ವಿದೇಶದಿಂದ ತಂದಿಟ್ಟಿದ್ದ ಹತ್ತು ಪವನ್ ಚಿನ್ನ ; ಜೊತೆಗೇ ಊಟ ಮಾಡಿದವನು ಜೊತೆಗಿದ್ದವರನ್ನೇ ಕೊಂದಿದ್ದ! ಅಂಥ ಕ್ರೂರಿ ಜೈಲಿಂದ ಹೊರಬಂದಲ್ಲಿ ನಮ್ಮನ್ನು ಉಳಿಸಲ್ಲ!

09-08-22 09:23 pm       Giridhar Shetty, Mangaluru   ಕರಾವಳಿ

90ರ ದಶಕದಲ್ಲಿ ಒಂದೇ ಮನೆಯ ನಾಲ್ವರನ್ನು ಕೊಲೆಗೈದು ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ವಾಮಂಜೂರು ಪ್ರವೀಣ ಜೈಲಿನಿಂದ ಬಿಡುಗಡೆಯಾಗುತ್ತಾನೆ ಎಂಬ ಸುದ್ದಿಗಳಿವೆ. ಪ್ರವೀಣ ಜೈಲಿನಿಂದ ಬಿಡುಗಡೆಯಾದಲ್ಲಿ ತಮ್ಮ ಜೀವಕ್ಕೇ ಅಪಾಯ ಆಗಬಹುದೆಂದು ಕುಟುಂಬಸ್ಥರು ಹೆದರಿದ್ದಾರೆ.

ಮಂಗಳೂರು, ಆಗಸ್ಟ್ 9: 90ರ ದಶಕದಲ್ಲಿ ಒಂದೇ ಮನೆಯ ನಾಲ್ವರನ್ನು ಕೊಲೆಗೈದು ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ವಾಮಂಜೂರು ಪ್ರವೀಣ ಜೈಲಿನಿಂದ ಬಿಡುಗಡೆಯಾಗುತ್ತಾನೆ ಎಂಬ ಸುದ್ದಿಗಳಿವೆ. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಪ್ರವೀಣನನ್ನು ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಲು ಜೈಲಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ ಪ್ರವೀಣ ಜೈಲಿನಿಂದ ಬಿಡುಗಡೆಯಾದಲ್ಲಿ ತಮ್ಮ ಜೀವಕ್ಕೇ ಅಪಾಯ ಆಗಬಹುದೆಂದು ಕುಟುಂಬಸ್ಥರು ಹೆದರಿದ್ದಾರೆ. ಹಾಗಾಗಿ, ಆತನಿಗೆ ಜೈಲಿನಿಂದ ಬಿಡುಗಡೆಯಾಗಲು ಅವಕಾಶ ನೀಡಲೇಬಾರದು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಶಾಸಕರು, ಪೊಲೀಸರಲ್ಲಿಗೆ ತೆರಳಿ, ಬಿಡುಗಡೆ ನೀಡದಂತೆ ಮನವಿ ಮಾಡಿದ್ದಾರೆ.

