ಗಾಂಧಿ ಕುಟುಂಬ ಸ್ವಯಂ ಆಗಿಯೇ ಕುರ್ಚಿ ಬಿಟ್ಟು ಕೊಡಲಿ ; ರಾಹುಲ್ ಹಿಂದಿನಿಂದ ಅಧಿಕಾರ ಚಲಾಯಿಸುವುದು ಬೇಡ, ‘ಘರ್ ಕಿ ಕಾಂಗ್ರೆಸ್’ ಅಲ್ಲ, ‘ಸಬ್ ಕಿ ಕಾಂಗ್ರೆಸ್ ’ ಮಾಡಿ!

15-03-22 08:56 pm       HK Desk news   ದೇಶ - ವಿದೇಶ

ಗಾಂಧಿ ಕುಟುಂಬ ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು. ಕಾರ್ಯಕಾರಿ ಸಮಿತಿ ಅವರನ್ನು ತೆಗೆದು ಹಾಕಬೇಕು ಅಂದರೆ, ಅವರಂತೂ ಹಾಗೆ ಮಾಡೋದಿಲ್ಲ. ಬೇರೆಯವರಿಗೆ ಪಕ್ಷ ಮುನ್ನಡೆಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ನವದೆಹಲಿ, ಮಾ.15: ಗಾಂಧಿ ಕುಟುಂಬ ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು. ಕಾರ್ಯಕಾರಿ ಸಮಿತಿ ಅವರನ್ನು ತೆಗೆದು ಹಾಕಬೇಕು ಅಂದರೆ, ಅವರಂತೂ ಹಾಗೆ ಮಾಡೋದಿಲ್ಲ. ಅದರಲ್ಲಿದ್ದವರು ನೀವು ಅಧಿಕಾರದಿಂದ ಕೆಳಗಿಳಿಯಿರಿ ಎಂದು ಹೇಳುವುದೂ ಇಲ್ಲ. ಅದಕ್ಕಾಗಿ ಇವರ ಅವಧಿ ಮುಗಿದಿದೆ, ತಾವಾಗಿಯೇ ಕುರ್ಚಿ ಬಿಟ್ಟು ಎದ್ದು ಹೋಗಲಿ ಎಂದು ಹೇಳುತ್ತೇನೆ. ಬೇರೆಯವರಿಗೆ ಪಕ್ಷ ಮುನ್ನಡೆಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಸೋನಿಯಾ ಗಾಂಧಿ ರಾಜಿನಾಮೆ ನೀಡುತ್ತಾರೆಂದು ಹೇಳಲಾಗಿತ್ತು. ಆದರೆ, ಕಾರ್ಯಕಾರಿ ಮಂಡಳಿಯ ಸಭೆ ಐದು ಗಂಟೆಗಳ ಚರ್ಚೆಯ ಬಳಿಕವೂ ಸೋನಿಯಾ ಗಾಂಧಿಯನ್ನೇ ಮುಂದುವರಿಸಲು ನಿರ್ಧರಿಸಿತ್ತು. ಸಭೆಗೂ ಮೊದಲೇ ಮುಕುಲ್ ವಾಸ್ನಿಕ್ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಗೆ ಸೂಚಿಸಿದ್ದ ಜಿ-23 ನಾಯಕರು ಈಗ ವಿಚಲಿತರಾಗಿದ್ದಾರೆ. ಈ ಗುಂಪಿನಲ್ಲಿ ಪ್ರಮುಖವಾಗಿ ಗುರುತಿಸಿರುವ ಕಪಿಲ್ ಸಿಬಲ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗ ಅಸಮಾಧಾನ ತೋಡಿಕೊಂಡಿದ್ದಾರೆ.

Defamation Case for RSS Remarks: Rahul Gandhi Gets Exemption from  Appearance; Hearing on Mar 22

