ತಮಿಳುನಾಡಿನಲ್ಲಿ ಮತಾಂತರದ ಒತ್ತಡಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಶಂಕೆ ; ತನಿಖೆಗೆ ಆಗ್ರಹ

21-01-22 11:15 pm       HK Desk news   ದೇಶ - ವಿದೇಶ

ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಕ್ರಿಸ್ತಿಯನ್ ಮತಾಂತರದ ಒತ್ತಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಮಿಳುನಾಡಿನಲ್ಲಿ ದೊಡ್ಡ ಸದ್ದು ಮಾಡಿದೆ.

ಚೆನ್ನೈ, ಜ.21 : ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಕ್ರಿಸ್ತಿಯನ್ ಮತಾಂತರದ ಒತ್ತಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಮಿಳುನಾಡಿನಲ್ಲಿ ದೊಡ್ಡ ಸದ್ದು ಮಾಡಿದೆ. ತಂಜಾವೂರು ಜಿಲ್ಲೆಯ ತಿರುಕಟ್ಟುಪಳ್ಳಿ ಗ್ರಾಮದ ನಿವಾಸಿ ಲಾವಣ್ಯ ಎಂಬ 17ರ ಹುಡುಗಿ ಜನವರಿ 14ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಳು. ಆನಂತರ ಚಿಕಿತ್ಸೆ ಫಲಕಾರಿಯಾದರೆ ಜನವರಿ 19ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.

ಘಟನೆಗೂ ಮುನ್ನ ಲಾವಣ್ಯ ಮಾಡಿದ್ದ ವಿಡಿಯೋ ಈಗ ಕ್ರಿಸ್ತಿಯನ್ ಮತಾಂತರದ ವಿಚಾರವನ್ನು ಮುನ್ನೆಲೆಗೆ ತಂದಿದ್ದು, ವಿಡಿಯೋ ತಮಿಳುನಾಡಿನಲ್ಲಿ ಭಾರೀ ವೈರಲ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹುಡುಗಿ ಮಾಡಿದ್ದ ವಿಡಿಯೋವನ್ನು ಟ್ವಿಟರ್ ನಲ್ಲಿ ಷೇರ್ ಮಾಡಿದ್ದಾರೆ. ಹುಡುಗಿ ವಿಡಿಯೋದಲ್ಲಿ ಮತಾಂತರ ಆಗುವಂತೆ ಸಿಸ್ಟರ್ ಒಬ್ಬರು ಒತ್ತಡ ಹಾಕಿದ್ದರು ಎಂಬ ವಿಚಾರ ಇದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾವಣ್ಯ ತಂದೆ ಮುರುಗನಾಥನ್, ನನ್ನ ಮಗಳನ್ನು ಮತಾಂತರ ಆಗುವಂತೆ ಪೀಡಿಸಿದ್ದಾರೆ. ಮತಾಂತರಕ್ಕೆ ಒಪ್ಪದೆ ಸಾವಿಗೆ ಶರಣಾಗಿದ್ದಾಳೆ. ಆಕೆ ಹಾಸ್ಟೆಲ್ ನಲ್ಲಿ ಕೃತ್ಯ ಎಸಗಿದ್ದರೂ, ಶಾಲೆಯ ಆಡಳಿತ ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಬಳಿಕ ಆಸ್ಪತ್ರೆಯಿಂದ ವಿಷಯ ತಿಳಿದುಬಂದಿತ್ತು. ಕಾಲೇಜು ಆಡಳಿತ ಆತ್ಮಹತ್ಯೆ ವಿಚಾರವನ್ನು ಮುಚ್ಚಿ ಹಾಕಿತ್ತು ಎಂದು ಆರೋಪಿಸಿದ್ದಾರೆ.

ಸಾವಿಗೂ ಮುನ್ನ ಲಾವಣ್ಯ ರೆಕಾರ್ಡ್ ಮಾಡಿದ್ದಾಳೆ ಎನ್ನಲಾಗುವ 44 ಸೆಕೆಂಡಿನ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಸಿಸ್ಟರ್ ಒಬ್ಬರು ನನ್ನನ್ನು ಮತಾಂತರ ಆಗುವಂತೆ ನನ್ನ ಹೆತ್ತವರ ಮುಂದೆಯೇ ಹೇಳಿದ್ದಾಗಿ ತಿಳಿಸಿದ್ದಾಳೆ. ಉತ್ತಮ ಶಿಕ್ಷಣಕ್ಕಾಗಿ ನಿಮ್ಮ ಮಗಳನ್ನು ಕ್ರಿಸ್ತಿಯನ್ ಆಗಿ ಮತಾಂತರ ಮಾಡಬಹುದೇ ಎಂದು ಸಿಸ್ಟರ್ ಹೆತ್ತವರಲ್ಲಿ ಒಮ್ಮೆ ಪ್ರಶ್ನೆ ಮಾಡಿದ್ದರು. ರಾಚೆಲ್ ಮೇರಿ ಎಂಬ ಸಿಸ್ಟರ್ ನನಗೆ ಕಿರುಕುಳ ನೀಡಿದ್ದಾರೆ. ಎರಡು ವರ್ಷಗಳ ಹಿಂದೆಯೇ ಸಿಸ್ಟರ್ ನನ್ನ ಹೆತ್ತವರಿಗೆ ಒತ್ತಡ ಹಾಕಿದ್ದರು ಎಂದು ವಿಡಿಯೋದಲ್ಲಿ ಲಾವಣ್ಯ ಹೇಳಿದ್ದಳು.

ಲಾವಣ್ಯಳನ್ನು ಬಲವಂತದಿಂದ ಮತಾಂತರ ಮಾಡಿದ್ದೇ ಕಾರಣ ಎಂದು ವಿಡಿಯೋ ಮುಂದಿಟ್ಟು ಹೆತ್ತವರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಆಕೆ ಸಾವಿಗೂ ಮುನ್ನ ಜ.14ರಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಳು. ನಾವು ಅದನ್ನೇ ಆಕೆಯ ಕೊನೆಯ ಹೇಳಿಕೆ ಎಂದು ದಾಖಲು ಮಾಡಿದ್ದೇವೆ. ಎರಡೂ ಕೋನಗಳಿಂದ ತನಿಖೆ ನಡೆಸುತ್ತೇವೆ. ಈ ವಿಡಿಯೋ ಯಾವಾಗ  ಮತ್ತು ಯಾವ ಉದ್ದೇಶಕ್ಕೆ ಮಾಡಲಾಗಿತ್ತು ಎಂದು ತಿಳಿದಿಲ್ಲ. ಈ ಬಗ್ಗೆ ಆಕೆಯ ಹೆತ್ತವರಿಂದ ಮಾಹಿತಿ ಪಡೆದು ತನಿಖೆ ನಡೆಸಬೇಕಾಗುತ್ತದೆ ಎಂದು ತಂಜಾವೂರು ಜಿಲ್ಲೆಯ ಮಹಿಳಾ ಎಸ್ಪಿ ರವಳಿ ಪ್ರಿಯಾ ಗಂಧಪುನೇನಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಸಂಬಂಧಿಸಿ ಹಾಸ್ಟೆಲ್ ವಾರ್ಡನ್ ಆಗಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

BJP and VHP leaders circulated a 47-second video of the girl purportedly accusing the school management of troubling her after she refused to convert to Christianity.