ಸೋದರತ್ತೆ ಸೇರಿ ನಾಲ್ವರನ್ನು ಸಾಯಿಸಿದ್ದ ಹಂತಕ

1994ರ ಫೆಬ್ರವರಿ 23ರಂದು ಪ್ರವೀಣ ತನ್ನ ಸೋದರತ್ತೆ ಅಪ್ಪಿ ಶೇರಿಗಾರ್ತಿ(75), ಆಕೆಯ ಮಗಳು ಶಕುಂತಳಾ(36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಶೇರಿಗಾರ್ತಿ ಅವರ ಮಗ ಗೋವಿಂದ (30) ಅವರನ್ನು ಕೊಲೆ ಮಾಡಿದ್ದ. ಮಂಗಳೂರಿನಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿದ್ದ ಉಪ್ಪಿನಂಗಡಿಯ ಪೆರಿಯಡ್ಕ ಮೂಲದ ಪ್ರವೀಣ, ಕೆಲವೊಮ್ಮೆ ವಾಮಂಜೂರಿನ ಅತ್ತೆ ಮನೆಗೆ ಹೋಗುತ್ತಿದ್ದ. ಹತ್ತು ದಿನಗಳ ಹಿಂದಷ್ಟೇ ಶಕುಂತಳಾ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜಯಂತ್ ಊರಿಗೆ ಬಂದಿದ್ದರು. ಪತ್ನಿ ಮತ್ತು ಮಗುವಿಗೆಂದು ಹತ್ತು ಪವನ್ ಚಿನ್ನದ ಆಭರಣಗಳನ್ನು ತಂದಿದ್ದು ಪ್ರವೀಣನಿಗೂ ಗೊತ್ತಾಗಿತ್ತು. ಜಂಯತ್ ಊರಿಗೆ ಬಂದು ಮತ್ತೆ ವಿದೇಶಕ್ಕೆ ಹಿಂತಿರುಗಿದ್ದರು. ಅದೇ ಸಂದರ್ಭದಲ್ಲಿ ಅತ್ತೆ ಮನೆಗೆ ತೆರಳಿದ್ದ ಪ್ರವೀಣ, ವೃದ್ಧೆಯಲ್ಲಿ ವಿದೇಶದಿಂದ ಬಂದಿದ್ದ ಜಯಂತ್ ಏನೆಲ್ಲ ತಂದಿದ್ದಾರೆ ಎಂದು ಕೇಳಿ ತಿಳಿದುಕೊಂಡಿದ್ದ.

ಸ್ವಂತ ಮಗನಂತಿದ್ದ ಪ್ರವೀಣನಿಗೆ ಅಜ್ಜಿ ಅಪ್ಪಿ ಎಲ್ಲವನ್ನೂ ಹೇಳಿಕೊಂಡಿದ್ದರು. ಅಲ್ಲದೆ, ಚಿನ್ನ ತಂದಿದ್ದನ್ನೂ ತೋರಿಸಿದ್ದರು. ಆ ಕಾಲಕ್ಕೆ ಹತ್ತು ಪವನ್ ಚಿನ್ನ ಅನ್ನುವುದು ದೊಡ್ಡ ಮೊತ್ತದ ಬಂಗಾರವಾಗಿತ್ತು. ಮೊದಲೇ ಸಿಂಗಲ್ ನಂಬರ್ ಲಾಟರಿ ಹುಚ್ಚಿಗೆ ಬಿದ್ದು ಎಲ್ಲವನ್ನೂ ಕಳಕೊಂಡಿದ್ದ ಮತ್ತು ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದ ಪ್ರವೀಣನಿಗೆ ಬಂಗಾರದ ಮೇಲೆ ಆಸೆಯಾಗಿತ್ತು. ಅದಕ್ಕಾಗಿ ಫೆಬ್ರವರಿ 23ರಂದು ಒಂದು ವಿಸ್ಕಿ ಬಾಟಲಿ ಹಿಡ್ಕೊಂಡೇ ತೆರಳಿದ್ದ. ಮನೆಗೆ ತೆರಳಿ ಅರ್ಧ ಕುಡಿದು, ಅತ್ತೆಗೂ ಕೊಟ್ಟು ಅರ್ಧ ಉಳಿಸಿಕೊಂಡಿದ್ದ. ರಾತ್ರಿ ಎಲ್ಲರೊಂದಿಗೆ ಊಟ ಮಾಡಿ ಮಲಗಿದ್ದ. ಹೊರಗಿನ ಚಾವಡಿಯಲ್ಲಿ ಭಾವ ಗೋವಿಂದ ಮತ್ತು ಪ್ರವೀಣ ಮಲಗಿದ್ದರೆ, ಒಳಗಿನ ಕೋಣೆಯಲ್ಲಿ ಶಕುಂತಳಾ ಮಲಗಿದ್ದರು. ಅಜ್ಜಿ ಅಪ್ಪಿ ಶೇರಿಗಾರ್ತಿ ಹಿಂಬಾಗಿಲ ಕೋಣೆಯಲ್ಲಿ ಮಲಗಿದ್ದರು.


