ಕಾಂತಾರ ರೀತಿಯಲ್ಲೇ ನೈಜ ಘಟನೆ ; ಜಾರಂದಾಯ ನೇಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಪೂಜಾರಿ ವಿಲ ವಿಲ ಒದ್ದಾಡಿ ಸಾವು ! ಮತ್ತೆ ಸದ್ದು ಮಾಡಿದ ದೈವದ ಕಾರಣಿಕ

07-01-23 03:03 pm       Udupi Correspondent   ಕರಾವಳಿ

​​​​ಕಾಂತಾರ ಸಿನಿಮಾದಲ್ಲಿ ದೈವದ ನುಡಿಯನ್ನು ಮೀರಿ ಜಾಗದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಕೋರ್ಟ್ ಮೆಟ್ಟಿಲಲ್ಲೇ ಸಾಯುವ ಕರುಣಾಜನಕ ದೃಶ್ಯ ಇತ್ತು. ಇಡೀ ಚಿತ್ರದಲ್ಲಿ ದೈವದ ಕಾರಣಿಕ ಸಾರುವ ಈ ದೃಶ್ಯ ಪ್ರೇಕ್ಷಕನ ಮನಸ್ಸನ್ನು ಹೆಚ್ಚು ನಾಟಿತ್ತು.

ಉಡುಪಿ, ಜ.7: ಕಾಂತಾರ ಸಿನಿಮಾದಲ್ಲಿ ದೈವದ ನುಡಿಯನ್ನು ಮೀರಿ ಜಾಗದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಕೋರ್ಟ್ ಮೆಟ್ಟಿಲಲ್ಲೇ ಸಾಯುವ ಕರುಣಾಜನಕ ದೃಶ್ಯ ಇತ್ತು. ಇಡೀ ಚಿತ್ರದಲ್ಲಿ ದೈವದ ಕಾರಣಿಕ ಸಾರುವ ಈ ದೃಶ್ಯ ಪ್ರೇಕ್ಷಕನ ಮನಸ್ಸನ್ನು ಹೆಚ್ಚು ನಾಟಿತ್ತು. ಇದೇ ಕಾರಣಕ್ಕೆ ಕರಾವಳಿಯ ದೈವದ ಕಾರಣಿಕ ಸಾರುವ ಕಾಂತಾರ ಸಿನಿಮಾ ದೇಶಾದ್ಯಂತ ಸದ್ದು ಮಾಡಿತ್ತು. ಆದರೆ ಇದೀಗ ಕಾಂತಾರ ಸಿನಿಮಾ ಮಾದರಿಯಲ್ಲೇ ಪಡುಬಿದ್ರಿಯಲ್ಲೊಬ್ಬರು ದೈವದ ನೇಮದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿ ಕೊಡಮಣಿತ್ತಾಯದ ದೈವದ ಎದುರಲ್ಲೇ ಕುಸಿದು ಬಿದ್ದು ವಿಲ ವಿಲ ಒದ್ದಾಡಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಕರಾವಳಿಯಲ್ಲಿ ದೈವದ ಪವಾಡ ಮತ್ತೆ ಚರ್ಚೆಯ ವಸ್ತುವಾಗಿದೆ.

ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲೂಕಿನ ಪಡುಹಿತ್ಲು ಎಂಬಲ್ಲಿ ಕಾರಣಿಕದ ಜಾರಂದಾಯ ದೈವಸ್ಥಾನ ಇದೆ. ನೂರಾರು ವರ್ಷಗಳ ಇತಿಹಾಸ ಇರುವ ಜಾರಂದಾಯ ದೈವದ ನೇಮವನ್ನು ಊರವರೆಲ್ಲ ಸೇರಿಕೊಂಡು ನಡೆಸುತ್ತಿದ್ದರು. 15 ವರ್ಷಗಳಿಂದ ಅದಕ್ಕೊಂದು ಸಮಿತಿಯನ್ನು ಮಾಡಿಕೊಂಡು ಜಾತಿ ಭೇದ ಮರೆತು ಪ್ರತಿ ವರ್ಷದ ದೈವದ ಉತ್ಸವ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಸಮಿತಿಯಲ್ಲಿ ಕೆಲವರ ನಡುವೆ ವೈಮನಸ್ಸು ಏರ್ಪಟ್ಟಿದ್ದು, ಮಾಜಿ ಅಧ್ಯಕ್ಷರಾಗಿದ್ದ ಪ್ರಕಾಶ್ ಶೆಟ್ಟಿ ಸಮಿತಿಯಲ್ಲಿ ತನ್ನ ಅಧ್ಯಕ್ಷ ಸ್ಥಾನವನ್ನು ತೆಗೆದು ಹಾಕಿದ್ದಕ್ಕೆ ವಿರೋಧ ನಿಂತಿದ್ದಾರೆ. ಹೀಗಾಗಿ ಸಮಿತಿಯನ್ನು ಬರ್ಖಾಸ್ತು ಮಾಡಿದ್ದೇವೆಂದು ಹೇಳಿ ತರವಾಡು ಮನೆಯ ಐದು ಜನರನ್ನು ಒಳಗೊಂಡ ಟ್ರಸ್ಟ್ ರಚಿಸಿದ್ದರು. ಅದರಲ್ಲಿ ಜಾರಂದಾಯ ದೈವದ ಪೂಜಾರಿಯಾಗಿದ್ದ ಜಯ ಪೂಜಾರಿ ಅವರನ್ನು ಅಧ್ಯಕ್ಷರಾಗಿ ಮಾಡಲಾಗಿತ್ತು. ಈ ರೀತಿ ಮಾಡಿದ್ದಕ್ಕೆ ಊರವರು ಮತ್ತು ಸಮಿತಿಯಲ್ಲಿದ್ದ ಹಲವರ ವಿರೋಧವೂ ಇತ್ತು. ಇದರ ನಡುವಲ್ಲೇ ಜನವರಿ 7ರಂದು ಜಾರಂದಾಯ ದೈವದ ನೇಮ ನಡೆಸುವುದಕ್ಕೆ ಸಮಿತಿಯ ಮುಖಂಡರು ನಿರ್ಧರಿಸಿದ್ದರು.

ಈ ಬೆಳವಣಿಗೆ ಮಧ್ಯೆ ಟ್ರಸ್ಟ್ ಅಧ್ಯಕ್ಷರಾಗಿದ್ದ ಜಯ ಪೂಜಾರಿ ಕೋರ್ಟ್ ಮೆಟ್ಟಿಲೇರಿದ್ದು, ಕಳೆದ ಡಿಸೆಂಬರ್ 23ರಂದು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು. ಸಡ್ಡಿಗೆ ಸಡ್ಡು ಅನ್ನುವಂತೆ ಜಾರಂದಾಯ ದೈವದ ನೇಮದ ಹೆಸರಲ್ಲಿ ಊರಿನ ಒಳಗಡೆಯೇ ಪರ- ವಿರೋಧ ಏರ್ಪಟ್ಟು ಎರಡು ತಂಡಗಳಾಗಿದ್ದವು. ಕೋರ್ಟಿನಿಂದ ತಡೆಯಾಜ್ಞೆ ಆದೇಶ ಬಂದಿದ್ದ ಮರುದಿನವೇ ಪಡುಹಿತ್ಲು ಬಳಿಯಲ್ಲೇ ಕೊಡಮಣಿತ್ತಾಯ ದೈವದ ನೇಮ ನಡೆದಿತ್ತು. ಅಲ್ಲಿಗೆ ಜಯ ಪೂಜಾರಿಯವರು ಕೂಡ ನೇಮ ನೋಡುವುದಕ್ಕೆ ಹೋಗಿದ್ದರು. ಅಲ್ಲಿನ ದೈವದ ನುಡಿ ಕೇಳುತ್ತಲೇ ಜಯ ಪೂಜಾರಿಯವರು ಕುಸಿದು ಬಿದ್ದಿದ್ದು ಎಲ್ಲರೆದುರಲ್ಲೇ ವಿಲ ವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ. ಅತ್ತ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಕ್ಕೂ, ಕೊಡಮಣಿತ್ತಾಯ ನೇಮದ ಕಣದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಜಯ ಪೂಜಾರಿ ಕುಸಿದು ಬಿದ್ದು ಸಾವನ್ನಪ್ಪಿದ್ದಕ್ಕೂ ತಾಳೆಯಾಗಿದ್ದು ದೈವದ ಕಾರಣಿಕದಿಂದಲೇ ಈ ರೀತಿ ಆಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಬಿಡದ ಪಟ್ಟು, ದೈವ ನರ್ತಕನಿಗೆ ಆಮಿಷ

