ಪುತ್ತೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ? ಶಕುಂತಳಾ ಶೆಟ್ಟಿಗೋ, ಅಶೋಕ್ ರೈಗೋ ? ಕೆಪಿಸಿಸಿ ವೀಕ್ಷಕರಲ್ಲಿ ಆಕಾಂಕ್ಷಿಗಳು ಏನಂದ್ರು ?

27-12-22 06:35 pm       Giridhar Shetty, Mangaluru   ಕರಾವಳಿ

ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಕುತೂಹಲ ಉಂಟಾಗಿದೆ. ಸೋಮವಾರ ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆದಿತ್ತು. ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದವರನ್ನು ಕರೆದು ಕೆಪಿಸಿಸಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮಂಗಳೂರು, ಡಿ.27: ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಕುತೂಹಲ ಉಂಟಾಗಿದೆ. ಸೋಮವಾರ ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆದಿತ್ತು. ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದವರನ್ನು ಕರೆದು ಕೆಪಿಸಿಸಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಭೆಗೆ ಪುತ್ತೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ, ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅಶೋಕ್ ರೈ ಹಾಜರಾಗಿರುವುದು ಕುತೂಹಲ ಹೆಚ್ಚಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಯಾಗಿ 47 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಅಧಿವೇಶನದಲ್ಲಿದ್ದ ಯುಟಿ ಖಾದರ್ ಹೊರತುಪಡಿಸಿ 46 ಮಂದಿ ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಹಾಜರಾಗಿ ತಮ್ಮ ಅಭಿಪ್ರಾಯ ನೀಡಿದ್ದಾರೆ. ಪುತ್ತೂರು ಕ್ಷೇತ್ರಕ್ಕೆ 14 ಜನ ಅಭ್ಯರ್ಥಿಯಾಗಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ, ಅಶೋಕ್ ರೈ ಕೂಡ ಒಬ್ಬರು. ಈವರೆಗೂ 13 ಮಂದಿ ಮಾತ್ರ ಅರ್ಜಿ ಸಲ್ಲಿಸಿದವರು ಎನ್ನುವ ಮಾಹಿತಿಗಳಿದ್ದವು. ಆದರೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಕಡೆಯಿಂದ ಬಂದಿರುವ ಪಟ್ಟಿಯಲ್ಲಿ ಪುತ್ತೂರು ಕ್ಷೇತ್ರಕ್ಕೆ 14 ಅಭ್ಯರ್ಥಿಗಳ ಹೆಸರಿದ್ದು, ಅದರಲ್ಲಿ ಅಶೋಕ್ ರೈ ಅವರದ್ದೂ ಇದೆ. ಹಾಗಾಗಿ ಅಶೋಕ್ ರೈ ಅವರು ಒಂದು ತಿಂಗಳ ಮೊದಲೇ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಲ್ಲದೆ, ಬೆಂಗಳೂರಿನಲ್ಲಿ ಸದ್ದಿಲ್ಲದೇ ಟಿಕೆಟಿಗಾಗಿ ಅರ್ಜಿಯನ್ನೂ ಸಲ್ಲಿಸಿರುವುದು ಖಾತ್ರಿಯಾಗಿದೆ.

Madhu Bangarappa to join Congress on July 30 | Deccan Herald

Saleem Ahmed – Public TV

Voters did not consider works taken up by the Congress' - The Hindu

ಸೋಮವಾರ ಕೆಪಿಸಿಸಿ ಸೂಚನೆಯಂತೆ ಚುನಾವಣಾ ವೀಕ್ಷಕರಾಗಿ ಬಂದಿದ್ದ ಮಾಜಿ ಸಚಿವ ರೆಹಮಾನ್ ಖಾನ್, ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಂಗಳೂರಿನ ಕಚೇರಿಯಲ್ಲಿ ಟಿಕೆಟ್ ಆಕಾಂಕ್ಷಿತರ ಅಭಿಪ್ರಾಯ ಕೇಳಿದ್ದಾರೆ. ಪುತ್ತೂರು ಕ್ಷೇತ್ರದಿಂದ 14 ಮಂದಿಯೂ ಸಭೆಗೆ ಆಗಮಿಸಿದ್ದು, ಒಬ್ಬೊಬ್ಬರಾಗಿಯೇ ಈ ನಾಲ್ವರ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹೆಚ್ಚಿನವರು ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ನೀಡಿ, ಇಲ್ಲದಿದ್ದರೇ ತನಗೇ ಟಿಕೆಟ್ ನೀಡುವಂತೆ ತಮ್ಮ ಅಹವಾಲು ಹೇಳಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. 