ಕೆಲವರು ರಾಹುಲ್ ಗಾಂಧಿಯನ್ನು ಮತ್ತೆ ಅಧ್ಯಕ್ಷರಾಗಲು ಆಗ್ರಹ ಮಾಡಿರುವ ಬಗೆಗಿನ ಪ್ರಶ್ನೆಗೆ, ಈಗಾಗ್ಲೇ ರಾಹುಲ್ ಗಾಂಧಿ ಅಧ್ಯಕ್ಷರ ಅಧಿಕಾರವನ್ನು ಚಲಾಯಿಸುತ್ತಲೇ ಇದ್ದಾರಲ್ಲಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಕಳೆದ ಬಾರಿ ಪಂಜಾಬ್ ಗೆ ತೆರಳಿದ್ದ ರಾಹುಲ್ ಗಾಂಧಿ, ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದರು. ರಾಹುಲ್ ಯಾವ ಅಧಿಕಾರದಿಂದ ಈ ಮಾತನ್ನು ಹೇಳಿದ್ದರು. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಲ್ಲ. ಇದರರ್ಥ ಅವರೇ ಪಕ್ಷದ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿಗೆ ಅಧ್ಯಕ್ಷ ಹುದ್ದೆ ನೀಡಬೇಕೆಂಬುದರಲ್ಲಿ ಯಾವ ಅರ್ಥವಿದೆ ಎಂದು ಕಪಿಲ್ ಸಿಬಲ್ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ವಿರೋಧಿಸುವ ಎಲ್ಲರಿಗೂ ಸೇರಿದ್ದು. ಯಾವುದೇ ಒಂದು ಮನೆಗೆ ಸೇರಿದ್ದಲ್ಲ ಎಂದು ಪರೋಕ್ಷವಾಗಿ ಗಾಂಧಿ ಕುಟುಂಬಕ್ಕೆ ಕುಟುಕಿದ ಕಪಿಲ್ ಸಿಬಲ್, ನಾನು ನನ್ನ ಉಸಿರಿರೋವರೆಗೂ ಎಲ್ಲರ ಕಾಂಗ್ರೆಸ್ ಅನ್ನುವ ನೆಲೆಯಲ್ಲಿ ಹೋರಾಟ ಮಾಡುತ್ತೇನೆ. ಕೆಲವರು ಎ, ಬಿ ಮತ್ತು ಸಿ ನಾಯಕರಿಲ್ಲದೆ ಕಾಂಗ್ರೆಸ್ ಪಕ್ಷ ಉಳಿಯಲಾರದು ಎಂದು ಅನ್ಕೊಂಡಿದ್ದಾರೆ. ಘರ್ ಕಿ ಕಾಂಗ್ರೆಸ್ ಅನ್ನುವ ಪರಿಕಲ್ಪನೆ ಇಲ್ಲದೆ, ಸಬ್ ಕಿ ಕಾಂಗ್ರೆಸ್ ಗೆ ಅಸ್ತಿತ್ವ ಇಲ್ಲ ಎನ್ನುವುದು ಇಂಥವರ ನಂಬಿಕೆ. ಇದೇ ಈಗ ನಮಗೆ ಎದುರಾಗಿರುವ ದೊಡ್ಡ ಸವಾಲಾಗಿದೆ ಎಂದು ಗಾಂಧಿ ಕುಟುಂಬದ ಹೆಸರೆತ್ತದೆ ಅವರನ್ನು ಓಲೈಸುವ ನಾಯಕರನ್ನು ಕುಟುಕಿದ್ದಾರೆ.

ಕಾರ್ಯಕಾರಿ ಮಂಡಳಿಯ ಹೊರಗಿನ ನಾಯಕರು ಕಾಂಗ್ರೆಸ್ ಬಗ್ಗೆ ಬೇರೆಯದ್ದೇ ದೃಷ್ಟಿಕೋನ ಹೊಂದಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ಇದೆ, ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರು ಪಕ್ಷದ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಹೊಂದಿದ್ದಾರೆ. ಆದರೆ ಸಿಡ್ಬ್ಯುಸಿಯಲ್ಲಿರುವ ನಾಯಕರು ಮಾತ್ರ ಗಾಂಧಿ ಕುಟುಂಬಕ್ಕೆ ಮಾತ್ರ ನಿಷ್ಠೆ ಹೊಂದಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯ ಸೋಲಿನ ಬಗ್ಗೆಯೂ ಅವರು ತಮ್ಮದೇ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ದೇಶಾದ್ಯಂತ ಅಭಿಪ್ರಾಯ ಬೇರೆ ಇರುವಾಗ, ಈ ರೀತಿ ವರ್ತಿಸುವುದು ಸರಿ ಅನಿಸೋದಿಲ್ಲ. ನಮ್ಮ ಚಿಂತನೆ, ಮಾತುಗಳನ್ನು ಅಲ್ಲಿ ಕೇಳುವವರೇ ಇಲ್ಲ. ಇದರಿಂದಾಗಿ ಕಾಂಗ್ರೆಸ್ ಅನ್ನುವುದು ಕೆಲವರದ್ದು ಮಾತ್ರ ಅನ್ನುವಂತಾಗಿದೆ ಎಂದು ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Aap Sab Ki Party Congress - Home | Facebook