ದೈವ ಕಾರಣಿಕ ತೋರಿಸಿದ್ದರೂ, ಪ್ರಕಾಶ್ ಶೆಟ್ಟಿ ಮತ್ತಿತರರು ತಮ್ಮ ಪಟ್ಟು ಸಡಿಲಿಸಿಲ್ಲ. ಜಾರಂದಾಯ ದೈವದ ಪಾತ್ರಧಾರಿ ಭಾಸ್ಕರ ಬಂಗೇರ ಅವರಿಗೆ ಹಣದ ಆಮಿಷ ಒಡ್ಡಿದ್ದು, ನೀನು ದೈವದ ಕಣದಲ್ಲಿ ಟ್ರಸ್ಟ್ ಪರವಾಗಿ ತೀರ್ಪು ಕೊಡಬೇಕೆಂದು ಒತ್ತಡ ಹೇರಿದ್ದಾರೆ. ಭಾಸ್ಕರ ಬಂಗೇರ, ತಾನು ದೈವದ ನಿಷ್ಠಾವಂತ ಭಕ್ತ. ದೈವ ಏನು ಚಿತ್ತ ಕೊಡುತ್ತಾನೋ ಅದನ್ನಷ್ಟೇ ಹೇಳಬಲ್ಲೆ. ನೀವು ಹೇಳಿದ ರೀತಿ ನಾನು ಹೇಳುವುದಕ್ಕೆ ಆಗಲ್ಲ. ನಾನು ಕುಸಿದು ಸತ್ತರೂ ನನಗೆ ಹೆದರಿಕೆ ಇಲ್ಲ ಎಂದು ಮಾಧ್ಯಮಕ್ಕೆ ಹೇಳಿದ್ದಾರೆ. ಇದರ ನಡುವೆಯೇ ಸಮಿತಿಯ ಪರವಾಗಿ ವಕೀಲರು ಕೋರ್ಟಿನಲ್ಲಿ ವಕಾಲತ್ತು ಮಾಡಿ, ಟ್ರಸ್ಟ್ ತಂದಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದ್ದಾರೆ.

ಜಾರಂದಾಯ ದೈವದ ಭಂಡಾರ ಮನೆಯು ಜಯಾಕ್ಷ ಸುವರ್ಣ ಎಂಬವರಿಗೆ ಸೇರಿದ್ದಾಗಿದ್ದು, ಅದೇ ಕುಟುಂಬದ ಜಯ ಪೂಜಾರಿಯವರು ಪ್ರಕಾಶ್ ಶೆಟ್ಟಿ ಜೊತೆ ಸೇರಿಕೊಂಡು ಸಮಿತಿಯನ್ನು ಬರ್ಖಾಸ್ತು ಮಾಡಿ ಟ್ರಸ್ಟ್ ಮೂಲಕ ನೇಮ ನಡೆಸಲು ಮುಂದಾಗಿದ್ದರು. ಡಿಸೆಂಬರ್ ತಿಂಗಳಲ್ಲಿ ಸಮಿತಿಯನ್ನು ತೆಗೆದು ಹಾಕಿದ್ದಾಗಿ ಹೇಳಿ, ಹೊಸತಾಗಿ ಟ್ರಸ್ಟ್ ಮಾಡಿದ್ದರು. ಇತ್ತ ಸಮಿತಿಯವರು ನಿರ್ಣಯಿಸಿ ಜನವರಿ 7ಕ್ಕೆ ಜಾರಂದಾಯ ನೇಮ ನಡೆಸುವುದಕ್ಕೆ ಮುಂದಾಗಿದ್ದರು. ಇದರ ನಡುವಲ್ಲೇ ದೈವದ ಪೂಜಾರಿಯಾಗಿದ್ದ ಜಯ ಪೂಜಾರಿ ಒದ್ದಾಡಿ ಸಾವು ಕಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವವು ನೀನು ಕೋರ್ಟಿಗೆ ಹೋಗು, ನಾನು ಕೋರ್ಟ್ ಮೆಟ್ಟಿಲಿನಲ್ಲೇ ತೀರ್ಪು ಕೊಡುತ್ತೇನೆ ಎಂದು ಹೇಳಿತ್ತು. ಅದೇ ಕತೆಯನ್ನು ಹೋಲುವ ನೈಜ ಘಟನೆ ಪಡುಬಿದ್ರೆಯಲ್ಲಿ ನಡೆದಿದ್ದು, ಇಡೀ ರಾಜ್ಯದಲ್ಲಿ ಮತ್ತೆ ತುಳುವರ ದೈವಾರಾಧನೆಯತ್ತ ಕಣ್ಣರಳಿಸುವಂತೆ ಮಾಡಿದೆ.

Udupi man dies after collapsing in court, by going against daivakola, kantara movie story effect. This incident near Paduhitlu in Udupi is similar to the story of Kantara movie. Prakash Shetty, who created a separate trust out of greed for power, will go to court later. Now he has collapsed and died.