ಒಬ್ಬೊಬ್ಬರನ್ನೇ ಕಟ್ಟಿಗೆ ತುಂಡಿನಲ್ಲಿ ಬಡಿದು ಕೊಂದಿದ್ದ

ನಡುರಾತ್ರಿಯಲ್ಲಿ ಎದ್ದವನೇ ಸಲಾಕೆಯಂತಿದ್ದ (ರೀಪು) ಕಟ್ಟಿಗೆಯನ್ನು ಹಿಡಿದು ಮೊದಲಿಗೆ ಗೋವಿಂದನ ತಲೆಗೆ ಒಡೆದು ಸಾಯಿಸಿದ್ದ. ಆನಂತರ, ಶಕುಂತಳಾ ತಲೆಗೆ ಬಡಿದಿದ್ದು, ಆಕೆ ಕಿರುಚಿದಾಗ ಜೊತೆಗೆ ಮಲಗಿದ್ದ ಮಗಳು ಎದ್ದಿದ್ದಳು. ಅಷ್ಟರಲ್ಲಿ 9 ವರ್ಷದ ಹುಡುಗಿಯ ತಲೆಗೂ ಅದೇ ರೀಪಿನಿಂದ ಬಡಿದು ಸಾಯಿಸಿದ್ದಾನೆ. ಕಿರುಚಾಟ ಕೇಳಿ ಹೊರಭಾಗದಿಂದ ಒಳಕ್ಕೆ ಬಂದ ಅಜ್ಜಿಯ ತಲೆಗೂ ಅದೇ ಇಟ್ಟಿಗೆ ತುಂಡಿನಿಂದ ಹೊಡೆದಿದ್ದು, ಎಲ್ಲರೂ ಒಂದೇ ಪೆಟ್ಟಿಗೆ ಸತ್ತು ಬಿದ್ದಿದ್ದಾರೆ. ಆನಂತರ, ಬೆಡ್ ಅಡಿಭಾಗದಲ್ಲಿ ಟಿಫಿನ್ ಬಾಕ್ಸ್ ನಲ್ಲಿಟ್ಟಿದ್ದ ಬಂಗಾರವನ್ನು ಮತ್ತು ಕಪಾಟಿನಲ್ಲಿದ್ದ 5 ಸಾವಿರ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದ. ಬೆಳಗ್ಗೆ ದಿನವೂ ಹಾಲು ಹಾಕಲು ಬರುತ್ತಿದ್ದ ವ್ಯಕ್ತಿ, ಮನೆಯ ಬಾಗಿಲೇನು ಓಪನಾಗಿದೆ ಎಂದು ಒಳಕ್ಕೆ ನೋಡಿದಾಗ ಚಾವಡಿಯಲ್ಲಿ ರಕ್ತದ ಮಡುವಿನಲ್ಲಿ ಗೋವಿಂದನ ಶವ ಇದ್ದುದು ಕಂಡುಬಂದಿದೆ. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ಸುದ್ದಿ ಹೋಗಿತ್ತು.

