ಪೊಲೀಸ್ ಆಯುಕ್ತರ ಕಚೇರಿಯಲ್ಲೇ ಸಿಸಿಟಿವಿ ಇಲ್ವಂತೆ ; ಆರ್ಟಿಐ ಉತ್ತರ ಮುಂದಿಟ್ಟು ಮಹಿಳೆಯ ತಪರಾಕಿ !

10-02-23 09:27 pm       Mangalore Correspondent   ಕರಾವಳಿ

ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸರ ಭ್ರಷ್ಟಾಚಾರ ಆರೋಪದ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರ ಅಹವಾಲು ಆಲಿಸಿದ್ದಾರೆ.

ಮಂಗಳೂರು, ಫೆ.10: ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸರ ಭ್ರಷ್ಟಾಚಾರ ಆರೋಪದ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರ ಅಹವಾಲು ಆಲಿಸಿದ್ದಾರೆ. ಕೆಲವು ಸಾಮಾಜಿಕ ಕಾರ್ಯಕರ್ತರು ಪೊಲೀಸರ ಲೋಪ, ಭ್ರಷ್ಟಾಚಾರಗಳ ಕುರಿತು ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಜನಜಾಗೃತಿ ವೇದಿಕೆಯ ಪವಿತ್ರಾ ಆಚಾರ್ಯ ಎಂಬವರು ಮಂಗಳೂರು ಕಮಿಷನರ್ ಕಚೇರಿಯ ಸಿಸಿಟಿವಿಯ ಬಗ್ಗೆ ಆರ್ಟಿಐ ಅರ್ಜಿ ಹಾಕಿದ್ದರು. ಜನವರಿ 31ರಂದು ಆರ್ಟಿಐ ಅರ್ಜಿ ಸಲ್ಲಿಸಿದ್ದು, ನಿಗದಿತ ದಿನಾಂಕದಂದು ಕಮಿಷನರ್ ಕಚೇರಿಗೆ ಬರುವ ಮತ್ತು ಹೊರಗೆ ಹೋಗುವ ವ್ಯಕ್ತಿಗಳ ಸಿಸಿಟಿವಿಯ ವಿಡಿಯೋ ಕೊಡಬೇಕೆಂದು ಕೇಳಿದ್ದರು. ಆದರೆ, ಕಮಿಷನರ್ ಕಚೇರಿಯಿಂದ ಫೆ.7ರಂದು ಅದಕ್ಕೆ ಹಿಂಬರಹ ಬಂದಿದ್ದು, ನಮ್ಮ ಕಟ್ಟಡದಲ್ಲಿ ಯಾವುದೇ ಸಿಸಿಟಿವಿ ಅಳವಡಿಸಿಲ್ಲದ ಕಾರಣ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಇದೇ ವಿಚಾರವನ್ನು ಸಾರ್ವಜನಿಕ ಅಹವಾಲು ಸಭೆಯಲ್ಲಿ ಪವಿತ್ರಾ ಆಚಾರ್ಯ, ಎಡಿಜಿಪಿ ಅಲೋಕ್ ಕುಮಾರ್ ಬಳಿ ಪ್ರಶ್ನೆ ಮಾಡಿದ್ದಾರೆ.

ಇದಲ್ಲದೆ, ಈ ಹಿಂದೆ ಸಾರ್ವಜನಿಕರಿಗೆ ಕಮಿಷನರ್ ಕಚೇರಿಯಲ್ಲಿ ಅಹವಾಲು ಹೇಳಿಕೊಳ್ಳಲು ಅವಕಾಶಗಳಿದ್ದವು. ಸಂದೀಪ್ ಪಾಟೀಲ್ ಕಮಿಷನರ್ ಆಗಿದ್ದಾಗ ಫೋನಿಂಗ್ ಕಾರ್ಯಕ್ರಮ ಇತ್ತು. ಮುಕ್ತವಾಗಿ ದೂರು ಹೇಳಲು ಅವಕಾಶ ಇತ್ತು. ಟಿ.ಆರ್ ಸುರೇಶ್ ಕಮಿಷನರ್ ಇದ್ದಾಗ ಅಪರಾಧ ತಡೆ ಮಾಸಾಚರಣೆ ಅಂತ ಕಾರ್ಯಕ್ರಮ ಮಾಡುತ್ತಿದ್ದರು. ಶಶಿಕುಮಾರ್ ಬಂದ ಬಳಿಕ ಸಾರ್ವಜನಿಕರ ಮಾತನಾಡುವ ಹಕ್ಕನ್ನೇ ಕಿತ್ತುಕೊಂಡಿದ್ದಾರೆ ಎಂದು ಪವಿತ್ರಾ ಆಚಾರ್ಯ ಆರೋಪ ಮಾಡಿದ್ದಾರೆ. ಇದಲ್ಲದೆ, ಠಾಣೆಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನೂ ಮಾಡುತ್ತಿಲ್ಲ. ಕಮಿಷನರ್ ಕಚೇರಿಯಲ್ಲಿ ಸಿಸಿಟಿವಿ ಇಲ್ಲದಿರುವುದು ಗಂಭೀರ ಲೋಪ ಎಂದು ಗಮನ ಸೆಳೆದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ನಮ್ಮ ವಿರುದ್ಧವೇ ಪೊಲೀಸರು ಕೇಸು ಹಾಕುವ ಸ್ಥಿತಿಯಿದೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ಸಾಥ್ ನೀಡ್ತಿದ್ದಾರಾ ಪೊಲೀಸ್ ?

ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್, ಗೋರಿಗುಡ್ಡ ವೆಲೆನ್ಸಿಯಾದಲ್ಲಿ ಕಳೆದ 2022ರ ಮಾರ್ಚ್ 7ರಂದು ಸಂಶಯಾಸ್ಪದ ಸಾವಿಗೀಡಾಗಿದ್ದ ವನಿತಾ ಎಂಬ ಮಹಿಳೆಯ ಸಾವಿನ ಬಗ್ಗೆ ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡದೆ ಸಾವನ್ನು ಮುಚ್ಚಿ ಹಾಕಲಾಗಿತ್ತು. ಪ್ರಕರಣದಲ್ಲಿ ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಿ ಕೈಯಾಡಿಸಿದ್ದಾರೆಂದು ಆರೋಪಿಸಿದ್ದಲ್ಲದೆ, ಈ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು. ಕಳೆದ ಮಾರ್ಚ್ 23ರಂದು ಎಂಸಿಸಿ ಬ್ಯಾಂಕಿನ ಭ್ರಷ್ಟಾಚಾರದ ವಿರುದ್ಧ ಸುದ್ದಿಗೋಷ್ಟಿ ನಡೆಸಿದ್ದು, ಅದಕ್ಕಾಗಿ ಪೊಲೀಸರೇ ನನಗೆ ಕಿರುಕುಳ ನೀಡಿದ್ದಾರೆ. ಬ್ಯಾಂಕಿನ ಅಧ್ವಾನಗಳ ಬಗ್ಗೆ ಖಾಸಗಿ ದಾವೆ ಹೂಡಿ ಎಫ್ಐಆರ್ ದಾಖಲಿಸುವಂತೆ ಮಂಗಳೂರು ಕೋರ್ಟಿನಿಂದ ಆದೇಶ ಆಗಿದ್ದರೂ, ಪೊಲೀಸರು ಕೇಸು ದಾಖಲಿಸಿಲ್ಲ. ವಿಳಂಬ ಧೋರಣೆ ಅನುಸರಿಸಿ ಬ್ಯಾಂಕಿಗೆ ಪೂರಕವಾಗಿ ವರ್ತಿಸಿದ್ದಾರೆಂದು ಎಡಿಜಿಪಿ ಗಮನಕ್ಕೆ ತಂದಿದ್ದಾರೆ. ಮತ್ತೊಬ್ಬರು ವೆಲೆನ್ಸಿಯಾದಲ್ಲಿ ನಾಯಿಗೆ ವಿಷ ಹಾಕಿ ಕೊಂದ ಪ್ರಕರಣದ ಬಗ್ಗೆ ಗಮನ ಸೆಳೆದು, ಪ್ರಕರಣದಲ್ಲಿ ಪೋಸ್ಟ್ ಮಾರ್ಟಂ ವರದಿ ಬಂದರೂ, ಪೊಲೀಸರು ಕೇಸು ದಾಖಲಿಸಲು ಮೀನ ಮೇಷ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಂಚವಟಿ ಸೊಸೈಟಿಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡರೂ, ತನಿಖೆ ನಡೆಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸೊಸೈಟಿ ಅಧ್ಯಕ್ಷರು, ನಿರ್ದೇಶಕರು ಭಾರೀ ಭ್ರಷ್ಟಾಚಾರ ನಡೆಸಿದ್ದು, ಮಂಗಳೂರಿನಲ್ಲಿ ನೂರಾರು ಮಂದಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ದೂರು ಕೊಟ್ಟರೆ ಪೊಲೀಸರು ತನಿಖೆ ನಡೆಸುತ್ತಿಲ್ಲ. ನಮ್ಮನ್ನೇ ತಪ್ಪಿತಸ್ಥರಾಗಿ ನೋಡುತ್ತಿದ್ದಾರೆಂದು ಎಂದು ಪಂಚವಟಿ ಸೊಸೈಟಿಯಿಂದ ಸಂತ್ರಸ್ತರಾದ ಮಹಿಳೆಯೊಬ್ಬರು ಎಡಿಜಿಪಿ ಗಮನಕ್ಕೆ ತಂದಿದ್ದಾರೆ.

Mangalore Woman activist Pavitra questions ADGP Alok Kumar on CCTV Cameras not being installed at the Police Commissioners office during the grievances meeting.