ಕನ್ನಡ ನಿರ್ದೇಶಕ ಗುರುಪ್ರಸಾದ್ ಗೆ ಕೊರೊನಾ ಪಾಸಿಟಿವ್ ; ನನ್ನ ಸಾವಿಗೆ ಯಡಿಯೂರಪ್ಪ, ಸುಧಾಕರ್ ಕಾರಣ, ವೀಡಿಯೋ ವೈರಲ್

19-04-21 01:37 pm       Headline Karnataka News Network   ಸಿನಿಮಾ

ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಖಚಿತಪಡಿಸಿರುವ ಅವರು, ಅನೇಕರ ವಿರುದ್ಧ ಹರಿಹಾಯ್ದಿದ್ದಾರೆ.

ಬೆಂಗಳೂರು,ಎ.19: ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್​ ಅವರಿಗೆ ಕೊರೊನಾ ವೈರಸ್​ ಪಾಸಿಟಿವ್​ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಖಚಿತಪಡಿಸಿರುವ ಅವರು, ಅನೇಕರ ವಿರುದ್ಧ ಹರಿಹಾಯ್ದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ರಾಘವೇಂದ್ರ, ಆರೋಗ್ಯ ಸಚಿವ ಸುಧಾಕರ್​, ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಒಂದು ವೇಳೆ ತಾವು ನಿಧನರಾದರೆ ಅದಕ್ಕೆ ಯಡಿಯೂರಪ್ಪ, ರಾಘವೇಂದ್ರ, ಸುಧಾಕರ್​ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

ಕೊನೇ ಕ್ಷಣಗಳ ಕೊನೇ ಮಾತುಗಳು. ಕೊರೊನಾ ಪಾಸಿಟಿವ್​ ಬಂದಿದೆ. ನಮ್ಮ ಮನೆಯವರೆಗೂ ಕೊರೊನಾ ತಂದುಕೊಟ್ಟಂತಹ ಯಡಿಯೂರಪ್ಪ, ವಿಜಯೇಂದ್ರ ಇವರಿಗೆಲ್ಲ ಧನ್ಯವಾದಗಳು. ನಮ್ಮ ಸಾವಿಗೆ ಮುನ್ನುಡಿ ಬರೆದಿದ್ದೀರಿ. ಕೊರೊನಾ ಪಾಸಿಟಿವ್​ ಆಗಿದ್ದಕ್ಕೆ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಸತ್ತರೂ ಕೂಡ ಕೊನೇ ಕ್ಷಣದವರೆಗೂ ನನ್ನ ಈ ಶಾಪ ನೋವು ಕೊಡಬೇಕು ಎಂದು ಈ ಮಾತು ಹೇಳುತ್ತಿದ್ದೇನೆ. ಒಂದೂವರೆ ವರ್ಷ ಟೈಮ್​ ತಗೊಂಡು, ಮೂರು-ನಾಲ್ಕು ತಿಂಗಳು ಲಾಕ್​ಡೌನ್ ಮಾಡಿದ್ರಲ್ಲ’ ಎನ್ನುವ ಮೂಲಕ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ ಗುರುಪ್ರಸಾದ್​.

ಮೋದಿ ಪ್ರಾಮಾಣಿಕ. ಆದರೆ ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಜೆಡಿಎಸ್​, ಕಾಂಗ್ರೆಸ್​ನವರೆಲ್ಲ ಪ್ರಾಮಾಣಿಕರಲ್ಲ. ಒಂದು ವೈರಸ್​ ನಿಮ್ಮನ್ನು ಆಡಿಸುತ್ತಿದೆ. ವಿಜ್ಞಾನದ ಹಿನ್ನೆಲೆ ಇದ್ದರೆ ಡಾ. ಸುಧಾಕರ್​ ಬೆಂಗಳೂರಿನಲ್ಲಿ ಒಂದು ಲಕ್ಷ ವಾರ್​ಫೇರ್​​ ಟೆಂಟ್​ ಹಾಕಿಸಿ. ಅದರ ಬದಲು ಯಾವುದೇ ಬ್ಯುಸಿನೆಸ್​ ನಿಲ್ಲಿಸ ಬೇಡಿ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ. ಒಂದೂವರೆ ವರ್ಷ ಸಮಯ ತೆಗೆದುಕೊಂಡು ಪ್ರತಿಮನೆಗೂ ವೈರಸ್​ ಕಳಿಸಿದ್ದೀರಲ್ಲ.. ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಕೊರೊನಾ ಬಂದಿದೆ. ಅಕಸ್ಮಾತ್​ ಸತ್ತು ಹೋದರೆ ಇದನ್ನೆಲ್ಲ ಹೇಳೋಕೆ ಆಗಲ್ಲ’ ಎಂದು ಗುರುಪ್ರಸಾದ್​ ಹೇಳಿದ್ದಾರೆ.

ಚಿತ್ರರಂಗದ ಅನೇಕ ಜನರನ್ನು ಸಾಯಿಸಿದ್ದೀರಿ. ನಾನು ಕೂಡ ಹಾರ್ಟ್​ ಅಟ್ಯಾಕ್​ ಆಗಿ ಸಾಯಬಹುದು. ಮನೆಮನೆಗೂ ವೈರಸ್​ ಬಂದಿದೆ. ಸಿನಿಮಾ ಪ್ರಚಾರಕ್ಕಾಗಿ ಇದನ್ನೆಲ್ಲ ನಾನು ಮಾಡುತ್ತಿಲ್ಲ. ನಾನು ಬದುಕಿದ್ದರೆ ತಾನೇ ಅದೆಲ್ಲ. ಪ್ರತಿಯೊಬ್ಬರು ಬದುಕುವುದು ಕೂಡ ಮುಖ್ಯ. ಕರ್ನಾಟಕದಲ್ಲಿ ಕೊರೊನಾದಿಂದಾದ ಪ್ರತಿ ಸಾವಿಗೆ ಡಾ. ಸುಧಾಕರ್​ ಕಾರಣ. ಡಿ.ಕೆ. ಶಿವಕುಮಾರ್​. ಎಚ್​.ಡಿ. ಕುಮಾರಸ್ವಾಮಿ ಸಾಚಾ ಎಂದು ನಾನು ಹೇಳುತ್ತಿಲ್ಲ. ಎಲ್ಲರೂ ನಮ್ಮನ್ನು ಕೊಲ್ಲುತ್ತಿದ್ದೀರಿ. ಇದು ನನ್ನ ಡೆತ್​ ನೋಟ್​. ನನ್ನ ಸಾವಿಗೆ ನೀವೆಲ್ಲರೂ ಕಾರಣ’ ಎಂದು ಗುರುಪ್ರಸಾದ್​ ಹೇಳಿರುವ ವಿಡಿಯೋ ವೈರಲ್​ ಆಗುತ್ತಿದೆ.

Director Guruprasad mata tested covid positive. Alleges Karnataka ministers CM and Dr Sudhakar will be responsible for my death on Facebook live video.