ಮಕ್ಕಳು ತಮ್ಮನ್ನು ನೋಡಿಕೊಳ್ತಿಲ್ಲ ಎಂಬ ನೋವು ; ಕೊಡಗಿನ ದಂಪತಿ ಹಾಸನದಲ್ಲಿ ರೈಲಿನಡಿಗೆ ಬಿದ್ದು ಸಾವು

23-02-26 12:35 pm       HK News Desk   ಕರ್ನಾಟಕ

ತಮ್ಮನ್ನು ಆರೈಕೆ ಮಾಡುವವರಿಲ್ಲ ಎಂದು ಮನನೊಂದ ವೃದ್ಧ ದಂಪತಿ ಹಾಸನದಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಾಸ್ಪದ ಘಟನೆ ನಡೆದಿದೆ.‌

ಹಾಸನ, ಫೆ.23: ತಮ್ಮನ್ನು ಆರೈಕೆ ಮಾಡುವವರಿಲ್ಲ ಎಂದು ಮನನೊಂದ ವೃದ್ಧ ದಂಪತಿ ಹಾಸನದಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಾಸ್ಪದ ಘಟನೆ ನಡೆದಿದೆ.‌ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಅರೆಹೊಸೂರಿನ ಡೇವಿಡ್(80) ಮತ್ತು ಮೇರಿ(73) ಮೃತ ದಂಪತಿ.‌

ಶನಿವಾರ ರಾತ್ರಿ ಹಾಸನ ನಗರದ ಬಸ್ ನಿಲ್ದಾಣದ ಬಳಿ ರೈಲಿಗೆ ಸಿಲುಕಿ ದಂಪತಿ ಸಾವಿಗೀಡಾಗಿದ್ದರು. ಆತ್ಮಹತ್ಯೆಯೋ, ಆಕಸ್ಮಿಕವೋ ಎನ್ನುವ ಶಂಕೆ ವ್ಯಕ್ತವಾಗಿತ್ತು.‌ ಪೊಲೀಸರ ತನಿಖೆಯಲ್ಲಿ ಕೊಡಗಿನ ದಂಪತಿಯೆಂದು ತಿಳಿದುಬಂದಿತ್ತು. ಆಸ್ತಿ, ಮನೆ, ಕಾಫಿ ತೋಟ ಹೊಂದಿದ್ದರೂ ವೃದ್ದಾಪ್ಯದಲ್ಲಿ ಆರೈಕೆ ಮಾಡುವವರಿಲ್ಲದೆ ದಂಪತಿ ಒಂಟಿಯಾಗಿದ್ದರು. ಕೆಲವು ದಿನ ವಿರಾಜಪೇಟೆಯ ವೃದ್ದಾಶ್ರಮಕ್ಕೂ ಸೇರಿದ್ದರು.‌ 

ಓರ್ವ ಪುತ್ರ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಮತ್ತೋರ್ವ ಪುತ್ರ ಊರಿನಲ್ಲೇ ಇದ್ದ. ಇಬ್ಬರು ಪುತ್ರರಿಧ್ದರೂ ತಮ್ಮನ್ನ ಗಮನಿಸುತ್ತಿಲ್ಲ ಎಂದು ತಂದೆ ತಾಯಿ ನೊಂದಿದ್ದರು. ಹೀಗಾಗಿ ಹಾಸನಕ್ಕೆ ಬಂದು ರೈಲ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಸನ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