ಶರಣ್ ಪಂಪ್ವೆಲ್ ಹೇಳಿಕೆ ಬಗ್ಗೆ ಗೊತ್ತಿಲ್ಲ, ಫಾಜಿಲ್ ಕುಟುಂಬಕ್ಕೂ ಪರಿಹಾರ ಸಿಗಬೇಕಿತ್ತು ; ಶಾಸಕ ಭರತ್ ಶೆಟ್ಟಿ 

31-01-23 10:19 pm       Mangalore Correspondent   ಕರಾವಳಿ

ಸುರತ್ಕಲ್ ನಲ್ಲಿ ಕೊಲೆಯಾದ ಫಾಜಿಲ್ ಕುಟುಂಬಕ್ಕೂ ಸರ್ಕಾರದ ಪರಿಹಾರ ಸಿಗಬೇಕಿತ್ತು. ಪರಿಹಾರ ಕೊಡಬೇಕಾದ ಲಿಸ್ಟ್ ನಲ್ಲಿ ಫಾಜಿಲ್ ಹೆಸರೂ ಇತ್ತು. ಯಾಕೆ ಪರಿಹಾರದ ಹಣ ಸಿಕ್ಕಿಲ್ಲ ಅನ್ನುವುದು ಗೊತ್ತಿಲ್ಲ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರು, ಜ.31: ಸುರತ್ಕಲ್ ನಲ್ಲಿ ಕೊಲೆಯಾದ ಫಾಜಿಲ್ ಕುಟುಂಬಕ್ಕೂ ಸರ್ಕಾರದ ಪರಿಹಾರ ಸಿಗಬೇಕಿತ್ತು. ಪರಿಹಾರ ಕೊಡಬೇಕಾದ ಲಿಸ್ಟ್ ನಲ್ಲಿ ಫಾಜಿಲ್ ಹೆಸರೂ ಇತ್ತು. ಯಾಕೆ ಪರಿಹಾರದ ಹಣ ಸಿಕ್ಕಿಲ್ಲ ಅನ್ನುವುದು ಗೊತ್ತಿಲ್ಲ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸಂವಾದದಲ್ಲಿ ಪಾಲ್ಗೊಂಡ ಶಾಸಕರಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಕ್ಕಂತೆ ಫಾಜಿಲ್ ಕುಟುಂಬಕ್ಕೆ ಯಾಕೆ ಪರಿಹಾರ ಸಿಕ್ಕಿಲ್ಲ ಎಂಬ ಪ್ರಶ್ನೆ ಹಾಕಲಾಯಿತು. ಪ್ರಶ್ನೆಗೆ ತಡವರಿಸಿದ ಶಾಸಕರು, ಪರಿಹಾರ ನೀಡುವ ಲಿಸ್ಟ್ ನಲ್ಲಿ ಫಾಜಿಲ್ ಹೆಸರೂ ಇತ್ತು ಎಂದರು. ನೀವು ಯಾಕೆ ಫಾಜಿಲ್ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ, ಕೊಲೆಯ ಸಂದರ್ಭದಲ್ಲಿ ಅಲ್ಲಿ ಉಂಟಾಗಿದ್ದ ಉದ್ವಿಗ್ನ ಸ್ಥಿತಿಯ ಅರಿವಿತ್ತು. ಜನರ ಆಕ್ರೋಶ ಇರುವಾಗ ಅಲ್ಲಿ ಭೇಟಿ ಕೊಟ್ಟು ತೊಂದರೆಗೆ ಸಿಲುಕುವುದು ಬೇಡ ಎಂದು ಹೋಗಿರಲಿಲ್ಲ. ಈ ಹಿಂದೆಯೂ ಕೊಲೆ ಸಂದರ್ಭದಲ್ಲಿ ಶಾಸಕರು ಭೇಟಿ ಕೊಟ್ಟಾಗ ಮುತ್ತಿಗೆ ಹಾಕಿದ್ದ ಮಾಹಿತಿ ಇದ್ದುದರಿಂದ ದೂರ ಉಳಿದಿದ್ದೆ ಎಂದರು.