ಈ ಹಿಂದೆ ಎರಡು ಬಾರಿ ಶಾಸಕರಾಗಿರುವ ಶಕುಂತಳಾ ಶೆಟ್ಟಿ ಅವರಿಗೆ ಈಗ 72 ವಯಸ್ಸು. ಹೀಗಾಗಿ ಅವರಿಗೆ ವಯಸ್ಸಾಯ್ತು ಅನ್ನುವುದು ಕೆಲವರ ಅಭಿಪ್ರಾಯಗಳಿವೆ. ಇದೇ ವೇಳೆ, ಬಿಜೆಪಿಯಿಂದ ಬಂದಿರುವ ಅಶೋಕ್ ರೈ ತಾವು ಪ್ರಬಲ ಆಕಾಂಕ್ಷಿ ಎನ್ನುವುದನ್ನು ತೋರಿಸಿದ್ದಾರೆ. ಅಲ್ಲದೆ, ಟಿಕೆಟ್ ಕೊಟ್ಟರೆ ತಾನೇ ಗೆಲ್ತೀನಿ ಅನ್ನುವುದನ್ನೂ ಕೆಪಿಸಿಸಿ ವೀಕ್ಷಕರ ಮುಂದೆ ಹೇಳಿದ್ದಾರೆ ಎನ್ನುವ ಮಾಹಿತಿಗಳಿವೆ. ಪುತ್ತೂರಿನಲ್ಲಿ ಬಂಟ ಮತ್ತು ಗೌಡ ಜನಾಂಗದ ಮತಗಳು ನಿರ್ಣಾಯಕ. ಹೀಗಾಗಿ ಗೌಡ ಸಮುದಾಯದಿಂದ ಸುಳ್ಯದ ಹಿರಿಯ ನಾಯಕ, ಕೆಪಿಸಿಸಿ ಸದಸ್ಯ ಧನಂಜಯ ಅಡ್ಪಂಗಾಯ ತನಗೆ ಟಿಕೆಟ್ ಕೊಡುವಂತೆ ಅಹವಾಲು ಮುಂದಿಟ್ಟಿದ್ದಾರೆ.

ಈ ಬಾರಿ ಅಭ್ಯರ್ಥಿ ಸ್ಥಾನ ನನಗೇ ನೀಡುವುದಾಗಿ ಶಕುಂತಲಾ ಶೆಟ್ಟಿ ಮಹಾಲಿಂಗೇಶ್ವರ ದೇವರ  ಮುಂದೆ ಪ್ರಮಾಣ ಮಾಡಿದ್ದಾರೆ: ಕಾವು ಹೇಮನಾಥ ಶೆಟ್ಟಿ - themangaloremirror.in

ಈ ಹಿಂದೆ ಕಾವು ಹೇಮನಾಥ ಶೆಟ್ಟಿ, ಅಶೋಕ್ ರೈಗೆ ಟಿಕೆಟ್ ನೀಡಬಾರದೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಕಾಸು ಕೊಟ್ಟು ಟಿಕೆಟ್ ನೀಡುವಂತಾಗಬಾರದು ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಟಾಂಗ್ ನೀಡಿದ್ದಕ್ಕಾಗಿ ಕಾವು ಹೇಮನಾಥ ಶೆಟ್ಟಿಗೆ ಪಕ್ಷದಿಂದ ಎಚ್ಚರಿಕೆ ನೋಟೀಸ್ ನೀಡಲಾಗಿತ್ತು. ಅಲ್ಲದೆ, ಅವರನ್ನು ಕೆಪಿಸಿಸಿ ಸಂಯೋಜಕ ಹುದ್ದೆಯಿಂದಲೂ ತೆಗೆದು ಹಾಕಲಾಗಿತ್ತು. ನಿನ್ನೆಯ ಸಭೆಯಲ್ಲಿ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ಪುತ್ತೂರು ಕ್ಷೇತ್ರದ ಟಿಕೆಟ್ ಬಯಸಿರುವ 14 ಮಂದಿಯೂ ಹಾಜರಾಗಿದ್ದು, ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮಾಹಿತಿ ಪ್ರಕಾರ, ಶಕುಂತಳಾ ಶೆಟ್ಟಿ ಅವರು ಕಣದಿಂದ ಹಿಂದೆ ಸರಿದು ಬೆಂಬಲ ನೀಡಿದರೆ ಅಶೋಕ್ ರೈಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

ಉಳಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ 16 ಮಂದಿ ಕೆಪಿಸಿಸಿ ಸದಸ್ಯರು, 16 ಬ್ಲಾಕ್ ಸದಸ್ಯರು ಸೇರಿದಂತೆ ಯೂತ್ ಕಾಂಗ್ರೆಸ್, ಎನ್ ಎಸ್ ಯುಐ, ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯರ ಅಹವಾಲನ್ನೂ ಕೆಪಿಸಿಸಿ ವೀಕ್ಷಕರು ಸಂಗ್ರಹಿಸಿದ್ದಾರೆ. ಯುವ ಘಟಕದ ಮಂದಿ ಹೆಚ್ಚಿನವರು ಯಾರಿಗೆ ಟಿಕೆಟ್ ಕೊಟ್ಟರೂ, ನಾವು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

Shakunthala Shetty or Ashok Rai to bag Puttur Congress Ticket this coming election, a political story by Headline Karnataka. Most chances of Ashok Rai bagging congress ticket from Puttur Constituency.