ಅತ್ಯಂತ ಭೀಭತ್ಸ ರೀತಿಯಲ್ಲಿ ನಾಲ್ವರನ್ನು ಕೊಂದು ಹಾಕಿದ್ದು ನೋಡಿ ಪೊಲೀಸರಿಗೆ ಮತ್ತು ಸ್ಥಳೀಯರಿಗೂ ಶಾಕ್ ಆಗಿತ್ತು. ಯಾವುದೇ ಸುಳಿವು ಇರಲಿಲ್ಲ. ಈಗಿನಂತೆ, ಮೊಬೈಲ್, ಸಿಸಿಟಿವಿಯೂ ಇರಲಿಲ್ಲ. ಶವವಾಗಿದ್ದ ಎಲ್ಲರ ಕಿವಿಯೋಲೆ, ಕುತ್ತಿಗೆಯಲ್ಲಿದ್ದ ಸರಗಳನ್ನೆಲ್ಲ ಕಿತ್ತುಕೊಂಡಿದ್ದರಿಂದ ಯಾರೋ ಚಿನ್ನಕ್ಕಾಗಿ ಕೊಲೆ ಮಾಡಿದ್ದಾರೆ ಅನ್ನೋದು ಗೊತ್ತಾಗಿತ್ತು. ಒಂದೊಂದು ಕೋಣೆಯಲ್ಲಿ ಸತ್ತು ಬಿದ್ದಿದ್ದ ನಾಲ್ವರ ಹೆಣಗಳು ಅಲ್ಲಿನ ರಕ್ತಸಿಕ್ತ ಸ್ಥಿತಿ ಸಂಬಂಧಿಕರನ್ನೆಲ್ಲ ಭಯಭೀತರನ್ನಾಗಿಸಿತ್ತು. ರಿಪ್ಪರ್ ಚಂದ್ರನ್ ಬಂದಿದ್ದಾನೋ ಎನ್ನುವಂಥ ಭಯ ಅಡರಿತ್ತು. ಪ್ರಕರಣದ ತನಿಖೆಗೆ ಮೂರು ಪೊಲೀಸ್ ತಂಡಗಳನ್ನು ಮಾಡಲಾಗಿತ್ತು. ಆಗ ಪಣಂಬೂರು ಎಸ್ಐ ಆಗಿದ್ದ ಜಯಂತ್ ಶೆಟ್ಟಿ ಅಪರಾಧ ಪ್ರಕರಣಗಳ ಭೇದಿಸುವುದರಲ್ಲಿ ನಿಷ್ಣಾತರಾಗಿದ್ದರು. ನಾಲ್ಕೇ ದಿನದಲ್ಲಿ ಆರೋಪಿಯನ್ನು ಹಿಡಿದು ಹಾಕಿದ್ದರು. ಯಾವುದೇ ಕ್ಲೂ ಇಲ್ಲದೆ, ಆರೋಪಿಯನ್ನು ಹಿಡಿದಿದ್ದೇ ರೋಚಕ ಕತೆ.

ಅಪ್ಪಿ ಶೇರಿಗಾರ್ತಿ ಅವರ ಹಿರಿಯ ಮಗ ಸೀತಾರಾಮ ಆಗ ಆಫ್ರಿಕಾದ ಜಾಂಬಿಯಾದಲ್ಲಿ ಕೆಲಸದಲ್ಲಿದ್ದರು. ತಾಯಿ, ತಂಗಿ, ತಮ್ಮ ಮತ್ತು ತಂಗಿಯ ಮಗಳನ್ನು ಭೀಕರವಾಗಿ ಕೊಂದು ಹಾಕಿದ್ದನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ. ಪೊಲೀಸರು ಆರೋಪಿಯೆಂದು ತನ್ನ ಮಾವನ ಮಗ ಪ್ರವೀಣನನ್ನು ತೋರಿಸಿದಾಗ ನಂಬುವುದಕ್ಕೂ ಆಗಲಿಲ್ಲ. ಯಾವತ್ತೂ ಮನೆಗೆ ಬಂದು ಉಳಿದುಕೊಂಡಿರುತ್ತಿದ್ದ ಪ್ರವೀಣ ಹೀಗೆ ಮಾಡಿದ್ದಾನೆ ಅಂದರೆ ನಂಬಲು ತಯಾರಿರಲಿಲ್ಲ. ಆದರೆ, ಸಂಕೋಚ ಸ್ವಭಾವದ ಪ್ರವೀಣ ಸಿಂಗಲ್ ನಂಬರ್ ಲಾಟರಿ ಹುಚ್ಚಿಗೆ ಬಿದ್ದಿರುವುದು, ಕುಡಿತದ ಚಟ ಅಂಟಿಸಿಕೊಂಡಿರುವುದು ತಿಳಿದಿತ್ತು. ಕೊನೆಗೆ, ಪ್ರವೀಣ ತಾನೇ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಾಗ, ಸಂಬಂಧಿಕರೆಲ್ಲ ಶಾಕ್ ಆಗಿದ್ದರು. ತಮ್ಮ ಕಣ್ಣನ್ನು ತಾವೇ ನಂಬದಾಗಿದ್ದರು. ಈ ಘಟನೆ ನಡೆದು 28 ವರ್ಷ ಕಳೆದಿದೆ. ಆಗ ಮಗು ಇದ್ದವರು ಈಗ ಬೆಳೆದು ದೊಡ್ಡವರಾಗಿದ್ದಾರೆ. ಆಗ ಒಂದೂವರೆ ವರ್ಷ ಇದ್ದ ಪ್ರವೀಣನ ಮಗನೂ ಬೆಳೆದು ನಿಂತಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ.

