾಜವೂ ಜವಾಬ್ದಾರಿಯುತ ಜೀವನಶೈಲಿಯತ್ತ ಹೆಜ್ಜೆ ಇಡುವುದು ಅತ್ಯಗತ್ಯ.