ಫಾಜಿಲ್ ಕೊಲೆಯನ್ನು ಶರಣ್ ಪಂಪ್ವೆಲ್ ಸಮರ್ಥನೆ ಮಾಡಿದ್ದನ್ನು ನೀವು ಸಮರ್ಥಿಸುತ್ತೀರಾ ಎಂಬ ಪ್ರಶ್ನೆಗೆ, ನನಗೆ ಅದರ ಬಗ್ಗೆ ಮಾಹಿತಿಯಿಲ್ಲ. ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಅದರ ವಿಡಿಯೋವನ್ನು ನಾನು ನೋಡಿಲ್ಲ ಎಂದರು. ನಮ್ಮದೇ ಹುಡುಗರು ಕೊಲೆ ಮಾಡಿದ್ದೆಂದು ಸಮರ್ಥನೆ ಮಾಡಿದ್ದಾರೆ ಎಂದು ಗಮನ ಸೆಳೆದಾಗ, ನನಗೇನು ಗೊತ್ತಿಲ್ಲ. ಆ ಬಗ್ಗೆ ತಿಳಿಯದೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಕೇರಳದಲ್ಲಿ ಪಿಎಫ್ಐನಂತಹ ಸಂಘಟನೆಗಳ ನಾಯಕರು ಈ ರೀತಿಯ ಹೇಳಿಕೆ ಕೊಡುವುದು ಸಹಜ. ಅದೇ ರೀತಿ ಒಂದು ಸಂಘಟನೆಯಾಗಿ ಹೇಳಿಕೆ ಕೊಟ್ಟಿದ್ದಿರಬಹುದು ಎಂದು ಹೇಳಿದರು. ಹಾಗಾದರೆ, ಬಜರಂಗದಳ ಪಿಎಫ್ಐ ರೀತಿಯೇ ಎಂದು ಕೇಳಿದ್ದಕ್ಕೆ ಅಲ್ಲಲ್ಲಾ ಎಂದು ಜಾರಿಕೊಂಡರು.

ಪಚ್ಚನಾಡಿಯಲ್ಲಿ ಕೊಳಚೆ ನೀರು ಮರವೂರು ಅಣೆಕಟ್ಟು ಸೇರುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು. ಸ್ಥಳೀಯರು ಪ್ರತಿಭಟನೆ ನಡೆಸಿದರೂ, ಅಲ್ಲಿನ ಸಮಸ್ಯೆ ಬಗೆಹರಿಸಿಲ್ಲ ಯಾಕೆಂದು ಕೇಳಿದ್ದಕ್ಕೆ, ಆ ಬಗ್ಗೆ ನನ್ನ ಗಮನದಲ್ಲಿದೆ. ಆರು ತಿಂಗಳ ಹಿಂದೆಯೇ ಗಮನಕ್ಕೆ ಬಂದಿತ್ತು. ಅಣೆಕಟ್ಟು ನೀರು ಮೂಡುಬಿದ್ರೆ ಭಾಗಕ್ಕೆ ಹೋಗುತ್ತದೆ. ನಮ್ಮ ಕ್ಷೇತ್ರಕ್ಕೆ ಕುಡಿಯುವ ನೀರಾಗಿ ಕೊಡುವುದಿಲ್ಲ. ಅಲ್ಲದೆ, ಪಚ್ಚನಾಡಿಯ ಎಸ್ಟಿಪಿ ಸ್ಥಾವರ ಸರಿಪಡಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಅದನ್ನು ಸರಿಪಡಿಸುತ್ತಿದ್ದಾರೆ. ಅಲ್ಲದೆ, ಶುದ್ಧೀಕರಣಗೊಳಿಸಿದ ಕೊಳಚೆ ನೀರನ್ನು ಅಣೆಕಟ್ಟಿನಿಂದ ಕೆಳಭಾಗಕ್ಕೆ ಹರಿಯಲು ಪೈಪ್ ಲೈನ್ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಕೆಲಸ ಆಗಲಿದೆ ಎಂದರು.

Surathkal fazil murder, Fazil family should have received compensation from government says MLA Bharath Shetty.