ಎಲ್ಲವನ್ನೂ ಮರೆತಿದ್ದೇವೆ ಎನ್ನುವಾಗಲೇ ಒಂದು ಕಾಲದಲ್ಲಿ ಇಡೀ ಮಂಗಳೂರನ್ನು ಬೆಚ್ಚಿ ಬೀಳಿಸಿದ್ದ ವಾಮಂಜೂರು ಪ್ರವೀಣ ಮತ್ತೆ ಬರುತ್ತಿದ್ದಾನೆ ಎನ್ನುವ ಸುದ್ದಿ ತಿಳಿದು ಕುಟುಂಬಸ್ಥರು ಸೇರಿದಂತೆ ವಾಮಂಜೂರು ಪ್ರದೇಶದ ನಿವಾಸಿಗಳು ಕೂಡ ಬೆದರಿದ್ದಾರೆ. ಹಣಕ್ಕಾಗಿ ಏನು ಮಾಡುವುದಕ್ಕೂ ಹೇಸದ ವ್ಯಕ್ತಿ ಇಲ್ಲಿ ಬರಲೇಬಾರದು ಎನ್ನುವ ಆಗ್ರಹ ಮುಂದಿಟ್ಟಿದ್ದಾರೆ. ಪ್ರವೀಣ ಮೂಲತಃ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿ. ಹೆತ್ತವರಿಗೆ 12 ಮಕ್ಕಳಲ್ಲಿ ಹಿರಿಯವನಾಗಿದ್ದ ಪ್ರವೀಣ. ಆತನ ತಂದೆ ಈಗಲೂ ಇದ್ದಾರೆ. ಎಲ್ಲರೂ ಜೊತೆಗಿದ್ದರೂ, ಪ್ರವೀಣನನ್ನು ಮಾತ್ರ ಮತ್ತೆ ಕುಟುಂಬಕ್ಕೆ ಸ್ವೀಕರಿಸುವುದಿಲ್ಲ ಎನ್ನುತ್ತಿದ್ದಾರೆ. ಅಂಥ ಮನುಷ್ಯತ್ವ ಹೀನ ವ್ಯಕ್ತಿ ಮತ್ತೆ ಬರಬಾರದು, ತಂದೆಯಂತೂ ಆತನ ಮುಖವನ್ನು ಮತ್ತೆ ನೋಡಲಾರೆ ಎನ್ನುತ್ತಾರೆ, ಅಂತಿದ್ದಾರೆ ಆತನ ತಮ್ಮಂದಿರು.

Mangalore The family members of prisoner Praveen Kumar Vamanjoor, who brutally murdered four members of his own family, including his aunt, in 1994 at Vamanjoor, opposed his release on grounds of good conduct from the central prison. “Praveen has been convicted to life imprisonment by the court. The family members of the victim approached us stating that he should not be released. This will be brought to the notice of the government and senior officers,” said police commissioner N Shashi Kumar.