ಸಬ್ ಕಿ ಕಾಂಗ್ರೆಸ್ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ದೇಶಾದ್ಯಂತ ಬಿಜೆಪಿ ವಿರೋಧಿಸುವ ಎಲ್ಲರದ್ದೂ ಕಾಂಗ್ರೆಸ್. ಒಂದು ಕುಟುಂಬ ಅಥವಾ ಕೆಲವರಿಗೆ ಮಾತ್ರ ಸೀಮಿತ ಅನ್ನುವಂತಾಗಬಾರದು. ಈಗಿನ ಸನ್ನಿವೇಶದಲ್ಲಿ ಚಿಂತನೆ ಅನ್ನುವುದು ಅಗತ್ಯವಾಗಿ ಆಗಬೇಕಾದ್ದು. ಕ್ರಿಕೆಟಿನಲ್ಲಿ ಹಿಂದೆ ಗವಾಸ್ಕರ್ ಕ್ಯಾಪ್ಟನ್ ಆಗಿದ್ದರು. ಆನಂತರ, ಸಚಿನ್ ತೆಂಡುಲ್ಕರ್ ಬಂದಿದ್ದರು. ಒಂದು ದಿನ ಇವರೆಲ್ಲ ನಿವೃತ್ತಿಯಾಗಿ ಹೋದರು. ಈಗ ವಿರಾಟ್ ಕೊಹ್ಲಿ ಬಂದಿದ್ದಾರೆ. ಇವರೆಲ್ಲರ ನಾಯಕತ್ವ, ಕಾರ್ಯಶೈಲಿ ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತುತ್ತದೆ. ಕೊಹ್ಲಿಯೂ ನಾಳೆ ನಿವೃತ್ತನಾಗಿ ಹೋಗುತ್ತಾನೆ. ಹಾಗೆಯೇ ನಮ್ಮ ಪರಮೋಚ್ಚ ನಾಯಕರು ಕೂಡ ತನ್ನ ಅವಧಿಯ ಬಳಿಕ ಇನ್ನೊಬ್ಬರಿಗೆ ಸ್ಥಾನ ಬಿಟ್ಟು ಕೊಡಬೇಕು. ಅದಕ್ಕೆ ಕಾಲ ಬಂದಿದೆ, ಯಾರನ್ನೂ ನೇಮಕ ಮಾಡುವ ಅಗತ್ಯವಿಲ್ಲ. ಚುನಾವಣೆ ಮೂಲಕ ಒಬ್ಬರನ್ನು ಆಯ್ಕೆ ಮಾಡಿ. ಹೊಸತಾಗಿ ಬಂದವರಿಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದಿದ್ದಾರೆ ಕಪಿಲ್ ಸಿಬಲ್.

ಕಳೆದ 2020ರಲ್ಲಿ ಪಕ್ಷದಲ್ಲಿ ಮಹತ್ವದ ಬದಲಾವಣೆಗಳನ್ನು ತರಬೇಕೆಂದು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ 23 ಮಂದಿ ನಾಯಕರಲ್ಲಿ ಕಪಿಲ್ ಕೂಡ ಒಬ್ಬರು. ಇದೀಗ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸೋನಿಯಾ ಗಾಂಧಿಯನ್ನೇ ಮತ್ತೆ ಮುಂದುವರಿಸಲು ನಿರ್ಧರಿಸಿದ ಬೆನ್ನಲ್ಲೇ ಕಪಿಲ್ ಸಿಬಲ್ ಬಹಿರಂಗವಾಗಿಯೇ ತನ್ನ ಅಸಮಾಧಾನ ಹೊರಹಾಕಿದ್ದಾರೆ.

Four days after the rout of the party in the Assembly elections and a day after the Congress Working Committee reaffirmed its faith in the leadership of Sonia Gandhi, senior Congress leader and former Union Minister Kapil Sibal said Monday it is time the Gandhis step aside from the leadership role and give some other person a chance.